ಕೇವಲ ಅರ್ಧಗಂಟೆ ಮಳೆಗೆ ಬೆಂಗಳೂರು ಸ್ಥಿತಿ ಹೇಗಾಗಿದೆ ನೋಡಿ
ಬೆಂಗಳೂರು, ಜೂನ್ 7: ಬೆಂಗಳೂರಲ್ಲಿ ಗುರುವಾರ ರಾತ್ರಿ ಸುರಿದ ಮಳೆಗೆ ಅಕ್ಷರಶಃ ಬೆಂಗಳೂರನ್ನು ತೊಪ್ಪೆಯಾಗಿಸಿದೆ.
ಎಲ್ಲಿ ನೋಡಿದರೂ ಮರ ಉರುಳಿರುವುದು, ಟ್ರಾನ್ಸ್ಫಾರ್ಮರ್ ವಾಹನಗಳ ಮೇಲೆ ಬಿದ್ದಿರುವುದು, ವಿದ್ಯುತ್ ಕಂಬಗಳು ಧರೆಗುರಳಿರುವುದು, ಟ್ರಾಫಿಕ್ ಜಾಮ್ ನೋಡಿ ಅರ್ಧ ಗಂಟೆ ಮಳೆ ಎಷ್ಟೊಂದು ಅವಾಂತರವನ್ನು ಸೃಷ್ಟಿಸಿದೆ.
ಈ ಅರ್ಧಗಂಟೆಯ ಮಳೆ ಮಾಡಿರುವ ಅವಾಂತರವನ್ನು ಸರಿಪಡಿಸಲು ಒಂದು ದಿನ ಪೂರ್ತಿ ಬೆಸ್ಕಾಂ, ಬಿಬಿಎಂಪಿ ಸಿಬ್ಬಂದಿಗಳು ನಿಂತು ಕೆಲಸ ಮಾಡಿದರೂ ಸರಿಹೋಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಬಿರುಗಾಳಿ, ಗುಡುಗು ಸಹಿತ ಮಳೆಗೆ ಬೆಂಗಳೂರು ತೊಪ್ಪೆಯಾಗಿದೆ.
ಸಂಚಾರ ಪೊಲೀಸರು ಹಾಗೂ ಬೆಸ್ಕಾಂ ಸಿಬ್ಬಂದಿಗಳು ರಾತ್ರಿಪೂರ್ತಿ ವಿದ್ಯುತ್ ಕಂಬಗಳನ್ನು ಸರಿಪಡಿಸುವುದು, ಸುಗಮ ಸಂಚಾರಕ್ಕೆ ಅನುಕೂಲವಾಗುವಂತಹ ಎಲ್ಲಾ ಕ್ರಮಗಳನ್ನು ಕೈಗೊಂಡಿದ್ದರು. ಬಸವನಗುಡಿ, ಗಿರಿನಗರ, ಕೆಂಗೇರಿ, ಮಲ್ಲೇಶ್ವರ ಸೇರಿ ಹಲವೆಡೆ ಮರಗಳು ಧರೆಗುರುಳಿವೆ.

ರಾತ್ರಿಯಿಡೀ ಜನರ ಪರದಾಟ
ಪ್ಯಾಲೇಸ್ ರಸ್ತೆಯಲ್ಲಿ ಕಾರಿಗೆ ಬಸ್ ಡಿಕ್ಕಿಯಾದ ಪರಿಣಾಮ ಟ್ರಾಫಿಕ್ ಜಾಮ್ ಉಂಟಾಗಿ ವಾಹನ ಸವಾರರು ಪರದಾಡಿದರು. ಗಾಳಿಯ ರಭಸಕ್ಕೆ ಹಲವೆಡೆ ವಿದ್ಯುತ್ ಕಂಬಗಳು ನೆಲಕ್ಕೆ ಬಿದ್ದಿವೆ. ಡಬಲ್ ರೋಡ್ನಲ್ಲಿ ಬೃಹದಾಕಾರದ ಮರವೊಂದು ಚಲಿಸುತ್ತಿದ್ದ ಕಾರಿನ ಮೇಲೆ ಬಿದ್ದ ಪರಿಣಾಮ ಟ್ರಾಫಿಕ್ ಜಾಮ್ ಉಂಟಾಗಿತ್ತು.

ಹನುಮಂತನಗರದಲ್ಲಿ ಮನೆಗಳ ಮೇಲೆ ಬಿದ್ದ ಮರ
ಹನುಮಂತನಗರದಲ್ಲಿ ಬೃಹದಾಕಾರದ ಹಳೆಯ ಮರ ಎರಡು ಮನೆಗಳ ಮೇಲೆ ಬಿದ್ದು ಅನುಹುತ ಸೃಷ್ಟಿಸಿತ್ತು. ಅದೃಷ್ಠವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

ಅತಿ ಹೆಚ್ಚು ಮರಗಳು ಬಿದ್ದಿರುವುದೆಲ್ಲಿ?
ಗಿರಿನಗರ, ಚಾಮರಾಜಪೇಟೆ, ಆಶ್ರಮ, ಬಸವನಗುಡಿ, ಸೇರಿ ಬೆಂಗಳೂರು ದಕ್ಷಿಣ ಭಾಗದಲ್ಲಿ ಅತೀ ಹೆಚ್ಚು ಮರಗಳು ಧರೆಗುರುಳಿವೆ. ಹನುಮಂತನಗರದಲ್ಲಿ ಬೃಹದಾಕಾರದ ಹಳೆಯ ಮರ ಎರಡು ಮನೆಗಳ ಮೇಲೆ ಬಿದ್ದಿದ್ದು ಅದೃಷ್ಠವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ನೆಲಮಂಗಲ ತಾಲೂಕಿನ ನಿಡುವಂದ ಗ್ರಾಮದಲ್ಲಿ ರೈಲ್ವೇ ಹಳಿ ಮೇಲೆ ಮರದ ಕೊಂಬೆಗಳು ಬಿದ್ದಿದ್ದ ಕಾರಣ ಪರಿಣಾಮ ರಾಣಿ ಚನ್ನಮ್ಮ ಎಕ್ಸ್ ಪ್ರೆಸ್ ರೈಲು ತಡವಾಗಿ ಹೊರಟಿತ್ತು.

ಇನ್ನು ಯಾವ್ಯಾವ ಜಿಲ್ಲೆಯಲ್ಲಿ ಮಳೆಯಾಗಿದೆ?
ಇನ್ನು ಜಿಲ್ಲೆಗಳ ಕುರಿತು ನೋಡುವುದಾದರೆ ಉತ್ತರ ಕನ್ನಡ ಜಿಲ್ಲೆಯ ಕರಾವಳಿ ಭಾಗದಲ್ಲಿ ಮಳೆಯಾಗಿದೆ. ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನಲ್ಲಿ ಆಲಿಕಲ್ಲು ಮಳೆಯಾಗಿದೆ. ಜಿಲ್ಲೆಯ ಬಹುತೇಕ ಭಾಗದಲ್ಲಿ ಮಳೆ ಸುರಿದಿದೆ.












Click it and Unblock the Notifications