ಭಾನುವಾರ ರಜೆ ಪಡೆಯದ ವರುಣ ತಂದ ಅವಾಂತರಗಳು
ಬೆಂಗಳೂರು, ಅಕ್ಟೋಬರ್ 05 : ಮನೆಗಳಿಗೆ ನುಗ್ಗಿದ ನೀರು, ಅಪಾರ್ಟ್ಮೆಂಟ್ ನೆಲ ಮಹಡಿ ಜಲಾವೃತ, ನೀರಿನಲ್ಲಿ ಮುಳಗಿದ ಕಾರುಗಳು, ವೃದ್ಧಾಶ್ರಮಕ್ಕೆ ನುಗ್ಗಿದ ನೀರು, ಧರೆಗುರುಳಿದ ಮರಗಳು ಇವು ಉದ್ಯಾನ ನಗರಿ ಬೆಂಗಳೂರಿನಲ್ಲಿ ಭಾನುವಾರ ರಾತ್ರಿ ಮಳೆಯಿಂದಾದ ಅನಾಹುತಗಳು.
ರಾಜಧಾನಿಯಲ್ಲಿ ಭಾನುವಾರ ಮಧ್ಯಾಹ್ನ ಆರಂಭವಾದ ಮಳೆ ಸಂಜೆಯ ವೇಳೆಗೆ ಮತ್ತಷ್ಟು ಬಿರುಸಾಯಿತು. ರಾತ್ರಿಯ ತನಕ ಸುರಿದ ಮಳೆಯಿಂದಾಗಿ ತಗ್ಗು ಪ್ರದೇಶಗಳು ಜಲಾವೃತವಾದವು. ಹೆಣ್ಣೂರಿನ ಗೆದ್ದಲಹಳ್ಳಿಯಲ್ಲಿರುವ ಗುಣೇಲಾ ವೃದ್ಧಾಶ್ರಮ ಸಂಪೂರ್ಣವಾಗಿ ಜಲಾವೃತಗೊಂಡು ಅಲ್ಲಿದ್ದವರು ಪರದಾಡುವಂತಾಯಿತು.
ರಾತ್ರಿ ಸುರಿದ ಭಾರೀ ಮಳೆಗೆ ದೊಮ್ಮಲೂರು, ದೊಡ್ಡ ಬಾಣಸವಾಡಿ, ನಾರಾಯಣಪುರ, ಫಾತಿಮಾ ಬಡಾವಣೆ, ಬಿ.ಟಿ.ಎಂ ಬಡಾವಣೆ, ಮಾರುತಿನಗರ, ಎಚ್ಆರ್ ಬಿಆರ್ ಬಡಾವಣೆ 5ನೇ ಮುಖ್ಯರಸ್ತೆ, ಟಿ. ದಾಸರಹಳ್ಳಿ, ಪಂಚಶೀಲನಗರ ಮುಂತಾದ ಕಡೆಗಳಲ್ಲಿ ಮನೆಗಳಿಗೆ ನೀರು ನುಗ್ಗಿತು.
ಅಂದಹಾಗೆ ರಾಜ್ಯದಲ್ಲಿ ಶನಿವಾರ ಸಂಜೆ ಮತ್ತು ಭಾನುವಾರ ಸುರಿದ ಮಳೆಯಿಂದಾಗಿ ನಾಲ್ವರು ಮಹಿಳೆಯರು ಸೇರಿದಂತೆ 10 ಮಂದಿ ಮೃತಪಟ್ಟಿದ್ದಾರೆ. ಚಿತ್ರದುರ್ಗದಲ್ಲಿ ಮನೆಯ ಗೋಡೆ ಕುಸಿದು ಮಹಿಳೆ ಮೃತಪಟ್ಟಿದ್ದರೆ, ನವಲಗುಂದ ತಾಲೂಕಿನ ತುಪ್ಪರಿಹಳ್ಳದಲ್ಲಿ ರೈತನೊಬ್ಬ ಎತ್ತಿನ ಜೊತೆ ಕೊಚ್ಚಿ ಹೋಗಿದ್ದಾನೆ.
ನಿವಾಸಿಗಳ ಪರದಾಟ
ಮಳೆಯಿಂದಾಗಿ ಅಮರಜ್ಯೋತಿನಗರ ಮತ್ತು ಪಂಚಶೀಲನಗರದಲ್ಲಿನ ಅಪಾರ್ಟ್ಮೆಂಟ್ ನೆಲಮಹಡಿಯಲ್ಲಿ ನೀರು ತುಂಬಿದ್ದರಿಂದ ವಾಹನಗಳು ನೀರಿನಲ್ಲಿ ಮುಳುಗಿ ಹೋದವು. ಅಪಾರ್ಟ್ಮೆಂಟ್ನಿಂದ ಹೊರಬಲು ದಾರಿಯಿಲ್ಲದೇ ನಿವಾಸಿಗಳು ಪರದಾಡಿದರು.
ರಸ್ತೆಗಳಿ ಜಲಾವೃತ
ಒಳಚರಂಡಿ, ಮ್ಯಾನ್ಹೋಲ್, ರಾಜಕಾಲುವೆಗಳು ತುಂಬಿ ಹರಿದಿದ್ದರಿಂದ ರಸ್ತೆಗಳು ಜಲಾವೃತವಾಗಿದ್ದವು. ಇದರಿಂದಾಗಿ ವಾಹನಗಳ ಸಂಚಾರಕ್ಕೆ ತೊಂದರೆ ಉಂಟಾಯಿತು. ರಾಜಗೋಪಾಲನಗರ, ಶ್ರೀನಗರ, ಕೋರಮಂಗಲ, ಇಂದಿರಾನಗರ ಮತ್ತು ನೃಪತುಂಗ ರಸ್ತೆಯಲ್ಲಿ ಮರಗಳು ಧರೆಗುರುಳಿದವು.
ಯಾಕೆ ಸುರಿಯುತ್ತಿದೆ ಮಳೆ?
ಬಂಗಾಳಕೊಲ್ಲಿಯಲ್ಲಿ ಆಂಧ್ರ ಕರಾವಳಿಯಿಂದ ಒಡಿಸ್ಸಾವರೆಗೆ ಮೇಲ್ಮೈ ಸುಳಿಗಾಳಿ ಉಂಟಾಗಿದೆ. ಇದರಿಂದಾಗಿ ಪೂರ್ವದಿಂದ ಪಶ್ಚಿಮಕ್ಕೆ ಮತ್ತು ಪಶ್ಚಿಮದಿಂದ ಪೂರ್ವಕ್ಕೆ ಗಾಳಿ ಬೀಸುತ್ತಿರುವುದರಿಂದ ಎರಡೂ ಕಡೆಯ ಸಮುದ್ರದಲ್ಲಿ ತೇವಾಂಶ ಹೆಚ್ಚಾಗಿ ಮಳೆ ಸುರಿಯುತ್ತಿದೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ. ಇದರಿಂದಾಗಿ ಕರಾವಳಿ ಮತ್ತು ರಾಜ್ಯದ ಇತರ ಭಾಗಗಳಲ್ಲಿ ಮಳೆಯಾಗುತ್ತಿದೆ.
2 ದಿನದ ಮಳೆಗೆ 10 ಸಾವು
ಬೆಂಗಳೂರು ಮಾತ್ರವಲ್ಲದೇ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಶನಿವಾರ ರಾತ್ರಿ ಹಾಗೂ ಭಾನುವಾರ ಸುರಿದ ಮಳೆಗೆ 10 ಮೃತಪಟ್ಟಿದ್ದಾರೆ. ಹೈದರಾಬಾದ್ ಕರ್ನಾಟಕದಲ್ಲಿ ಸಿಡಿಲು ಬಡಿದು 5 ಜನರು ಸಾವನ್ನಪ್ಪಿದ್ದಾರೆ. ನವಲಗುಂದ ತಾಲ್ಲೂಕಿನ ತುಪ್ಪರಿ ಹಳ್ಳದಲ್ಲಿ ರೈತನೊಬ್ಬ ಎತ್ತಿನ ಜೊತೆಗೆ ಕೊಚ್ಚಿಕೊಂಡು ಹೋಗಿದ್ದಾನೆ.
ವಿವಿಧ ಜಿಲ್ಲೆಗಳಲ್ಲಿ ಮಳೆ
ದಾವಣಗೆರೆಯ ಚನ್ನಗಿರಿ ತಾಲೂಕಿನಲ್ಲಿ ಸುರಿದ ಮಳೆಗೆ ಮೆಕ್ಕೆಜೋಳದ ಬೆಳೆಗೆ ಹಾನಿಯಾಗಿದೆ. ಮೈಸೂರು, ಮಡಿಕೇರಿ, ಮಂಡ್ಯ ಜಿಲ್ಲೆಯ ಮದ್ದೂರು ಮುಂತಾದ ಕಡೆ ಭಾನುವಾರ ಮಳೆ ಸುರಿದಿದೆ. ಮದ್ದೂರಿನಲ್ಲಿ 6, ದೇವರಹಿಪ್ಪರಗಿಯಲ್ಲಿ 4, ಪಣಂಬೂರು, ಕೋಟ, ಪಾವಗಡದಲ್ಲಿ 3, ಆಗುಂಬೆ, ಗುಡಿಬಂಡೆಯಲ್ಲಿ 2, ಬಂಟ್ವಾಳ, ಮಾಣಿ, ಕಾರ್ಕಳದಲ್ಲಿ 1 ಸೆಂ.ಮೀ ಮಳೆಯಾಗಿದೆ.
48 ಗಂಟೆಯ ಮಳೆ ಮುನ್ಸೂಚನೆ
ರಾಜ್ಯದಲ್ಲಿ ಮಂದಿನ 48 ಗಂಟೆಗಳಲ್ಲಿ ಕರಾವಳಿ ಮತ್ತು ದಕ್ಷಿಣ ಒಳನಾಡಿನ ಹಲವೆಡೆ ಹೆಚ್ಚು ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಅ. 5 ರಿಂದ 7ರವರೆಗೆ ಕರಾವಳಿ, ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಹೆಚ್ಚು ಮಳೆ ಸುರಿಯುವ ಸಂಭವವಿದೆ. ಅ. 8 ಮತ್ತು 9 ರಂದು ದಕ್ಷಿಣ ಒಳನಾಡಿನಲ್ಲಿ ಮಳೆಯಾಗಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.