ಬೆಂಗಳೂರಲ್ಲಿ 2 ಗಂಟೆ ಗುಡುಗು ಸಹಿತ ಭಾರೀ ಮಳೆ; ಅವಾಂತರ ಸೃಷ್ಟಿ
ಬೆಂಗಳೂರು, ಅಕ್ಟೋಬರ್ 04; ಭಾನುವಾರ ರಾತ್ರಿ ಸುಮಾರು 2 ಗಂಟೆಗಳ ಕಾಲ ಬೆಂಗಳೂರು ನಗರದಲ್ಲಿ ಸುರಿದ ಮಳೆ ಅವಾಂತರ ಸೃಷ್ಟಿಸಿದೆ. ತಗ್ಗು ಪ್ರದೇಶಗಳು ಜಲಾವೃತಗೊಂಡು, ಹಲವು ಬಡಾವಣೆಗಳಲ್ಲಿ ಮನೆಗಳಿಗೆ ನೀರು ನುಗ್ಗಿ ಜನರು ಪರಿದಾಡಿದರು.
ಭಾನುವಾರ ರಾತ್ರಿ 10 ಗಂಟೆ ಸುಮಾರಿಗೆ ಗುಡುಗು, ಸಿಡಿಲಿನ ಆರ್ಭಟದ ಜೊತೆ ಆರಂಭವಾದ ಮಳೆ 12 ಗಂಟೆ ತನಕ ಸುರಿದಿದೆ. ಹೆಬ್ಬಾಳ, ಕುರುಬರಹಳ್ಳಿ, ಪೈಪ್ಲೈನ್ ರಸ್ತೆ, ಸಂಪಂಗಿರಾಮನಗರ, ಹಳೆ ವಿಮಾನ ನಿಲ್ದಾಣ ರಸ್ತೆ, ರಿಚ್ಮಂಡ್ ಟೌನ್ ಸೇರಿದಂತೆ ಹಲವು ಬಡಾವಣೆಗಳಲ್ಲಿ ಮಳೆ ಅವಾಂತರ ಸೃಷ್ಟಿ ಮಾಡಿತು.
ಮೆಜೆಸ್ಟಿಕ್, ಚಾಮರಾಜಪೇಟೆ, ಹನುಂತನಗರ, ಅಶೋಕನಗರ, ಮಲ್ಲೇಶ್ವರಂ, ರಾಜಾಜಿನಗರ, ಜಯನಗರ, ಬನಶಂಕರಿ, ಜೆ. ಪಿ. ನಗರ, ಮೈಕೋ ಲೇಔಟ್ ಮುಂತಾದ ಪ್ರದೇಶಗಳಲ್ಲಿ ಎರಡು ಗಂಟೆಗಳ ಕಾಲ ಧಾರಾಕಾರ ಮಳೆಯಾಗಿದೆ.

ಜೆ. ಸಿ. ನಗರದಲ್ಲಿ ಗೋದಾಮಿಗೆ ನೀರು ನುಗ್ಗಿತ್ತು. ಸಂಪಂಗಿರಾಮನಗರದಲ್ಲಿ ಮನೆಗಳಿಗೆ ನೀರು ನುಗ್ಗಿತು. ರಾತ್ರಿ ಇಡೀ ಜನರು ನೀರನ್ನು ಹೊರ ಹಾಕುತ್ತಾ ಕಾಲ ಕಳೆಯುವಂತಾಯಿತು. ಆರ್. ಆರ್. ನಗರದ ಐಡಿಯಲ್ ಹೋಮ್ಸ್ ಬಡಾವಣೆಗೆ ರಾಜಾ ಕಾಲುವೆ ನೀರು ನುಗ್ಗಿದೆ.
Widespread moderate to heavy rain reported across #Bengaluru.
— Bengaluru Weather (@BngWeather) October 3, 2021
Some of the latest rainfall figures are
Nagarabhavi - 113 mm
Rajajinagar - 107 mm
Nandini layout - 85.5 mm
Lakkasandra - 68 mm
Marathahalli - 63 mm
City IMD - 62 mm
Koramangala - 54 mm#BengaluruRains#Karnataka
ಹೆಚ್. ಎ. ಎಲ್. ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಳೆ ಭಾರೀ ಹಾನಿ ಮಾಡಿದೆ. ಹೆಚ್. ಎ. ಎಲ್. ಬಳಿಯ ರಮೇಶ್ ನಗರದಲ್ಲಿ ಕಾಪೌಂಡ್ ಕುಸಿದು ಬಿದ್ದಿದೆ. ಇದರಿಂದಾಗಿ 4 ಕಾರು, 3 ಆಟೋ ಸೇರಿದಂತೆ 10ಕ್ಕೂ ಹೆಚ್ಚು ವಾಹನಗಳು ಜಖಂಗೊಂಡವು.
ಕುರುಬರಹಳ್ಳಿ ಪೈಪ್ ಲೈನ್ ರಸ್ತೆಯಲ್ಲಿ ಮಳೆ ನೀರು ಮನೆಗಳಿಗೆ ನುಗ್ಗಿತು. ನಾಗರಭಾವಿಯ ಬಿಡಿಎ ಲೇಔಟ್, ಮಲ್ಲತ್ತಹಳ್ಳಿ, ರಾಮಮೂರ್ತಿ ನಗರ ಮುಂತಾದ ಪ್ರದೇಶಗಳಲ್ಲಿಯೂ ಮನೆಗಳಿಗೆ ನೀರು ನುಗ್ಗಿದೆ. ಜನರು ರಾತ್ರಿ ಇಡೀ ಪರದಾಟ ನಡೆಸಿದರು.
ಬಿಬಿಎಂಪಿ ಕೇಂದ್ರ ಕಚೇರಿ ಹಿಂದಿನ ರಸ್ತೆಯ ತಗ್ಗು ಪ್ರದೇಶಗಳಲ್ಲಿ ನೀರು ನುಗ್ಗಿತ್ತು. ಬಿಬಿಎಂಪಿ ಕಚೇರಿ ಮತ್ತು ಸಹಾಯವಾಣಿಗೆ ಕರೆ ಮಾಡಿದರೆ ಯಾರೂ ಸಹ ಸಹಾಯಕ್ಕೆ ಬರಲಿಲ್ಲ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಎಲ್ಲಿ, ಎಷ್ಟು ಮಳೆ; ಭಾನವಾರ ರಾತ್ರಿ 11.50 ಸುಮಾರಿಗೆ ದಾಖಲಾದ ಮಾಹಿತಿಯಂತೆ ನಾಗರಭಾವಿ 113 ಮಿ. ಮೀ., ರಾಜಾಜಿನಗರ 107 ಮಿ. ಮೀ., ನಂದಿನಿ ಲೇಔಟ್ 85.5 ಮಿ. ಮೀ., ಲಕ್ಕಸಂದ್ರ 68 ಮಿ. ಮೀ., ಮಾರತ್ಹಳ್ಳಿ 63 ಮಿ. ಮೀ. ಕೋರಮಂಗಲ 54 ಮಿ. ಮೀ. ಮಳೆಯಾಗಿದೆ.
ಇಂದು ಮಳೆ ಮುನ್ಸೂಚನೆ; ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದಿಂದಾಗಿ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಮಳೆಯಾಗುತ್ತಿದೆ. ಇನ್ನೂ ಮೂರು ದಿನಗಳ ಕಾಲ ರಾಜ್ಯದಲ್ಲಿ ಮಳೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಕರ್ನಾಟಕದಲ್ಲಿ ನೈಋತ್ಯ ಮುಂಗಾರು ಈಗಾಗಲೇ ಅಂತ್ಯಗೊಂಡಿದೆ. ಆದರೆ ಚಂಡಮಾರುತದ ಪ್ರಭಾವದಿಂದ ಇನ್ನೂ ಮೂರು ದಿನ ಮಳೆಯಾಗಲಿದೆ. ಅಕ್ಟೋಬರ್ 5 ಮತ್ತು 6ರಂದು ಮಳೆ ಹೆಚ್ಚಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.
ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಬೀದರ್, ಕೊಪ್ಪಳ, ರಾಯಚೂರು, ಕಲಬುರಗಿ, ಧಾರವಾಡ, ಗದಗ ಜಿಲ್ಲೆಗಳಲ್ಲಿ ಸೋಮವಾರ ಸಾಧಾರಣ ಮಳೆಯಾಗಲಿದೆ.
ಹಾಸನ, ಶಿವಮೊಗ್ಗ, ಚಿಕ್ಕಮಗಳೂರು, ಮೈಸೂರು, ಮಂಡ್ಯ, ಚಾಮರಾಜನಗರ ಜಿಲ್ಲೆಗಳಲ್ಲಿ ಅಕ್ಟೋಬರ್ 5 ಮತ್ತು 6 ರಂದು ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ.
ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಹಾಸನ, ಚಿಕ್ಕಮಗಳೂರು, ಮಂಡ್ಯ, ರಾಮನಗರ, ಚಾಮರಾಜನಗರ ಜಿಲ್ಲೆಗಳಲ್ಲಿ ಅಕ್ಟೋಬರ್ 6ರಂದು ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ.












Click it and Unblock the Notifications