ಬೆಂಗಳೂರು ಮಳೆ ಅವಾಂತರ: ಕೆಂಗೇರಿ-ವಂಡರ್ಲಾ ನಡುವಿನ ಸಂಚಾರ ಅಸ್ತವ್ಯಸ್ತ
ಕಳೆದ ಕೆಲ ದಿನಗಳಿಂದ ಬೆಂಗಳೂರು ಸೇರಿದಂತೆ ಹಲವೆಡೆ ಅಧಿಕ ಮಳೆಯಾಗುತ್ತಿದ್ದು ಹೆದ್ದಾರಿಯಲ್ಲೂ ಸಂಚಾರಕ್ಕೆ ಜನ ಪರದಾಡುವಂತಾಗಿದೆ. ನಿನ್ನೆ ಸುರಿದ ಭಾರಿ ಮಳೆಗೆ ಕಣ್ಮನಿಕೆ ಕೆರೆ ತುಂಬಿ ಹರಿಯುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಕೆಂಗೇರಿ-ವಂಡರ್ಲಾ ನಡುವಿನ ಸಂಚಾರ ಅಸ್ತವ್ಯಸ್ತವಾಗಿದೆ. ಇದರಿಂದಾಗಿ ವಾಹನ ಸವಾರರು ಗಂಟೆಗಟ್ಟೆಲೆ ಕಾಯುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಬೆಂಗಳೂರು ಮಹಾನಗರ ಪಾಲಿಕೆ ಗುಂಡಿಗಳಿಗೆ ಕೋಟಿ ಕೋಟಿ ಹಣ ಹಾಕಿದರೂ ಭರ್ತಿಯಾಗಿಲ್ಲ. ಈಗ ಮಳೆ ಸಹ ಆರಂಭವಾಗಿದ್ದು, ಎಲ್ಲಿ ಗುಂಡಿಗಳಿವೆ ಎಂಬುವುದೇ ದ್ವಿಚಕ್ರ ವಾಹನ ಸವಾರರಿಗೆ ತಿಳಿಯದಂತಾಗಿದೆ. ಗುರುವಾರ ಸಂಜೆಯಿಂದಲೇ ಬೆಂಗಳೂರಿನ ಮೇಲೆ ವರುಣನ ಕೃಪೆ ಉಂಟಾಗಿದೆ. ಸಂಜೆ ಆಗುತ್ತಿದ್ದಂತೆ ಮಳೆ ಪ್ರಮಾಣ ಏರಿಕೆಯಾಗುತ್ತಿದೆ. ಶುಕ್ರವಾರ ತಡರಾತ್ರಿ ಬೆಂಗಳೂರಿನ ಬಹುತೇಕ ಭಾಗಗಳಲ್ಲಿ ಭಾರೀ ಮಳೆಯಾಗಿದೆ. ರಸ್ತೆಗಳು ಕೆರೆಗಳಂತಾಗಿವೆ. ಮತ್ತೊಂದೆಡೆ ಕೆಲ ಅಂಡರ್ ಪಾಸ್ಗಳು ಜಲಾವೃತಗೊಂಡಿವೆ.
ಲಾಲ್ಬಾಗ್, ಸೌಂತ್ ಎಂಡ್ ಸರ್ಕಲ್, ಜೆ ಸಿ ರಸ್ತೆ, ಜಯನಗರ, ಶಾಂತಿನಗರ ಸುತ್ತಮುತ್ತ ವರುಣ ಅಬ್ಬರಿಸಿದ್ದಾನೆ. ಒಂದು ಗಂಟೆ ಸುರಿದ ಮಳೆಯಿಂದ ಕೆಲವು ಕಡೆ ರಸ್ತೆಗಳ ಮೇಲೆ ಮೂರರಿಂದ ನಾಲ್ಕು ಅಡಿಗಳಷ್ಟು ನೀರು ಶೇಖರಣೆಗೊಂಡಿದೆ. ಬಿಟಿಎಂ ಲೇಔಟ್ ಬಿಳೇಕಹಳ್ಳಿಯ ಅನುಗ್ರಹ ಬಡಾವಣೆಯ ಎರಡು ರಸ್ತೆಗಳಲ್ಲಿ ನೀರು ತುಂಬಿದೆ. ಚರಂಡಿಯಲ್ಲಿ ಬ್ಲಾಕ್ ಆಗಿ ರಸ್ತೆ ಮೇಲೆ ನೀರು ನಿಂತಿದೆ. ಅದೃಷ್ಟವಶಾತ್ ಮನೆಗಳಿಗೆ ನೀರು ನುಗ್ಗಿಲ್ಲ.
ರಸ್ತೆಯಲ್ಲಿ ನೀರು ನಿಂತ ಕೂಡಲೇ ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ದಳ ಸಿಬ್ಬಂದಿ ಪಂಪ್ ಮೂಲಕ ನೀರನ್ನು ತೆರವು ಮಾಡುವ ಕೆಲಸ ಮಾಡಿದ್ದಾರೆ. ರಾಜಧಾನಿ ಬೆಂಗಳೂರಿನಲ್ಲಿ ಗರಿಷ್ಠ 26 ಮತ್ತು ಕನಿಷ್ಠ 19 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಲಿದೆ. ಕಳೆದ ಎರಡು ದಿನಗಳಿಂದ ನಗರದಲ್ಲಿ ಮಳೆಯಾಗುತ್ತಿದೆ. ಹವಾಮಾನ ಇಲಾಖೆ ಯಾವುದೇ ಆಲರ್ಟ್ ಘೋಷಣೆ ಮಾಡಿಲ್ಲ.