ಎಲ್ಲೆಲ್ಲೂ ನೀರೇ ನೀರು: ಮಳೆ ಮೂಡ್ ಕಳೆದುಕೊಂಡ ಬೆಂಗಳೂರು ಮಂದಿ
ಬೆಂಗಳೂರು ಮೇ 18: ಕಳೆದ ರಾತ್ರಿಯಿಂದ ಬೆಂಗಳೂರಿನ ಹಲವು ಭಾಗಗಳಲ್ಲಿ ಧಾರಾಕಾರ ಮಳೆಯಾಗುತ್ತಿದ್ದು ಜನ ಜೀವನ ಅಸ್ತವ್ಯಸ್ಥಗೊಂಡಿದೆ. ರಸ್ತೆಗಳ ಮೇಲೆ ಮಳೆ ನೀರು ನುಗ್ಗಿ ಬೆಳಗ್ಗೆ ಕಚೇರಿಗೆ ತೆರಳುವ ಜನರಿಗೆ ಕಿರಿಕಿರಿಯನ್ನುಂಟು ಮಾಡಿದೆ. ಮಾತ್ರವಲ್ಲದೆ ರಾತ್ರಿಯಿಂದ ಸುರಿದ ಭಾರೀ ಮಳೆಗೆ ತಗ್ಗು ಪ್ರದೇಶಗಳ ಮನೆಗಳಿಗೆ ನೀರು ನುಗ್ಗಿ ರಾತ್ರಿಯಿಡೀ ಜನ ನಿದ್ದೆಗೆಟ್ಟು ಕುಳಿತುಕೊಳ್ಳುವ ಪರಿಸ್ಥಿತಿ ಎದುರಾಗಿದೆ. ಕಾಲುವೆ, ಚರಂಡಿ ನೀರು ಉಕ್ಕಿ ಹರಿಯುತ್ತಿದ್ದು ಜನ ಬಿಬಿಎಂಪಿಗೆ ಹಿಡಿಶಾಪ ಹಾಕುತ್ತಿದ್ದಾರೆ.
ಬೆಂಗಳೂರಿನ ಜಯನಗರ, ಶಾಂತಿನಗರ, ಮೈಸೂರು ರಸ್ತೆ, ಮಾಗಡಿ ರಸ್ತೆ ಸೇರಿದಂತೆ ಹಲವು ಭಾಗಗಳಲ್ಲಿ ಮಳೆ ಸುರಿಯುತ್ತಿದೆ. ಕಳೆದ ಒಂದು ವಾರದಿಂದ ಬೆಂಗಳೂರಿನ ಹವಾಮಾನ ವೈಪರಿತ್ಯಕ್ಕೆ ಸಿಲಿಕಾನ್ ಸಿಟಿಯ ಜನರು ತಂಡಾ ಹೊಡೆಯುತ್ತಿದ್ದಾರೆ. ಅಷ್ಟೇ ಅಲ್ಲದೇ ಧಾರಾಕಾರ ಮಳೆ ಹಿನ್ನೆಲೆಯಲ್ಲಿ, ಮೆಟ್ರೋ ಪಿಲ್ಲರ್, ಬಸ್ ನಿಲ್ದಾಣಗಳ ಅಡಿಯಲ್ಲಿ ನಿಂತು ವಾಹನ ಸವಾರರು ಆಶ್ರಯ ಪಡೆಯುತ್ತಿದ್ದಾರೆ.
ಹಲವೆಡೆ ವಿದ್ಯುತ್ ಕಂಬಗಳು, ಮರಗಳು ಧರೆಗುರುಳಿವೆ. ಬೆಸ್ಕಾಂ ವ್ಯಾಪ್ತಿಯ ಕೆಂಗೇರಿ-1 ಉಪ ವಿಭಾಗದ ಕುಂಬಳಗೋಡು ವ್ಯಾಪ್ತಿಯಲ್ಲಿ ಭಾರೀ ಮಳೆ ಹಾಗೂ ಗಾಳಿಗೆ 400 ಕೆ.ವಿ. ಸಾಮರ್ಥ್ಯದ ಬೃಹತ್ ವಿದ್ಯುತ್ ಟವರ್ಗಳು ಹಾಗೂ 36 ವಿದ್ಯುತ್ ಕಂಬಗಳು ಮುರಿದುಬಿದ್ದಿದ್ದು, ಇದರಿಂದ ಸುಮಾರು 20 ಹಳ್ಳಿಗಳು 4 ದಿನ ಸಂಪೂರ್ಣ ಕಗ್ಗತ್ತಲಲ್ಲಿ ಹಾಗೂ ಮತ್ತೆ 3 ದಿನ ಭಾಗಶಃ ವಿದ್ಯುತ್ ವ್ಯತ್ಯಯವಾಗಿದೆ.

ಬೆಂಗಳೂರಿನಲ್ಲಿ ಮುಂಗಾರು ಪೂರ್ವ ಮಳೆ ಅಬ್ಬರಿಸಿದ್ದು, ಒಂದೇ ತಾಸಿನಲ್ಲಿ ನಗರದ ಹಲವು ಭಾಗಗಳಲ್ಲಿ 10 ಸೆಂ.ಮೀ.ಗಿಂತ ಹೆಚ್ಚು ಮಳೆ ಸುರಿದಿದೆ. ಹೀಗಾಗಿ ರಸ್ತೆ, ಅಂಡರ್ಪಾಸ್ಗಳು ನದಿಯಂತಾಗಿ, ಕಚೇರಿ ಮುಗಿಸಿ ಮನೆಗೆ ಮರಳಲು ಜನರು ಪರದಾಡಿದ್ದಾರೆ. ಧಾರಾಕಾರ ಮಳೆಯಿಂದಾಗಿ ನಾಯಂಡಹಳ್ಳಿ ಜಂಕ್ಷನ್ನಲ್ಲಿ ವಾಹನಗಳು ಮಳೆ ನೀರಿನಲ್ಲಿ ಮುಳುಗಡೆಯಾಗಿವೆ.

ಮಲ್ಲೇಶ್ವರಂ, ರಾಜಾಜಿನಗರ, ಮೆಜೆಸ್ಟಿಕ್, ಜೆಪಿ ನಗರ, ಜಯನಗರ, ಲಾಲ್ಬಾಗ್, ಶಿವಾನಂದ ಸರ್ಕಲ್, ಮೈಸೂರು ರಸ್ತೆ, ಚಿಕ್ಕಪೇಟೆ, ಮೆಜೆಸ್ಟಿಕ್, ಯಶವಂತಪುರ, ಎಂಜಿ ರಸ್ತೆ, ಕಬ್ಬನ್ ಪಾರ್ಕ್, ವಿಜಯನಗರ, ರಾಜರಾಜೇಶ್ವರಿ ನಗರ, ಕೆಂಗೇರಿ, ಮಾಗಡಿ ರಸ್ತೆ ಸೇರಿದಂತೆ ನಗರದ ಬಹುತೇಕ ಕಡೆಗಳಲ್ಲಿ ಜಲಾವೃತವಾಗಿದೆ. ರಸ್ತೆಗಳು ನದಿಯಂತಾಗಿದೆ.

ಇನ್ನೂ ಬೆಂಗಳೂರಿನಲ್ಲಿ ಮಳೆಗಾಲ ಎದುರಿಸಲು ಎಸ್ಡಿಆರ್ಎಫ್ನಿಂದ ಸಿದ್ಧತೆ ಮಾಡಿಕೊಳ್ಳಲಾಗಿದೆ. 44 ಲೈಫ್ ಜಾಕೆಟ್, 33 ಕಟಾವು ಯಂತ್ರ, 4 ಪೋರ್ಟೆಬಲ್ ಪಂಪ್, 4 ಬೋಟುಗಳು, 33 ಪಂಪ್ ಸೇರಿ ಇನ್ನಿತರ ಸಲಕರಣೆಗಳ ಸಿದ್ಧತೆ ಮಾಡಿಕೊಳ್ಳಲಾಗಿದೆ. 3 ಪಾಳಿಯಲ್ಲಿ ಕೆಲಸ ಮಾಡುವಂತೆ 1 ಪಾಳಿಯಲ್ಲಿ 10ರಿಂದ 12 ಮಂದಿಯಂತೆ ಸಿಬ್ಬಂದಿ ನಿಯೋಜಿಸಲಾಗುತ್ತದೆ. ಜೊತೆಗೆ 20 ಕಡೆ ಅಗ್ನಿ ಶಾಮಕ ದಳಗಳ ನಿಯೋಜನೆ ಮಾಡಲಾಗಿದೆ. ಮಾತ್ರವಲ್ಲದೆ 7 ರಕ್ಷಣಾ ವಾಹನಗಳಿದ್ದು ಸಮಸ್ಯೆ ಎದುರಾದ ಸ್ಥಳಗಳಿಗೆ ನಾಗರಿಕರ ರಕ್ಷಣೆ ಮಾಡುವ ಕೆಲಸಕ್ಕೆ ಮುಂದಾಗಲಿವೆ ಎಂದು ಎಸ್ಡಿಆರ್ಎಫ್ ಉಪ ನಿರ್ದೇಶಕ ಸಿ.ಗುರುಲಿಂಗಯ್ಯ ತಿಳಿಸಿದ್ದಾರೆ.












Click it and Unblock the Notifications