ಬೆಂಗಳೂರು ಮಳೆ; ಲೇಔಟ್ ಮುಳುಗಡೆ: ಜನ ಸಂಚಾರಕ್ಕೆ ಟ್ರಾಕ್ಟರ್
ಬೆಂಗಳೂರು ಆಗಸ್ಟ 04; ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕೆಲವು ದಿನಗಳಿಂದ ಮಳೆ ಮುಂದುವರಿದ ಪರಿಣಾಮ ಸರ್ಜಾಪುರ ರಸ್ತೆಯಲ್ಲಿನ ರೈನ್ಬೋ ಡ್ರೈವ್ ಲೇಔಟ್ ಸಂಪೂರ್ಣ ಮುಳಗಡೆಯಾಗಿದೆ. ಇಲ್ಲಿನ ನಿವಾಸಿಗಳ ಜೀವನ ಅಸ್ತವ್ಯಸ್ತವಾಗಿದ್ದು, ಇದುವರೆಗೂ ಯಾವೊಬ್ಬ ಬಿಬಿಎಂಪಿ ಅಧಿಕಾರಿಗಳು ಸ್ಥಳಕ್ಕೆ ಬಂದಿಲ್ಲ ಎನ್ನಲಾಗಿದೆ.
ಈ ಬಡಾವಣೆಯ ಪ್ರತಿ ರಸ್ತೆಗೂ ನೀರು ನುಗ್ಗಿದೆ. ಬಹುತೇಕ ಎಲ್ಲ ಮನೆಗಳು, ವಿಲ್ಲಾಗಳಲ್ಲಿ ಮಳೆ ನೀರಿದೆ. ಇಡೀ ಬಡಾವಣೆಯೇ ಎರಡು ದಿನದಿಂದ ಜಲಾವೃತಗೊಂಡಿದೆ. ಈ ಬಗ್ಗೆ ಬಿಬಿಎಂಪಿಗೆ ಕರೆ ಮಾಡಿದರೂ ಇದುವರೆಗೆ ಯಾವ ಅಧಿಕಾರಿಗಳು, ಜನಪ್ರತಿನಿಧಿಗಳು ಸ್ಥಳಕ್ಕೆ ಬಂದಿಲ್ಲ. ಸಮಸ್ಯೆಯಲ್ಲಿ ಸಿಲುಕಿರುವ ಜನರತ್ತ ಗಮನ ಹರಿಸಿಲ್ಲ.
ಕಾಶ್ಮೀರದಿಂದ ಕನ್ಯಾಕುಮಾರಿ ತನಕ ಮಳೆ ಮುನ್ಸೂಚನೆ
ಹೀಗಾಗಿ ಈ ಬಡಾವಣೆ ಎಲ್ಲ ನಿವಾಸಿಗಳು ಸಹಾಯ ಮಾಡಿ ಎಂದು ಸರ್ಜಾಪುರ ರಸ್ತೆ ತಡೆದು ಮಳೆಯಲ್ಲೇ ಪ್ರತಿಭಟನೆ ಮಾಡುತ್ತಿದ್ದಾರೆ. ನಾಮಫಲಕ ಹಿಡಿದ ಹಿರಿಯ ನಾಗರಿಕರು, ಮಹಿಳೆಯರು ಮತ್ತು ಮಕ್ಕಳು ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ಹೊರ ಹಾಕಿದ್ದಾರೆ. ಕೂಡಲೇ ನೆರವಿಗೆ ಧಾವಿಸಿ ಎಂದು ಮನವಿ ಮಾಡಿದ್ದಾರೆ.
ಟ್ರಾಕ್ಟರ್ನಲ್ಲಿ ಶಾಲೆಗೆ ತೆರಳಿದ ಮಕ್ಕಳು
ರೈನ್ಬೋ ಡ್ರೈವ್ ಲೇಔಟ್ ಸಂಪೂರ್ಣವಾಗಿ ಜಲದಿಗ್ಬಂಧನಗೊಂಡಿದೆ. ಮನೆ ಮುಂದೆ ನಿಲ್ಲಿಸಿದ್ದ ವಾಹನಗಳು ನೀರಲ್ಲಿ ಮುಳುಗಿವೆ. ವಿಲ್ಲಾಗಳ ನೆಲಮಹಡಿ ಮಳೆ ಮತ್ತು ರಾಜಕಾಲುವೆ ನೀರಿನಿಂದ ಭರ್ತಿಯಾಗಿದೆ. ಹೀಗಾಗಿ ಪೋಷಕರು ತಮ್ಮ ಮಕ್ಕಳನ್ನು ಟ್ರಾಕ್ಟರ್ ಮೂಲಕ ಶಾಲೆಗೆ ಕಳುಹಿಸಿದ ಘಟನೆ ನಡೆದಿದೆ. ಪ್ರತಿ ವರ್ಷ ಮಳೆಗಾಲದಲ್ಲಿ ಇದೇ ಪರಿಸ್ಥಿತಿ ಎದರಿಸುತ್ತಿರುವ ಇಲ್ಲಿನ ನಿವಾಸಿಗಳು ಅಗತ್ಯ ವಸ್ತುಗಳ ಸಹ ಸಿಗದೇ ಪರದಾಡುತ್ತಿದ್ದಾರೆ. ಕೆಲವೆಡೆ ಮನೆಯಿಂದ ಹೊರಬರಲಾದ ಸ್ಥಿತಿ ಉಂಟಾಗಿದೆ.
ಪ್ರತಿ ವರ್ಷ ಲೇಔಟ್ ಮುಳುಗಡೆ
ಪ್ರತಿ ವರ್ಷ ಇದೇ ರೀತಿ ಬಡಾವಣೆಯೇ ಮುಳುಗುತ್ತದೆ. ಇದಕ್ಕೆ ಶಾಸ್ವತ ಪರಿಹಾರ ಕಲ್ಪಿಸುವಂತೆ ಬಿಬಿಎಂಪಿ ಹಾಗೂ ಮುಖ್ಯಮಂತ್ರಿಗಳಿಗೂ ಮನವಿ ಮಾಡಿದರೂ ಯಾವುದೇ ಪ್ರಯೋಜವಾಗಿಲ್ಲ. ಸದ್ಯ ಕಳೆದ ಎರಡು ದಿನದಿಂದ ಬಿದ್ದ ಮಳೆ ನೀರು ಹರಿದು ಹೋಗಲಾರದಷ್ಟು ರಾಜಕಾಲುವೆ ಹೂಳು ತುಂಬಿಕೊಂಡಿದೆ. ಬಿದ್ದ ಮಳೆ ನೀರು ಹರಿಯದ ಪರಿಣಾಮ ಈ ಆವಾಂತರಗಳು ಸೃಷ್ಟಿಯಾಗಿದ್ದು, ನಮಗೀಗ ಸರ್ಕಾರದ ಸಹಾಯ ಬೇಕಿದೆ ಎಂದು ನಿವಾಸಿಗಳು ಕೇಳಿಕೊಂಡರು.
ಗುರುವಾರವೂ ಜೋರು ಮಳೆ ದಾಖಲು
ಬೆಂಗಳೂರಿನಲ್ಲಿ ಕೆಲವು ದಿನಗಳಿಂದ ಸುರಿಯುತ್ತಿರುವ ವ್ಯಾಪಕ ಮಳೆ ಗುರುವಾರವೂ ಮುಂದುವರಿಯಿತು. ಬೆಳಗ್ಗೆ ಸುಮಾರು 9ಗಂಟೆಯಿಂದಲೇ ಒಂದು ಗಂಟೆಗೂ ಹೆಚ್ಚುಕಾಲ ಮಳೆ ಧಾರಾಕಾರವಾಗಿ ಸುರಿಯಿತು. ಪರಿಣಾಮ ಪ್ರಮುಖ ರಸ್ತೆಗಳು, ರಸ್ತೆ ಅಂಡರ್ ಪಾಸ್ಗಳು ನದಿಯಂತಾದವು. ಈ ಪೈಕಿ ಎರಡು ದಿನದಿಂದ ನೀರು ತುಂಬಿ ಕಂಗಾಲಾಗಿದ್ದ ರೈನ್ಬೋ ಡ್ರೈವ್ ಲೇಔಟ್ ನಿವಾಸಿಗಳು ಮತ್ತಷ್ಟು ಆತಂಕಗೊಂಡಿದ್ದಾರೆ. ಇತ್ತ ಮಳೆಯೂ ನಿಲ್ಲುತ್ತಿಲ್ಲ. ಅತ್ತ ಬಿಬಿಎಂಪಿ, ಸರ್ಕಾರದ ಪ್ರತಿನಿಧಿಗಳು ನಮ್ಮ ಗೋಳು ಕೇಳಲು ಬಂದಿಲ್ಲ ಎಂದು ಅಲ್ಲಿನ ನಿವಾಸಿಗಳು ಅಳಲು ತೋಡಿಕೊಂಡರು.
ಪೀಣ್ಯದಲ್ಲಿ 21 ಮಿ.ಮೀ. ಮಳೆ
ಗುರುವಾರ ಬೆಳಗ್ಗೆ ಅಬ್ಬರದ ಮಳೆ ಬಿದ್ದಿದ್ದು, ಈ ಪೈಕಿ ನಗರದ ಪೀಣ್ಯ ಕೈಗಾರಿಕೆ ಪ್ರದೇಶದಲ್ಲಿ ಅಧಿಕ 21.5 ಮಿ.ಮೀ, ಮಳೆ (ಮಧ್ಯಾಹ್ನ 12.30ರವರೆಗಿನ ಅಂಕಿಅಂಶ) ದಾಖಲಾಗಿದೆ. ಉಳಿದಂತೆ ಗಾಳಿ ಆಂಜನೇಯ ಮಂದಿರ ವಾರ್ಡ್ 18 ಮಿ.ಮೀ, ಹಂಪಿನಗರ 17.5ಮಿ.ಮೀ, ಕೊನೇನ ಅಗ್ರಹಾರ ಮತ್ತು ಚೊಕ್ಕಂದ್ರದಲ್ಲಿ ತಲಾ 16.5ಮಿ.ಮೀ, ಹೆಗ್ಗನಹಳ್ಳಿ ಮತ್ತು ಅಗ್ರಹಾರ ದಾಸರಹಳ್ಳಿ ತಲಾ 15.5ಮಿ.ಮೀ, ಮಳೆ ಬಿದ್ದಿದೆ.
ಕೊಟ್ಟಿಗೆಪಾಳ್ಯ, ವಿವಿಪುರಂ, ವಿಜಯನಗರ, ಜಯನಗರ, ಮೆಜೆಸ್ಟಿಕ್, ಸುಜಾತ, ಮಲ್ಲೇಶ್ವರಂ, ಬಸವನಗುಡಿ, ಚಾಮರಾಜಪೇಟೆ ಸೇರಿದಂತೆ ನಗರಾದ್ಯಂತ ಜಿಟಿಜಿಟಿ ಮಳೆ ಬಿದ್ದಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ವರದಿ ಮಾಡಿದೆ.
Recommended Video