Bengaluru Rains: ಬೆಂಗಳೂರಲ್ಲಿ ರಾತ್ರಿ ಮಳೆಗೆ ತತ್ತರಿಸಿದ ನಾಗರಿಕರು
ಬೆಂಗಳೂರು, ಜೂನ್ 5: ಕರ್ನಾಟಕಕ್ಕೆ ನೈಋತ್ಯ ಮುಂಗಾರು ಆಗಮಿಸಿದ್ದು, ಮುಂಗಾರು ಮಳೆ ಅಧಿಕೃತವಾಗಿ ಪ್ರವೇಶಿಸಿದರೂ ಜೂನ್ ಮೊದಲ ವಾರ ಮಳೆ ಪ್ರಮಾಣ ಅಧಿಕವಾಗಿರಲಿಲ್ಲ. ಆದರೆ, ವಾರಾಂತ್ಯದಲ್ಲಿ ದಕ್ಷಿಣ ಒಳನಾಡು, ಕರಾವಳಿ ಹಾಗೂ ಮಲೆನಾಡು ಪ್ರದೇಶಗಳಲ್ಲಿ ಮಳೆ ಚುರುಕಾಗಿದೆ. ಈ ನಡುವೆ ಮುಂಗಾರು ಸ್ವಾಗತಿಸಲು ಸಜ್ಜಾಗದ ಉದ್ಯಾನ ನಗರಿ ಮತ್ತೊಮ್ಮೆ ಮಳೆ ಅಬ್ಬರಕ್ಕೆ ತತ್ತರಿಸಿದೆ. ವಾರಾಂತ್ಯದ ವಿಹಾರಕ್ಕೆ ತೆರಳಿದವರು, ಊರುಗಳಿಂದ ರಾಜಧಾನಿಯತ್ತ ಮುಖ ಮಾಡಿದವರಿಗೆ ಮಳೆ ಕಾಟ ಎದುರಾಗಿದೆ.
ಭಾನುವಾರ 9- 10 ಗಂಟೆ ನಂತರ ಮಳೆ ಆರ್ಭಟ ಜೋರಾಗಿದ್ದು, ಬಸ್ ನಿಲ್ದಾಣ, ಬ್ರಿಟಿಷರ ಕಾಲದ ಭಾರಿ ಮರ, ಫ್ಲೈಓವರ್ ಬಳಿ ದ್ವಿಚಕ್ರ ವಾಹನ ಸವಾರರು ಆಶ್ರಮ ಪಡೆದು ನಿಂತಿರುವ ದೃಶ್ಯ ಸಾಮಾನ್ಯವಾಗಿತ್ತು. ತಗ್ಗು ಪ್ರದೇಶಗಳಲ್ಲಿ ಮನೆಗಳಿಗೆ ನೀರು ನುಗ್ಗುವ ಭೀತಿ ಇದ್ದು, ಭಾನುವಾರದ ಸುಖ ನಿದ್ರೆಯನ್ನು ಮಳೆರಾಯ ಕದಿಯುವ ಸಾಧ್ಯತೆ ಅಲ್ಲಗೆಳೆಯುವಂತಿಲ್ಲ.
ಈ ವರ್ಷ ಜೂನ್ 5 ರಂದು ಪರಿಸರ ದಿನಾಚರಣೆಯ ಅಂಗವಾಗಿ ಅರಣ್ಯ ಇಲಾಖೆ ಹಮ್ಮಿಕೊಂಡಿರುವ ದಿನಾಂಕ 5 ರಿಂದ 12 ರವರೆಗೆ "ಬಿತ್ತೋತ್ಸವ" ಕಾರ್ಯಕ್ರಮದ ಕುರಿತು ಸನ್ಮಾನ್ಯ ಮುಖ್ಯಮಂತ್ರಿಗಳು, ಕರ್ನಾಟಕ ಸರ್ಕಾರ, ರವರಿಂದ ಸಾರ್ವಜನಿಕರಿಗೆ ಸಂದೇಶ.
— Karnataka Forest Department (@aranya_kfd) June 5, 2022
“ಬೀಜ ಬಿತ್ತೋಣ, ಅರಣ್ಯ ಬೆಳೆಸೋಣ”@BSBommai @UMESH_V_KATTI pic.twitter.com/XClD6wxYDQ
ಇನ್ನು ಇಂದು ಪರಿಸರ ದಿನಾಚರಣೆ, ಅರಣ್ಯ ಇಲಾಖೆ ಈ ಬಾರಿ ಬೀಜೋತ್ಸವ ಆರಂಭಿಸಿದ್ದು, ಅತ್ಯಮೂಲ್ಯ ಮರಗಳ ಬೀಜ ಸಂಗ್ರಹಿಸಿ, ಬೀಜ ಬಿತ್ತೋಣ, ಅರಣ್ಯ ಬೆಳೆಸೋಣ ಎಂಬ ಮಹತ್ವದ ಅಭಿಯಾನ ಆರಂಭಿಸಿದೆ. ಸಾಧ್ಯವಾದಷ್ಟು ಎಲ್ಲರೂ ಕೈ ಜೋಡಿಸುವಂತೆ ಸಿಎಂ ಬೊಮ್ಮಾಯಿ ಕೋರಿದ್ದಾರೆ.
ನಗರದ ಹಲವೆಡೆ ಗುಡುಗು, ಮಿಂಚು ಆರ್ಭಟದೊಂದಿಗೆ ಮಳೆ ಸುರಿದಿದ್ದು, ಬಿಬಿಎಂಪಿಯ ಎಂಟು ವಲಯಗಳ ಸಹಾಯವಾಣಿ, ಬೆಸ್ಕಾಂ ಟ್ವಿಟ್ಟರ್, ವಾಟ್ಸಾಪ್, ಸಹಾಯವಾಣಿಗಳು ದೂರುಗಳಿಂದ ತುಂಬಿ ಹೋಗಿವೆ.

ಇನ್ನು ಮಳೆ ಎಲ್ಲೆಲ್ಲಿ ಆಗಿದೆ ಎಂಬ ವಿವರ ಸದ್ಯ ಲಭ್ಯವಿದ್ದು, ಜಯನಗರ, ಹನುಮಂತನಗರ, ವಿದ್ಯಾಪೀಠ ಸರ್ಕಲ್, ಬನಶಂಕರಿ, ಕತ್ರಿಗುಪ್ಪೆ, ಮೈಸೂರು ರಸ್ತೆ, ಹೊಸಕೆರೆ ಹಳ್ಳಿ, ವಿಜಯನಗರ, ನಾಗರಬಾವಿ, ವಿಲ್ಸನ್ ಗಾರ್ಡನ್, ಬಿಟಿಎಂ ಲೇ ಔಟ್, ಮಲ್ಲೇಶ್ವರ, ಮೆಜೆಸ್ಟಿಕ್, ಟೌನ್ ಹಾಲ್ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಮಳೆಯಾಗಿದೆ.
24 ಗಂಟೆಗಳ #ಬಿಬಿಎಂಪಿ ಮಳೆ ನಕ್ಷೆ: 3rd ಜೂನ್ 2022ರ 8.30AM ರಿಂದ 4th ಜೂನ್ 2022ರ 8.30AM ರವರೆಗೆ, ಅತ್ಯಧಿಕ 36.5ಮಿಮೀ ಮಳೆ @ಬೆಂಗಳೂರು_ರಾಜರಾಜೇಶ್ವರಿ ನಗರ_ಎಚ್ ಗೊಲ್ಲಹಳ್ಳಿ. pic.twitter.com/nlneomFrm6
— KSNDMC (@KarnatakaSNDMC) June 4, 2022
ಹವಾಮಾನ ಮುನ್ಸೂಚನೆ:
ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಮುಂದಿನ ನಾಲ್ಕು ದಿನಗಳವರೆಗೂ ಧಾರಾಕಾರ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಮುನ್ಸೂಚನೆ ನೀಡಿದೆ. ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ದಕ್ಷಿಣ ಕನ್ನಡ, ಉತ್ತರ ಕನ್ನಡ ಮತ್ತು ಉಡುಪಿಯ ಕರಾವಳಿ ಜಿಲ್ಲೆಗಳಲ್ಲಿ ಭಾರೀ ಮಳೆಯಾಗಲಿದೆ. ಹಾಸನ, ಶಿವಮೊಗ್ಗ, ರಾಮನಗರ, ಕೊಡಗು ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಮಳೆಯಾಗಲಿದೆ ಎಂದು ಮುನ್ಸೂಚನೆ ನೀಡಲಾಗಿದೆ.
ಬೆಂಗಳೂರಲ್ಲಿ ಮುಂದಿನ ಮುರ್ನಾಲ್ಕು ದಿನಗಳಲ್ಲಿ ಸುಮಾರು 7.5 ರಿಂದ 15 ಮಿಮೀ ವರೆಗೆ ಮಳೆಯಾಗುವ ನಿರೀಕ್ಷೆಯಿದೆ. ಮೇ ತಿಂಗಳಿನಲ್ಲಿ ಬೆಂಗಳೂರು ನಗರದಲ್ಲಿ ಸುರಿದ ಅಕಾಲಿಕ ಧಾರಾಕಾರ ಮಳೆಯಿಂದಲೇ ಇನ್ನೂ ನಾಗರೀಕರು ಸುಧಾರಿಸಿಕೊಂಡಿಲ್ಲ, ಬೆಂಗಳೂರಿಗೆ ಸದ್ಯ ಪ್ರಥಮ ಪ್ರಜೆ( ಮೇಯರ್) ಇಲ್ಲ, ಆಡಳಿತ ಅಧಿಕಾರಿಗಳ ಕೈಲಿರುವ ಬಿಬಿಎಂಪಿ ಮುಂಗಾರು ಮಳೆ ಹಾವಳಿಯಿಂದ ಜನತೆಯನ್ನು ರಕ್ಷಿಸಲು ಸಜ್ಜಾಗಿದ್ದೇವೆ ಎಂದು ಘೋಷಿಸಿಕೊಂಡಿದ್ದಾರೆ.
ಆದರೆ, ಮಳೆ ಹಾನಿ ನಂತರ ಬಂದು ವೀಕ್ಷಣೆಗಷ್ಟೇ ಅಧಿಕಾರಿಗಳು ಸೀಮಿತವಾಗಿದ್ದಾರೆ ಎಂದು ಜನತೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನು ಮಳೆ ತನ್ನ ನಿಜ ಸ್ವರೂಪ ತೋರಿಸಲು ಮುಂದಾಗಿಲ್ಲ. ಮಳೆ ಬಂದರೆ ಬೆಂಗಳೂರಿಗರು ಬೆಚ್ಚುವುದು ತಪ್ಪುತ್ತಿಲ್ಲ.












Click it and Unblock the Notifications