ಗ್ರೀನ್ ಕಾರಿಡಾರಿನಲ್ಲಿ ಹೃದಯ ರವಾನೆ, ಯಶಸ್ವಿಯಾದ ಕಸಿ
ಮೆದುಳು ನಿಷ್ಕ್ರಿಯವಾಗಿದ್ದ ವ್ಯಕ್ತಿಯೊಬ್ಬರ ಹೃದಯವನ್ನು ಉತ್ತರಹಳ್ಳಿ ರಸ್ತೆಯಲ್ಲಿರುವ ಬಿ.ಜಿ.ಎಸ್ ಗ್ಲೋಬಲ್ ಆಸ್ಪತ್ರೆಯಿಂದ ಬೊಮ್ಮಸಂದ್ರ ಕೈಗಾರಿಕ ಪ್ರದೇಶದಲ್ಲಿರುವ ನಾರಾಯಣ ಹೆಲ್ತ್ ಸಿಟಿ ಆಸ್ಪತ್ರೆಗೆ ಕೇವಲ 26 ನಿಮಿಷಗಳಲ್ಲಿ ರವಾನಿಸಲಾಗಿದೆ
ಬೆಂಗಳೂರು, ಏಪ್ರಿಲ್ 18: ಸಿಗ್ನಲ್ ಮುಕ್ತ ಸಂಚಾರ (ಗ್ರೀನ್ ಕಾರಿಡಾರ್) ಸಹಾಯದಿಂದ ಮೆದುಳು ನಿಷ್ಕ್ರಿಯವಾಗಿದ್ದ ವ್ಯಕ್ತಿಯೊಬ್ಬರ ಹೃದಯವನ್ನು ಉತ್ತರಹಳ್ಳಿ ರಸ್ತೆಯಲ್ಲಿರುವ ಬಿ.ಜಿ.ಎಸ್ ಗ್ಲೋಬಲ್ ಆಸ್ಪತ್ರೆಯಿಂದ ಬೊಮ್ಮಸಂದ್ರ ಕೈಗಾರಿಕ ಪ್ರದೇಶದಲ್ಲಿರುವ ನಾರಾಯಣ ಹೆಲ್ತ್ ಸಿಟಿ ಆಸ್ಪತ್ರೆಗೆ ಕೇವಲ 26 ನಿಮಿಷಗಳಲ್ಲಿ ರವಾನಿಸಲಾಗಿದೆ. ನಂತರ ಹೃದಯ ಕಸಿ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದೆ.
ರಸ್ತೆ ಅಪಘಾತದಿಂದ ಮೆದುಳು ನಿಷ್ಕ್ರಿಯಗೊಂಡಿರುವ ರವಿ, 26 ವರ್ಷದ (ಪುರುಷ) ಎಂಬುವವರ ಹೃದಯವನ್ನು 40 ವರ್ಷದ (ಪುರುಷ) ವ್ಯಕ್ತಿ ನಾಗರಾಜ್ ಎಂಬುವವರಿಗೆ ಹೃದಯ ಕಸಿ ಮಾಡುವಲ್ಲಿ ನಾರಾಯಣ ಹೆಲ್ತ್ ಸಿಟಿ ವೈದ್ಯರು ಯಶಸ್ವಿಯಾಗಿದ್ದಾರೆ. ಉತ್ತರಹಳ್ಳಿಯಲ್ಲಿರುವ ಬಿ.ಜಿ.ಎಸ್. ಗ್ಲೋಬಲ್ ಆಸ್ಪತ್ರೆಯಲ್ಲಿ ನಿನ್ನೆ ಮೆದುಳು ನಿಷ್ಕ್ರಿಯಗೊಂಡಿರುವುದು ಖಚಿತಪಡಿಸಲಾಯಿತು.

ಅಂಗಾಂಗ ದಾನಕ್ಕೆ ರವಿಯವರ ಮನೆಯವರು ಒಪ್ಪಿಗೆ ಸೂಚಿಸಿದ ನಂತರ ಇಂದು ಬೆಳಗಿನ ಜಾವ ಸಿಗ್ನಲ್ ಮುಕ್ತ ಸಂಚಾರ (ಗ್ರೀನ್ ಕಾರಿಡಾರ್) ಸಹಾಯದಿಂದ ರವಿಯವರ ಹೃದಯವನ್ನು ಬೊಮ್ಮಸಂದ್ರ ಕೈಗಾರಿಕ ಪ್ರದೇಶದಲ್ಲಿರುವ ನಾರಾಯಣ ಹೆಲ್ತ್ ಸಿಟಿ ಆಸ್ಪತ್ರೆಗೆ ರವಾನಿಸಲಾಯಿತು. ರವಿಯವರ ಹೃದಯವನ್ನುಹೊತ್ತು ಹೊರಟ ಆಂಬುಲೆನ್ಸ್ ಬಿ.ಜಿ.ಯೆಸ್. ಗ್ಲೋಬಲ್ ನಿಂದ 26 ನಿಮಿಷಕ್ಕೆ ನಾರಾಯಣ ಹೆಲ್ತ್ ಸಿಟಿ ತಲುಪಿತು.
ಏಪ್ರಿಲ್ 16ರಂದು ಅವರು ಹಿಂಬದಿ ಸವಾರರಾಗಿ ಚಲಿಸುವಾಗ, ಚಲಿಸುವ ವಾಹನದಿಂದ ಕೆಳಗೆಬಿದ್ದು ತಲೆಗೆ ತೀವ್ರ ಗಾಯವಾಗಿತ್ತು. ಅವರನ್ನು ಉತ್ತರಹಳ್ಳಿಯಲ್ಲಿರುವ ಬಿ.ಜಿ.ಎಸ್. ಗ್ಲೋಬಲ್ ಆಸ್ಪತ್ರೆಗೆ ಕರೆತಂದರು.

ಹೃದಯ ಕಸಿ: ಕೊಪ್ಪಳದ 40 ವರ್ಷದ (ಪುರುಷ) ವ್ಯಕ್ತಿ ನಾಗರಾಜ್ ಎಂಬುವವರಿಗೆ ರವಿಯವರ ಹೃದಯವನ್ನು ಕಸಿಮಾಡಲಾಗಿದೆ. ಇವರು ಕೊಪ್ಪಳದಲ್ಲಿ ರೈತನಾಗಿದ್ದು, ಇವರಿಗೆ 2012ರಲ್ಲಿ ಹೃದಯಘಾತವಾಗಿತ್ತು (ಹಾರ್ಟ್ ಫೇಲ್ಯೂರ್), ನಾರಾಯಣ ಹೆಲ್ತ್ ಸಿಟಿಯ ಹಾರ್ಟ್ ಫೇಲ್ಯೂರ್ ತಂಡದವರಿಂದ ಚಿಕ್ತಿತ್ಸೆ ಪಡೆಯುತ್ತಿದ್ದರು.
ದಾನಿ ಮತ್ತು ಸ್ವೀಕರಿಸುವವರ ಅಡ್ಡ ಹೊಂದಾಣಿಕೆಯ ಪರೀಕ್ಷೆಯನ್ನು ಟಿ.ಟಿ.ಕೆ. ಬ್ಲಡ್ ಬ್ಯಾಂಕಿನಲ್ಲಿ ಮಾಡಲಾಯಿತು. ಈ ಹೃದಯ ಕಸಿಯನ್ನು ನಾರಾಯಣ ಹೆಲ್ತ್ ಸಿಟಿಯ ಹಿರಿಯ ಕಾರ್ಡಿಯೋತೋರಾಸಿಕ್ ಕಸಿ ಶಸ್ತ್ರಚಿಕಿತ್ಸಕರಾದ ಡಾ. ಜೂಲಿಯೆಸ್ ಪುನ್ನೆನ್ ನೇತೃತ್ವದ ವೈದ್ಯರ ತಂಡ ಯಶಸ್ವಿಯಾಗಿ ನೆರವೇರಿಸಿದ್ದಾರೆ.












Click it and Unblock the Notifications