1 ಲಕ್ಷ ಮನೆ ಯೋಜನೆ ವ್ಯಾಪ್ತಿ ಹಾಗೂ ಆದಾಯ ಮಿತಿ ಹೆಚ್ಚಿಸಿದ ಕುಮಾರಸ್ವಾಮಿ
ಬೆಂಗಳೂರು, ಮಾರ್ಚ್ 9: ಲೋಕಸಭಾ ಚುನಾವಣೆಗೆ ವೇಳಾಪಟ್ಟಿ ಪ್ರಕಟಣೆ ಹೊಸ್ತಿಲಿನಲ್ಲೇ ಸಮ್ಮಿಶ್ರ ಸರ್ಕಾರ ಜನರ ಮನ ಗೆಲ್ಲಲು ಸಾಕಷ್ಟು ಯೋಜನೆಗಳನ್ನು ರೂಪಿಸುತ್ತಿದೆ.
ಮುಖ್ಯಮಂತ್ರಿ ಕುಮಾರಸ್ವಾಮಿ ಒಂದು ಲಕ್ಷ ಬಹುಮಹಡಿ ಬೆಂಗಳೂರು ನಗರ ವಸತಿ ಯೋಜನೆಗೆ ಭೂಮಿ ಪೂಜೆ ನೆರವೇರಿಸಿದರು. ಬಡವರ ಕನಸಿನ ಮನೆ ಸಕಾರಗೊಳಿಸಲು ಸರ್ಕಾರ ಕಡಿಮೆ ಬೆಲೆಯಲ್ಲಿ ವಸತಿ ವ್ಯವಸ್ಥೆ ಕಲ್ಪಿಸುತ್ತಿದೆ ಎಂದು ತಿಳಿಸಿದ್ದಾರೆ.
ಈ ಪ್ರದೇಶದಲ್ಲಿ 1 ಲಕ್ಷ ಮನೆಗಳನ್ನು ನಿರ್ಮಿಸಲು ತೀರ್ಮಾನಿಸಲಾಗಿದೆ. ಇದರಿಂದ ಸುಮಾರು 4 ಲಕ್ಷ ಜನರಿಗೆ ವಸತಿ ಕಲ್ಪಿಸಿದಂತಾಗುತ್ತದೆ. ಇದಕ್ಕಾಗಿ ಆನ್ಲೈನ್ ಮೂಲಕ ಈಗಾಗಲೇ ಅರ್ಜಿಗಳನ್ನು ಕರೆಯಲಾಗಿದ್ದು, ಅರ್ಧದಷ್ಟು ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದೆ. ಬಿ.ಪಿ.ಎಲ್ ಕಾರ್ಡು ಹೊಂದಿರುವವರು ಈ ಸೌಲಭ್ಯ ಪಡೆದುಕೊಳ್ಳಲು ಅರ್ಹರು.

ಈ ಯೋಜನೆಯಡಿ ಕೇಂದ್ರ ಸರ್ಕಾರ ರೂ. 1.50 ಲಕ್ಷ, ರಾಜ್ಯ ಸರ್ಕಾರ ರೂ. 1.50 ಲಕ್ಷ ಹಾಗೂ ಫಲಾನುಭವಿಗಳು 3 ರಿಂದ 4 ಲಕ್ಷ ರೂ ಒಟ್ಟಾರೆ ಸುಮಾರು 7 ಲಕ್ಷಕ್ಕೆ ಒಂದು ಪ್ಲಾಟ್ನ್ನು ಪಡೆದುಕೊಳ್ಳಬಹುದಾಗಿದೆ. 14 ಅಂತಸ್ತುಗಳ ವಸತಿ ಸಂಕೀರ್ಣದಲ್ಲಿ ಗುಣಾತ್ಮಕ ಮನೆಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದೆ.
ಫಲಾನುಭವಿಗಳ ಆದಾಯ ಮಿತಿಯನ್ನು ವಾರ್ಷಿಕ 87,000 ರಿಂದ 3 ಲಕ್ಷಗಳವರೆಗೆ ಏರಿಸಲು ಆದೇಶಿಸಲಾಗಿದೆ. ಈಗಾಗಲೇ ಕೆಲವರಿಗೆ ವಸತಿಯ ಹಕ್ಕು ಪತ್ರ ನೀಡಲಾಗಿದ್ದು, ಇನ್ನೂ 50,000 ಜನರಿಗೆ ಮನೆ ಪಡೆಯಲು ಅವಕಾಶವಿದ್ದು, ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಬೆಂಗಳೂರು ಅಭಿವೃದ್ಧಿ, ಯೋಜನೆಗಳು, ರೈತರ ಸಾಲಮನ್ನಾ, ಇತ್ಯಾದಿಗಳನ್ನು ಸರ್ಕಾರ ಕೈಗೊಂಡಿದೆ ಎಂದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೃಷ್ಣ ಬೈರೇಗೌಡ ಸರ್ಕಾರ ಜನರ ಪರವಾಗಿದೆ. ರೈತರ 40,000 ಕೋಟಿ ರೂ ಸಾಲ ಮನ್ನಾ ಮಾಡಿದೆ. ಬೆಂಗಳೂರು ಅಭಿವೃದ್ಧಿಗೆ 8000 ಕೋಟಿ ರೂ. ಮೀಸಲಿಟ್ಟಿದೆ. ಮೆಟ್ರೋ 2ನೇ ಹಾಗೂ 3ನೇ ಹಂತದ ಕಾಮಗಾರಿಗಳಿಗೆ ಅನುಮತಿ ನೀಡಿದೆ.
15 ವರ್ಷಗಳಿಂದ ಬಾಕಿಯಿಂದ ಪೆರಿಫೆರಲ್ ರಿಂಗ್ ರಸ್ತೆ ನಿರ್ಮಾಣಕ್ಕೆ ಭೂಮಿ ಒತ್ತುವರಿ ನಡೆಸಿದೆ. 9,000 ಕೋಟಿ ರೂ ಗಳಲ್ಲಿ ಎಲಿವೇಟೆಡ್ ಕಾರಿಡಾರ್ ಯೋಜನೆಯನ್ನು ಹೊಸೂರು ರಸ್ತೆಯಿಂದ ಬಳ್ಳಾರಿ ರಸ್ತೆವರೆಗೆ ಕೈಗೊಳ್ಳಲಾಗಿದೆ.
ಮೇಲ್ಸೇತುವೆಗಳ ನಿರ್ಮಾಣಕ್ಕೆ ಟೆಂಡರ್ ಕರೆಯಲಾಗಿದ್ದು, ಇದರಿಂದ ಟ್ರಾಫಿಕ್ ಸಮಸ್ಯೆಗಳಿಗೆ ಪರಿಹಾರ ದೊರೆಯದೆ ಹಾಗೆಯೇ ಸಬ್ ಅರ್ಬನ್ ರೈಲ್ವೆ ಯೋಜನೆಯನ್ನು ಸಹ ಅನುಷ್ಠಾನಗೊಳಿಸಲಿದೆ ಎಂದರು.
ಕಾರ್ಯಕ್ರಮದಲ್ಲಿ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್, ವಸತಿ ಸಚಿವ ಎಂ.ಟಿ.ಬಿ. ನಾಗರಾಜ್, ಇತರ ಜನಪ್ರತಿನಿಧಿಗಳು, ಬೆಂಗಳೂರು ಜಿಲ್ಲಾಧಿಕಾರಿ ವಿಜಯ್ಶಂಕರ್, ವಸತಿ ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.












Click it and Unblock the Notifications