ಜೆ.ಪಿ.ನಗರಕ್ಕೆ ರಾಜ್ಯದ ಆಡಳಿತ ಶಕ್ತಿಕೇಂದ್ರ ಸ್ಥಳಾಂತರ!
ಬೆಂಗಳೂರು, ಮೇ 22 : ರಾಜ್ಯದ ಆಡಳಿತದ ಶಕ್ತಿ ಕೇಂದ್ರ ಜೆ.ಪಿ.ನಗರಕ್ಕೆ ಸ್ಥಳಾಂತರಗೊಳ್ಳಲಿದೆ. ಮುಖ್ಯಮಂತ್ರಿಯಾದ ಬಳಿಕ ಸರ್ಕಾರಿ ಬಂಗಲೆ ಬಳಕೆ ಮಾಡದೆ ಜೆ.ಪಿ.ನಗರದ ನಿವಾಸದಲ್ಲಿಯೇ ವಾಸ್ತವ್ಯ ಹೂಡಲು ಎಚ್.ಡಿ.ಕುಮಾರಸ್ವಾಮಿ ನಿರ್ಧರಿಸಿದ್ದಾರೆ.
ಮಂಗಳವಾರ ರಾತ್ರಿ ಬೆಂಗಳೂರಿನಲ್ಲಿ ಮಾತನಾಡಿದ ನಿಯೋಜಿತ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು, 'ಸರ್ಕಾರಿ ಬಂಗಲೆ ಬಳಸುವುದಿಲ್ಲ. ಜೆ.ಪಿ.ನಗರದಲ್ಲಿ ವಾಸ್ತವ್ಯ ಹೂಡಲಿದ್ದೇನೆ' ಎಂದು ಹೇಳಿದರು.
ರಾಜ್ಯದ ಮುಖ್ಯಮಂತ್ರಿಗಳಿಗಾಗಿ ಸರ್ಕಾರದಿಂದ ಅನುಗ್ರಹ ಮತ್ತು ಕಾವೇರಿ ನಿವಾಸವನ್ನು ಮೀಸಲಾಗಿಡಲಾಗಿದೆ. ಆದರೆ, ಕುಮಾರಸ್ವಾಮಿ ಅವರು ಜೆ.ಪಿ.ನಗರದ ನಿವಾಸವನ್ನು ಬಳಸಲು ನಿರ್ಧರಿಸಿದ್ದಾರೆ.

ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿಯೇ ಮುಂದುವರೆಯಲಿದೆ. ಆದರೆ, ಕುಮಾರಸ್ವಾಮಿ ಅವರು ಮಾತ್ರ ಸರ್ಕಾರಿ ಬಂಗಲೆಗೆ ಸ್ಥಳಾಂತರಗೊಳ್ಳುವುದಿಲ್ಲ. ಸರ್ಕಾರದ ಮುಖ್ಯಕಾರ್ಯದರ್ಶಿ, ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ಈಗಾಗಲೇ ಕುಮಾರಸ್ವಾಮಿ ಈ ಕುರಿತು ಮಾಹಿತಿ ನೀಡಿದ್ದಾರೆ.
ಜೆ.ಪಿ.ನಗರದ ನಿವಾಸ ಕುಮಾರಸ್ವಾಮಿ ಅವರಿಗೆ ಅದೃಷ್ಟದ ಮನೆ. 2018ರ ಚುನಾವಣೆಗೆ ಸಿದ್ಧತೆ ಆರಂಭಿಸುವ ಕೆಲವು ದಿನಗಳ ಹಿಂದೆ ಅದನ್ನು ಅವರು ನವೀಕರಣಗೊಳಿಸಿದ್ದು, ಅಲ್ಲಿಯೇ ವಾಸ್ತವ್ಯ ಹೂಡಿದ್ದಾರೆ.
ರಾಜಕಾರಣಕ್ಕೆ ಪ್ರವೇಶ ಮಾಡುವ ಮುನ್ನ ಚಿತ್ರೋದ್ಯಮದಲ್ಲಿ ಕುಮಾರಸ್ವಾಮಿ ತೊಡಗಿಸಿಕೊಂಡಿದ್ದರು. ಆಗಲೂ ಅವರು ಜೆ.ಪಿ.ನಗರದ ಮಿನಿ ಫಾರೆಸ್ಟ್ ರಸ್ತೆಯಲ್ಲಿರುವ ನಿವಾಸದಲ್ಲಿದ್ದರು. ಇದನ್ನು ಅದೃಷ್ಟದ ನಿವಾಸ ಎಂದು ಅವರು ನಂಬಿದ್ದಾರೆ.

ನವೀಕಣರದ ಬಳಿಕ ಅದ್ದೂರಿಯಾಗಿ ಗೃಹ ಪ್ರವೇಶ ನೆರವೇರಿಸಿ ಕುಮಾರಸ್ವಾಮಿ ಅವರು ಜೆ.ಪಿ.ನಗರದ ನಿವಾಸಕ್ಕೆ ವಾಸ್ತವ್ಯ ಬದಲಿಸಿದ್ದರು. ಪೊಲೀಸ್ ಅಧಿಕಾರಿಗಳು ಸಹ ಭದ್ರತೆಯ ದೃಷ್ಟಿಯಿಂದ ನಿವಾಸವನ್ನು ಪರಿಶೀಲನೆ ನಡೆಸಿದ್ದಾರೆ.












Click it and Unblock the Notifications