ಹತಾಶೆಯಿಂದ ಕುಮಾರಸ್ವಾಮಿ ಆರೋಪ ಮಾಡುತ್ತಿದ್ದಾರೆ : ಡಿಸಿಎಂ
ಬೆಂಗಳೂರು, ಸೆಪ್ಟೆಂಬರ್ 06 : "ಮಾಜಿ ಮುಖ್ಯಮಮತ್ರಿ ಎಚ್. ಡಿ. ಕುಮಾರಸ್ವಾಮಿ ನನ್ನ ವಿರುದ್ಧ ಮಾಡಿರುವ ಆರೋಪಗಳು ಆಧಾರರಹಿತ ಹಾಗೂ ಸತ್ಯಕ್ಕೆ ದೂರವಾದದ್ದು" ಎಂದು ಉಪ ಮುಖ್ಯಮಂತ್ರಿ ಡಾ. ಅಶ್ವತ್ಥ್ ನಾರಾಯಣ ಹೇಳಿದರು.
ಬೆಂಗಳೂರಿನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಉಪ ಮುಖ್ಯಮಂತ್ರಿಗಳು, "ತಮ್ಮ ವಿರುದ್ಧ ಆಧಾರ ರಹಿತ ಆರೋಪವನ್ನು ಮಾಡಿ ಕುಮಾರಸ್ವಾಮಿ ಅಜ್ಞಾನ ಪ್ರದರ್ಶನ ಮಾಡಿದ್ದಾರೆ" ಎಂದು ತಿಳಿಸಿದರು.
"ಒಬ್ಬ ಮಾಜಿ ಮುಖ್ಯಮಂತ್ರಿ ಆರೋಪ ಮಾಡುವಾಗ ವಾಸ್ತವ ತಿಳಿದುಕೊಳ್ಳದೆ ಹತಾಶರಾಗಿ ಏನೇನೋ ಹೇಳಿ ಅಪಹಾಸ್ಯಕ್ಕೆ ಒಳಗಾಗಿದ್ದಾರೆ. ಅಧಿಕಾರವಿಲ್ಲ ಎಂಬ ಹತಾಷೆಯನ್ನು ಅಸಂಬದ್ದ ಹೇಳಿಕೆ ಮೂಲಕ ಹೊರಹಾಕುವುದು ಎಚ್. ಡಿ. ಕುಮಾರಸ್ವಾಮಿ ಹಳೆ ಚಾಳಿಯಾಗಿದೆ" ಎಂದು ದೂರಿದರು.

"ಕುಮಾರಸ್ವಾಮಿ ನನ್ನ ವಿರುದ್ದ ಮಾಡಿರುವ ಆರೋಪಗಳು ಆಧಾರರಹಿತ ಹಾಗೂ ಸತ್ಯಕ್ಕೆ ದೂರವಾದದ್ದು. ಹತಾಷರಾಗಿ ಈ ರೀತಿ ಇಲ್ಲ ಸಲ್ಲದ ಆರೋಪಗಳನ್ನು ಮಾಡುವ ಮೂಲಕ ಪ್ರಚಾರದಲ್ಲಿರಲು ಅವರು ಬಯಸಿದ್ದಾರೆ" ಎಂದು ಡಾ. ಅಶ್ವತ್ಥ್ ನಾರಾಯಣ ಆರೋಪಿಸಿದರು.
ಕುಮಾರಸ್ವಾಮಿ ಹೇಳಿದ್ದೇನು? : ಉಪ ಮುಖ್ಯಮಂತ್ರಿ ಡಾ. ಅಶ್ವತ್ಥ್ ನಾರಾಯಣ ವಿರುದ್ಧ ಆರೋಪಗಳನ್ನು ಮಾಡಿದ್ದ ಎಚ್. ಡಿ. ಕುಮಾರಸ್ವಾಮಿ, "2011ರಲ್ಲಿ ಬಿಬಿಎಂಪಿ ಕಚೇರಿಗೆ ಬೆಂಕಿ ಬಿದ್ದ ಪ್ರಕರಣದಲ್ಲಿ ಡಾ. ಅಶ್ವತ್ಥ್ ನಾರಾಯಣ ಅವರೇ ಕಿಂಗ್ ಪಿನ್" ಎಂದು ಗಂಭೀರ ಆರೋಪ ಮಾಡಿದ್ದರು.
ಬೆಂಗಳೂರು ಮೆಟ್ರೋ ಪಾಲಿಟನ್ ಟಾಸ್ಕ್ ಫೋರ್ಸ್ (ಬಿಎಂಟಿಎಫ್) ಕಡತಗಳ ಕೊಠಡಿಗೆ 2011ರಲ್ಲಿ ಬೆಂಕಿ ಬಿದ್ದಿತ್ತು. ಹಲವು ಕಡತಗಳು ಬೆಂಕಿಗೆ ಆಹುತಿಯಾಗಿದ್ದವು. ಬಿಬಿಎಂಪಿ, ಬಿಡಿಎ ಮತ್ತು ಜಲಮಂಡಳಿಯಲ್ಲಿ ನಡೆ ಭ್ರಷ್ಟಾಚಾರದ ಪ್ರಕರಣಗಳ ತನಿಖೆಯನ್ನು ಬಿಎಂಟಿಎಫ್ ನಡೆಸುತ್ತಿತ್ತು. ಈ ಕಡತಗಳು ಸುಟ್ಟು ಹೋಗಿದ್ದವು.












Click it and Unblock the Notifications