ವಿವಾದಾತ್ಮಕ ಪೋಸ್ಟ್ ಪ್ರಕರಣ: ನಟ ಚೇತನ್ಗೆ ಹೈಕೋರ್ಟ್ನಿಂದ ಮತ್ತೆ ರಿಲೀಫ್..!
ಬೆಂಗಳೂರು, ಜೂನ್ 3: ವಿವಾದಾತ್ಮಕ ಪೋಸ್ಟ್ ಮಾಡಿ ಸಂಕಷ್ಟಕ್ಕೆ ಸಿಲುಕಿದ್ದ ನಟ ಚೇತನ್ಗೆ ಮತ್ತೆ ಹೈಕೋರ್ಟ್ನಿಂದ ರಿಲೀಫ್ ಸಿಕ್ಕಿದೆ.
ಚೇತನ್ ಅವರ ಸಾಗರೋತ್ತರ ಭಾರತೀಯ ಪ್ರಜೆ (ಒಸಿಐ) ಕಾರ್ಡ್ ರದ್ದುಗೊಳಿಸಿದ್ದ ಆದೇಶಕ್ಕೆ ನೀಡಿದ್ದ ತಡೆಯಾಜ್ಞೆಯನ್ನು ಹೈಕೋರ್ಟ್ ಶುಕ್ರವಾರ ಮತ್ತೆ ಮುಂದುವರಿಸಿದೆ. ಹಾಗಾಗಿ ಗಡಿಪಾರು ಭೀತಿಯಲ್ಲಿದ್ದ ನಟ ಚೇತನ್ ಇನ್ನು ಸ್ವಲ್ಪ ದಿನ ನೆಮ್ಮೆದಿಯಾಗಿರಬಹುದಾಗಿದೆ. ಚೇತನ್ ಕುಮಾರ್ ಸಲ್ಲಿಸಿದ್ದ ಅರ್ಜಿ ನ್ಯಾ. ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯಪೀಠದ ಮುಂದೆ ವಿಚಾರಣೆಗೆ ಬಂದಿತು.

ಆಗ ಕೆಲ ಕಾಲ ವಾದ ಆಲಿಸಿದ ನ್ಯಾಯಪೀಠ ನಂತರ ಕೇಂದ್ರ ಸರ್ಕಾರ ಒಸಿಐ ರದ್ದು ಮಾಡಿ ಹೊರಡಿಸಿದ್ದ ಆದೇಶಕ್ಕೆ ನೀಡಿದ್ದ ತಡೆಯಾಜ್ಞೆಯನ್ನು ವಿಸ್ತರಿಸಿದ್ದಲ್ಲದೆ, ಚೇತನ್ ಅರ್ಜಿಗೆ ಆಕ್ಷೇಪಣೆ ಸಲ್ಲಿಸುವಂತೆ ಸರ್ಕಾರಕ್ಕೆ ಸೂಚನೆ ನೀಡಿ ವಿಚಾರಣೆಯನ್ನು ಮುಂದೂಡಿತು.
ಅರ್ಜಿದಾರರ ಪರ ವಕೀಲರು, ನ್ಯಾಯಾಲಯ ವಿಧಿಸಿರುವ ಷರತ್ತುಗಳನ್ನು ಅರ್ಜಿದಾರರು ಪಾಲಿಸುತ್ತಿದ್ದಾರೆ. ಹಾಗಾಗಿ ಹಿಂದೆ ನೀಡಿರುವ ತಡೆಯಾಜ್ಞೆಯನ್ನು ವಿಸ್ತರಿಸಬೇಕು ಎಂದು ಕೋರಿದರು.
ಏನಿದು ಪ್ರಕರಣ?
2018ರಲ್ಲಿ ಚೇತನ್ಗೆ ಓವರ್ಸೀಸ್ ಸಿಟಿಜನ್ ಆಫ್ ಇಂಡಿಯಾ(ಒಸಿಐ) ಕಾರ್ಡ್ ನೀಡಲಾಗಿತ್ತು. ಆದರೆ ಅವರ ವಿರುದ್ಧ ಸಮುದಾಯಗಳ ನಡುವೆ ದ್ವೇಷ ಮೂಡಿಸುವ ಯತ್ನ ಮತ್ತು ಭಾರತ ವಿರೋಧಿ ಚಟುವಟಿಕೆ ಆರೋಪಗಳಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಚೇತನ್ಗೆ 2022ರ ಜೂ.8ರಂದು ನೋಟಿಸ್ ನೀಡಿ ಉತ್ತರ ಪಡೆದಿತ್ತು.
ಚೇತನ್ ನೀಡಿದ್ದ ಉತ್ತರ ಸಮಾಧಾನಕರವಾಗಿಲ್ಲದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಒಸಿಐ ಕಾರ್ಡ್ ರದ್ದುಪಡಿಸಿತ್ತು. ಅದನ್ನು ನಟ ಚೇತನ್ ಹೈಕೋರ್ಟ್ನಲ್ಲಿ ಪ್ರಶ್ನಿಸಿದ್ದರು. ಕಳೆದ ಏಪ್ರಿಲ್ 21ರಂದು ನಟ ಚೇತನ್ಗೆ ಷರತ್ತು ಬದ್ಧ ರಿಲೀಫ್ ನೀಡಿದ್ದ ಹೈಕೋರ್ಟ್, ನ್ಯಾಯಾಂಗದ ಬಗ್ಗೆ ನಟ ಚೇತನ್ ಟ್ವೀಟ್ ಮಾಡುವಂತಿಲ್ಲ. ಬಾಕಿಯಿರುವ ಕೇಸ್ಗಳ ಬಗ್ಗೆ ಟ್ವೀಟ್ ಮಾಡುವಂತಿಲ್ಲವೆಂದು ಷರತ್ತುಗಳನ್ನು ವಿಧಿಸಿತ್ತು.












Click it and Unblock the Notifications