ಕಸ ಬೇರ್ಪಡಿಸದಿದ್ದರೆ ದಂಡ ಹಾಕಲು ಹೈ ಕೋರ್ಟ್ ಆದೇಶ
ಬೆಂಗಳೂರು, ಜ. 10: ಕಸ ವಿಂಗಡಣೆ ಕುರಿತು ಸರ್ಕಾರ, ಬಿಬಿಎಂಪಿ ಹಾಗೂ ಸಂಘ-ಸಂಸ್ಥೆಗಳು ಸಾಕಷ್ಟು ಬಾರಿ ಜಾಗೃತಿ ಮೂಡಿಸಿದ್ದರೂ ಜನ ಬದಲಾಗಿಲ್ಲ. 'ನಾವ್ಯಾಕೆ ತಲೆ ಕೆಡಿಸಿಕೊಳ್ಳೋಣ' ಎಂಬ ಧೋರಣೆ ಕಸದ ಸಮಸ್ಯೆಯನ್ನು ಇನ್ನಷ್ಟು ಹೆಚ್ಚಿಸಿದೆ. ಇದೀಗ ಹೈ ಕೋರ್ಟ್ ಈ ಕುರಿತು ಚಾಟಿ ಬೀಸಿದೆ.
ತನ್ನ ವ್ಯಾಪ್ತಿಯ ಎಲ್ಲ 198 ವಾರ್ಡ್ಗಳಲ್ಲಿಯೂ ಒಣ ಕಸ ಸಂಗ್ರಹಣೆ ಕೇಂದ್ರಗಳು ತಯಾರಾಗಿವೆ. ಕೆಲವೆಡೆ ಮಾತ್ರ ಇನ್ನೂ ಕಾರ್ಯಾರಂಭಿಸಬೇಕಿದೆ ಎಂದು ಬಿಬಿಎಂಪಿ ವಿಶೇಷ ಆಯುಕ್ತ (ಘನ ತ್ಯಾಜ್ಯ ನಿರ್ವಹಣೆ) ದರ್ಪಣ ಜೈನ್ ಹೈ ಕೋರ್ಟ್ಗೆ ತಿಳಿಸಿದ್ದಾರೆ. ಆದ್ದರಿಂದ ಕಸ ಬೇರ್ಪಡಿಸುವಿಕೆಯನ್ನು ಸ್ಪಷ್ಟವಾಗಿ ಜಾರಿಗೆ ತರಬೇಕೆಂದು ಹೈಕೋರ್ಟ್ ಬೆಂಗಳೂರು ಮಹಾನಗರ ಪಾಲಿಕೆಗೆ ಆದೇಶ ನೀಡಿದೆ. ಅಲ್ಲದೆ, ಈ ನಿಯಮ ಉಲ್ಲಂಘಿಸಿದವರಿಂದ ದಂಡ ಆಕರಿಸುವಂತೆಯೂ ಸೂಚಿಸಿದೆ. [ಇದು ಕಸದ ಮಾರ್ಕೆಟ್, ಕಸ ಕೊಟ್ಟು ಹಣ ಪಡೆಯಿರಿ]
ಇದಕ್ಕೂ ಮೊದಲು ಕಸ ಬೇರ್ಪಡಿಸುವ ರೀತಿ, ಪಾಲಿಸಬೇಕಾದ ನಿಯಮಗಳ ಕುರಿತು ಬಿಬಿಎಂಪಿ ವತಿಯಿಂದ ಮಾಧ್ಯಮಗಳ ಮೂಲಕ ಜನರಲ್ಲಿ ಜಾಗೃತಿ ಮೂಡಿಸಬೇಕು ಮತ್ತು ತರಬೇತಿ ನೀಡಬೇಕೆಂದು ಹೇಳಿದೆ. [ನಮ್ಮ ಹೆಣದ ಮೇಲೆ ಕಸ ಸುರೀರಿ ಅಂದ್ರು ಗೊರೂರಿಗರು]
ಬೆಂಗಳೂರಿನಲ್ಲಿ ಘನ ತ್ಯಾಜ್ಯ ವಿಲೇವಾರಿ ಕುರಿತು ಸಲ್ಲಿಕೆಯಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ನ್ಯಾ. ಎನ್. ಕುಮಾರ್ ಮತ್ತು ನ್ಯಾ. ಬಿ.ವಿ. ನಾಗರತ್ನಾ ನೇತೃತ್ವದ ವಿಭಾಗೀಯ ಪೀಠ ಈ ಆದೇಶ ನೀಡಿದೆ. ಇದೇ ಪೀಠ ಕಳೆದ ಎರಡು ವರ್ಷಗಳಿಂದ ನಗರದಲ್ಲಿನ ಕಸ ವಿಲೇವಾರಿ ಪ್ರಕ್ರಿಯೆಯನ್ನು ಪರಿಶೀಲಿಸುತ್ತಿದೆ. [ಕಸ ಬೇರ್ಪಡಿಸದವರಿಗೆ ಭಾರೀ ದಂಡ]
ಬೆಂಗಳೂರಿನಲ್ಲಿ ಕಸ ಬೇರ್ಪಡಿಸುವುದನ್ನು 2002ರ ಅಕ್ಟೋಬರ್ ತಿಂಗಳಿನಲ್ಲಿಯೇ ಕಡ್ಡಾಯಗೊಳಿಸಲಾಗಿತ್ತು. ಆದರೆ, ಇದುವರೆಗೂ ಸರಿಯಾಗಿ ಜಾರಿಗೆ ಬಂದಿಲ್ಲ. ಇದಕ್ಕೆ ಹಲವು ಪ್ರದೇಶಗಳಲ್ಲಿ ಹಸಿ ಮತ್ತು ಒಣ ತ್ಯಾಜ್ಯ ವಿಲೇವಾರಿಗೆ ಸೌಲಭ್ಯವಿಲ್ಲದಿರುವುದೂ ಕಾರಣವಾಗಿತ್ತು. [ಲಾಲ್ ಬಾಗ್ ನಲ್ಲಿ ಅಕ್ರಮ ಚಟುವಟಿಕೆಗೆ ಮಣ್ಣು]
ಆದ್ದರಿಂದ ಹೈ ಕೋರ್ಟ್ ಹಲವು ಸಲಹೆಗಳನ್ನು ನೀಡಿದೆ. ಎಲ್ಲ 198 ವಾರ್ಡ್ನಲ್ಲೂ ಕನಿಷ್ಠ ಒಂದು ತ್ಯಾಜ್ಯ ನಿರ್ವಹಣೆ ಕೇಂದ್ರ ಇರಲೇಬೇಕು ಹಾಗೂ ಎಲ್ಲ 28 ವಿಧಾನಸಭೆ ಮತಕ್ಷೇತ್ರದಲ್ಲಿಯೂ ಹಸಿ ತ್ಯಾಜ್ಯ ನಿರ್ವಹಣೆ ಕೇಂದ್ರ ಇರಬೇಕೆಂದು ಸೂಚಿಸಿದ್ದಾರೆ.