ರಸ್ತೆ ಗುಂಡಿಗೆ ಹಾವೇರಿ ಮೂಲದ ಟೆಕ್ಕಿ ಬಲಿ: ಜಲಮಂಡಳಿ ನಿರ್ಲಕ್ಷತೆ ವಿರುದ್ಧ ಜನಾಕ್ರೋಶ
ಬೆಂಗಳೂರು, ಮಾ. 14: ರಾಜಧಾನಿಯಲ್ಲಿ ರಸ್ತೆ ಗುಂಡಿ ಸಾಫ್ಟ್ವೇರ್ ಇಂಜಿನಿಯರ್ ಜೀವವನ್ನು ಕಸಿದುಕೊಂಡಿದೆ. ಜಲಮಂಡಳಿ ಅಗೆದಿದ್ದ ರಸ್ತೆ ಗುಂಡಿಗೆ ಬಿದ್ದು ಹಾವೇರಿ ಮೂಲದ ಯುವಕ ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ಎಂ.ಎಸ್. ಪಾಳ್ಯದಲ್ಲಿ ಭಾನುವಾರ ರಾತ್ರಿ ನಡೆದಿದೆ.
ಹಾವೇರಿ ಮೂಲದ ಅಶ್ವಿನ್ (27) ಮೃತಪಟ್ಟ ಯುವಕ. ಖಾಸಗಿ ಕಂಪನಿಯಲ್ಲಿ ಸಾಫ್ಟ್ ವೇರ್ ಎಂಜಿನಿಯರ್ ಆಗಿದ್ದ ಅಶ್ವಿನ್ ಭಾನುವಾರ ತನ್ನ ಸ್ನೇಹಿತರನ್ನು ಭೇಟಿ ಮಾಡಲು ತೆರಳಿದ್ದ. ಸ್ನೇಹಿತರನ್ನು ಭೇಟಿ ಮಾಡಿ ವಾಪಸು ಎಂ.ಎಸ್. ಪಾಳ್ಯದಲ್ಲಿದ್ದ ತನ್ನ ಮನೆಗೆ ಬೈಕ್ ನಲ್ಲಿ ತೆರಳಿದ್ದ.
ಎಂ.ಎಸ್. ಪಾಳ್ಯದ ಮುನೇಶ್ವರ ಬಡಾವಣೆ ಕಡೆ ಹೆಲ್ಮೆಟ್ ಧರಿಸದೇ ಬೈಕ್ ನಲ್ಲಿ ಹೋಗುತ್ತಿದ್ದ. ಈ ವೇಳೆ ಜಲಮಂಡಳಿ ಹಾಗೂ ಬಿಬಿಎಂಪಿ ತೆಗೆದಿದ್ದ ಗುಂಡಿಗೆ ಬಿದ್ದು ಅಶ್ವಿನ್ ಗಾಯಗೊಂಡಿದ್ದ. ಕೂಡಲೇ ಆತನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾನೆ.

ಸಾವಿಗೆ ಕಾರಣವಾದ ರಸ್ತೆ ಗುಂಡಿ ಮುಂದೆ ಜಮಾಯಿಸಿದ ಅಶ್ವಿನ್ ಸ್ನೇಹಿತರು ಬೆಂಗಳೂರು ಜಲಮಂಡಳಿ ಹಾಗೂ ಬಿಬಿಎಂಪಿ ನಿರ್ಲಕ್ಷ್ಯವೇ ಅಶ್ವಿನ್ ಸಾವಿಗೆ ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಸ್ತೆ ಗುಂಡಿಯ ಬಗ್ಗೆ ಯಾವುದೇ ಎಚ್ಚರಿಕೆ ಬ್ಯಾರಿಕೇಡ್ ಗಳನ್ನು ಹಾಕಿಲ್ಲ. ಹೀಗಾಗಿ ಅಶ್ವಿನ್ ಸಾವನ್ನಪ್ಪಿದ್ದಾನೆ. ಇದಕ್ಕೆ ಬಿಬಿಎಂಪಿ ಹಾಗೂ ಜಲಮಂಡಳಿ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎಂದು ಆರೋಪ ಮಾಡಿದ್ದಾರೆ.
ಬೈಕ್ ಸವಾರಿ ಮಾಡುತ್ತಿದ್ದ ಅಶ್ವಿನ್ ಹೆಲ್ಮೆಟ್ ಧರಿಸಿರಲಿಲ್ಲ ಎನ್ನಲಾಗಿದೆ. ಇನ್ನು ವಾಹನ ಚಾಲನೆ ವೇಳೆ ಮದ್ಯಪಾನ ಮಾಡಿದ್ದನೇ ಎಂಬುದನ್ನು ಖಾತ್ರಿ ಪಡಿಸಿಕೊಳ್ಳಲು ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಗಿದೆ. ಯಲಹಂಕ ಸಂಚಾರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಹೈಕೋರ್ಟ್ ಚಾಟಿಗೂ ಕ್ಯಾರೆ ಎನ್ನದ ಜಲಮಂಡಳಿ ಮತ್ತು ಬಿಬಿಎಂಪಿ:
ರಾಜಧಾನಿ ಬೆಂಗಳೂರಿನಲ್ಲಿ ರಸ್ತೆ ಗುಂಡಿಗಳಿಗೆ ಮುಗ್ಧರು ಜೀವ ಕಳೆದುಕೊಳ್ಳುತ್ತಿದ್ದಾರೆ. ಈ ಕುರಿತು ಸ್ವಯಂ ಪ್ರೇರಿತ ಕೇಸು ದಾಖಲಿಸಿಕೊಂಡಿದ್ದ ಹೈಕೋರ್ಟ್ ಬಿಬಿಎಂಪಿ ಹಾಗೂ ಜಲಮಂಡಳಿಗೆ ತರಾಟೆಗೆ ತೆಗೆದುಕೊಂಡಿತ್ತು. ಇದರ ನಡುವೆ ಮಾಗಡಿ ರಸ್ತೆಯಲ್ಲಿ ಇತ್ತೀಚೆಗೆ ಶಿಕ್ಷಕಿ ರಸ್ತೆ ಗುಂಡಿಗೆ ಬಲಿಯಾಗಿದ್ದರು. ಮಾಗಡಿ ರಸ್ತೆಯ ಗೊಲ್ಲರಹಟ್ಟಿ ಬಳಿ ಪೊಲೀಸ್ ಎಎಸ್ಐ ರಸ್ತೆ ಗುಂಡಿಗೆ ಜೀವ ಕಳೆದುಕೊಂಡಿದ್ದರು. ಮಾತ್ರವಲ್ಲ ಪದೇ ಪದೇ ರಸ್ತೆ ಗುಂಡಿ ಅವಘಡಗಳು ಸಂಭವಿಸುತ್ತಲೇ ಇವೆ. ಹೈಕೋರ್ಟ್ ಚಾಟಿ ಬೀಸಿದರೂ ಬಿಬಿಎಂಪಿ ಹಾಗೂ ಜಲಮಂಡಳಿ ಅಧಿಕಾರಿಗಳು ರಸ್ತೆ ಅಗೆಯುವ ಕೆಲಸ ಬಿಟ್ಟಂತೆ ಕಾಣುತ್ತಿಲ್ಲ.












Click it and Unblock the Notifications