'ಎಲ್ಲಾ ಹಣೆಬರಹ': ದರ್ಶನ್ ಬಂಧನದ ಬಗ್ಗೆ ಶಿವ ರಾಜ್ಕುಮಾರ್ ಮೊದಲ ಪ್ರತಿಕ್ರಿಯೆ
ಬೆಂಗಳೂರು, ಜೂನ್ 30: ಚಿತ್ರದುರ್ಗ ರೇಣುಕಾಸ್ವಾಮಿ ಪ್ರಕರಣದಲ್ಲಿ ಕನ್ನಡ ಚಿತ್ರರಂಗದ ಖ್ಯಾತ ನಟ ದರ್ಶನ್ ಜೈಲುಪಾಲಾಗಿದ್ದಾರೆ. ಈ ಬಗ್ಗೆ ನಟ ಶಿವ ರಾಜ್ಕುಮಾರ್ ಮೊದಲ ಬಾರಿಗೆ ಪ್ರತಿಕ್ರಿಯಿಸಿದ್ದು, ಎಲ್ಲಾ ಹಣೆಬರಹ ಎಂದಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗ ಏನೂ ಮಾಡಲು ಆಗುವುದಿಲ್ಲ. ಯಾಕೆಂದರೆ ಹಣೆಬರಹ ಅಂಥಾ ಒಂದಿರುತ್ತದೆ. ಹಣೆ ಬರಹ ಅಂತಹ ಬಂದಾಗ ನಾವೇನು ಮಾಡಲು ಆಗುವುದಿಲ್ಲ. ನಾವೀಗ ಏನು ಮಾತನಾಡಲು ಹೋದರು ಸರಿಯಾಗುವುದಿಲ್ಲ. ನಾವೇನು ಮಾಡುತ್ತಿದ್ದೇವೆ ಅದು ಸರಿನಾ ಅಂತಾ ನಾವು ಯೋಚನೆ ಮಾಡಬೇಕಾಗುತ್ತದೆ. ಅದನ್ನು ಬಿಟ್ಟು ನಾವೇನು ಹೇಳಲು ಆಗುವುದಿಲ್ಲ.

ಇದೆಲ್ಲಾ ಒಂಥರಾ ಪಾರ್ಟ್ ಆಫ್ ದಿ ಲೈಫ್. ಒಳ್ಳೆಯದು ಕೆಟ್ಟದ್ದು ಎರಡೂ ನಡೆಯುತ್ತದೆ. ನೋವಾಗುತ್ತದೆ. ಯಾಕಪ್ಪ ಹೀಗಾಯ್ತು ಅಂತಾ ಬೇಸರವಾಗುತ್ತದೆ. ಆ ಕುಟುಂಬಕ್ಕಾಗಲೀ, ದರ್ಶನ್ ಕುಟುಂಬಕ್ಕಾಗಲೀ ನೋವಾಗುತ್ತದೆ. ಆದರೆ ನಾವು ಏನು ಮಾಡೋಕೆ ಆಗಲ್ಲ. ನಾವು ಎಲ್ಲವನ್ನೂ ಎದುರಿಸಬೇಕು. ಮುಂದಿನ ದಿನಗಳಲ್ಲಿ ನೋಡೋಣ. ಸದ್ಯ ತನಿಖೆ ನಡೆಯುತ್ತಿದೆ. ನ್ಯಾಯ ಏನಿದೆಯೋ ಅದು ಆಗುತ್ತದೆ ಎಂದರು.
ರೇಣುಕಾಸ್ವಾಮಿ ಕೊಲೆ ಬಗ್ಗೆ ಹಿರಿಯ ನಟ ಸುಂದರ್ ರಾಜ್ ಬೇಸರ
ಕೊಲೆ ಪ್ರಕರಣದಲ್ಲಿ ದರ್ಶನ್ ಜೈಲು ಸೇರಿದ್ದು, ಈ ಘಟನೆಯ ಬಗ್ಗೆ ಹಿರಿಯ ನಟ ಸುಂದರ್ ರಾಜ್ ಬೇಸರ ಹೊರಹಾಕಿದ್ದಾರೆ. ಇದುವರೆಗೂ ಈ ರೀತಿ ಘಟನೆಗಳು ನಮ್ಮ ಇಂಡಸ್ಟ್ರಿಯಲ್ಲಿ ನಡೆದಿಲ್ಲ. ಈ ಘಟನೆ ನಡೆದಿದ್ದು ದುರಾದೃಷ್ಟ. ಜೀವ ಕೊಡಲು ಆಗಲ್ಲ ಎಂದ ಮೇಲೆ ಜೀವ ತೆಗೆಯೋ ಹಕ್ಕು ಯಾರಿಗೂ ಇಲ್ಲ. ಇವತ್ತಿನ ವಿದ್ಯಮಾನಗಳ ಬಗ್ಗೆ ಬಹಳ ನೋವಿದೆ. ಈ ರೀತಿ ಮಾಡಿಕೊಳ್ಳುವುದರಿಂದ ಯಾರಿಗೆ ತೊಂದರೆ? ಅನ್ನೋದರ ಕುರಿತು ಎಲ್ಲರು ಗಂಭೀರವಾಗಿ ಯೋಚನೆ ಮಾಡಬೇಕು. ಐದು ತಿಂಗಳ ಗರ್ಭಿಣಿಗೆ ಸಾಂತ್ವನ ಹೇಳಬಹುದು. ಆದರೆ, ಆ ಮಗುವಿಗೆ ತಂದೆ ವಾಪಸ್ ಬರ್ತಾನಾ? ಎಂದು ಸುಂದರ್ ರಾಜ್ ಪ್ರಶ್ನಿಸಿದ್ದಾರೆ.












Click it and Unblock the Notifications