BWSSB ಹೊಸ ಚಿಂತನೆ; ಬಿಲ್ನಲ್ಲಿ ಸಿಗಲಿದೆ ವಿನಾಯಿತಿ
ಬೆಂಗಳೂರು, ಜುಲೈ 29; ಬೆಂಗಳೂರು ನಗರದ ಜನರಿಗೆ ಜಲಮಂಡಳಿ ಹೊಸ ಯೋಜನೆಯೊಂದನ್ನು ಘೋಷಣೆ ಮಾಡಲಿದೆ. ಇದರ ಮೂಲಕ ಜನರು ನೀರಿನ ಬಿಲ್ನಲ್ಲಿ ಶೇ 5 ರಷ್ಟು ವಿನಾಯಿತಿಯನ್ನು ಪಡೆಯಬಹುದಾಗಿದೆ.
ನಗರದಲ್ಲಿ ಮಳೆ ನೀರು ಕೊಯ್ಲು ಯೋಜನೆ ಆಳವಡಿಕೆ ಮಾಡಿಕೊಂಡ ಕಟ್ಟಡದ ಮಾಲೀಕರಿಗೆ ನೀರಿನ ಬಿಲ್ನಲ್ಲಿ ವಿನಾಯಿತಿ ನೀಡಲಾಗುತ್ತದೆ. ಬಿಬಿಎಂಪಿ ಇಂತಹ ಯೋಜನೆ ಜಾರಿಗೊಳಿಸಲು ಚಿಂತನೆ ನಡೆಸಿದೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಬೇಗ ಆಸ್ತಿ ತೆರಿಗೆ ಪಾವತಿ ಮಾಡುವವರಿಗೆ ರಿಯಾಯಿತಿಯನ್ನು ನೀಡುತ್ತದೆ. ಇದೇ ಮಾದರಿಯಲ್ಲಿ ನೀರಿನ ಬಿಲ್ನಲ್ಲಿ ರಿಯಾಯಿತಿ ನೀಡಲು ಜಲಮಂಡಳಿ ಮುಂದಾಗಿದೆ.

ಮಳೆ ನೀರು ಕೊಯ್ಲು ಕಡ್ಡಾಯ; ಬೆಂಗಳೂರು ಜಲಮಂಡಳಿ 30*40 ನಿವೇಶನ ಮತ್ತು ಅದಕ್ಕಿಂತ ದೊಡ್ಡ ಅಳತೆಯ ನಿವೇಶನದಲ್ಲಿ ಮನೆ ನಿರ್ಮಾಣ ಮಾಡಿದವರು ಮಳೆ ನೀರು ಕೊಯ್ಲು ಕಡ್ಡಾಯವಾಗಿ ಅಳವಿಡಿಕೊಳ್ಳಬೇಕು ಎಂದು ನಿಯಮ ರೂಪಿಸಿದೆ.
ಆದರೆ ಇದು ನಗರದಲ್ಲಿ ಅನುಷ್ಠಾನಕ್ಕೆ ಬಂದಿಲ್ಲ. ಈಗ ಜಲಮಂಡಳಿ ಮಳೆ ನೀರು ಕೊಯ್ಲು ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಮುಂದಾಗಿದ್ದು, ಈ ಮೂಲಕ ಕಾವೇರಿ ನೀರಿನ ಮೇಲಿನ ಅವಲಂಬನೆ ಕಡಿಮೆ ಮಾಡಲು ಮುಂದಾಗಿದೆ.
ಜಲಮಂಡಳಿ ಅಧ್ಯಕ್ಷ ಎನ್. ಜಯರಾಮ್ ಈ ಕುರಿತು ಮಾಹಿತಿ ನೀಡಿದ್ದಾರೆ. "ಜಲಮಂಡಳಿ 100 ಕಿ. ಮೀ. ದೂರದಿಂದ ನಗರಕ್ಕೆ ನೀರು ತರುತ್ತದೆ. 1000 ಲೀಟರ್ ನೀರು ಶುದ್ಧೀಕರಣಕ್ಕೆ 90 ರೂ. ವೆಚ್ಚ ಮಾಡುತ್ತದೆ. ಆದರೆ ಜನರಿಂದ ಮಂಡಳಿಗೆ ಕೇವಲ 41 ರೂ. ಸಿಗುತ್ತದೆ" ಎಂದು ಹೇಳಿದ್ದಾರೆ.
ಮಳೆ ನೀರು ಕೊಯ್ಲು ಕಡ್ಡಾಯಗೊಳಿಸಿದರೆ ನಗರದಲ್ಲಿನ ಅಂತರ್ಜಲ ಮಟ್ಟ ಹೆಚ್ಚಾಗಲಿದೆ. ಮಳೆಗಾಲದಲ್ಲಿ ವ್ಯರ್ಥವಾಗಿ ಹರಿದು ಹೋಗುವ ನೀರು ಭೂಮಿಯಲ್ಲಿ ಇಂಗಲಿದೆ.
ಹಲವು ಮನೆಗಳಲ್ಲಿ ಮಳೆ ನೀರು ಕೊಯ್ಲು ಜಾರಿಗೊಳಿಸಿದರೂ ಅದರ ನೀರನ್ನು ಶೌಚಾಲಯಕ್ಕೆ ಬಿಡಲಾಗಿದೆ. ಒಳಚರಂಡಿ ಮೂಲಕ ನೀರು ವ್ಯರ್ಥವಾಗುತ್ತಿದೆ. ಯೋಜನೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಿ ನೀರಿನ ಮೇಲಿನ ಅವಲಂಬನೆ ಕಡಿಮೆ ಮಾಡಲು ಜಲಮಂಡಳಿ ಚಿಂತನೆ ನಡೆಸಿದೆ.
ಸರ್ಕಾರೇತರ ಸ್ವಯಂ ಸೇವಾ ಸಂಸ್ಥೆಗಳ ನೆರವು ಪಡೆದು ಮಳೆ ನೀರು ಕೊಯ್ಲು ಯೋಜನೆಯನ್ನು ಆಳವಡಿಕೆ ಮಾಡಿಕೊಳ್ಳುವಂತೆ ಪ್ರಚಾರವನ್ನು ಮಾಡಲಾಗುತ್ತದೆ. ಕೆಲವೇ ದಿನಗಳಲ್ಲಿ ಈ ಕುರಿತು ಅಂತಿಮ ಆದೇಶ ಪ್ರಕಟವಾಗುವ ನಿರೀಕ್ಷೆ ಇದೆ.












Click it and Unblock the Notifications