ಬೆಂಗಳೂರು: ಪೊಲೀಸರ ದೌರ್ಜನ್ಯಕ್ಕೆ ಕೈ ಕಳೆದುಕೊಂಡ ಯುವಕ, ಗಂಭೀರ ಆರೋಪ
ಬೆಂಗಳೂರು, ಡಿಸೆಂಬರ್ 01: ಕಳ್ಳತನ ಆರೋಪದ ಮೇಲೆ ವಿಚಾರಣೆ ಹೆಸರಿನಲ್ಲಿ ಯುವಕನೋರ್ವನನ್ನು ಠಾಣೆಗೆ ಕರೆತಂದ ಪೊಲೀಸರು ಮಾರಣಾಂತಿಕ ಹಲ್ಲೆ ನಡೆಸಿದ್ದು ಅದರ ಪರಿಣಾಮವಾಗಿ ಕೈಯನ್ನೇ ಕಳೆದುಕೊಂಡಿದ್ದಾರೆ ಎನ್ನುವ ಗಂಭೀರ ಆರೋಪ ಮಾಡಲಾಗಿದೆ.
ನಗರದ ವೈಟ್ಫೀಲ್ಡ್ ವಿಭಾಗ ವ್ಯಾಪ್ತಿಯಲ್ಲಿನ ವರ್ತೂರು ಪೊಲೀಸ್ ಠಾಣೆಯ ಸಿಬ್ಬಂದಿ ಈ ಕೃತ್ಯವೆಸಗಿರುವ ಆರೋಪ ಕೇಳಿಬಂದಿದ್ದು, ಪ್ರಮುಖವಾಗಿ ಠಾಣೆಯ ಇನ್ಸ್ಪೆಕ್ಟರ್ ಸೋಮಶೇಖರ್, ಎಸ್ಸೈ ಮಂಜುನಾಥ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಯುವಕನ ಪೋಷಕರು ಒತ್ತಾಯಿಸಿದ್ದಾರೆ.
ವಾಹನಗಳ ಬ್ಯಾಟರಿ ಕಳವು ಆರೋಪ ಪ್ರಕರಣ ಸಂಬಂಧ 22 ವರ್ಷದ ಸಲ್ಮಾನ್ ಖಾನ್ನನ್ನು ಅ.27ರಂದು ವರ್ತೂರು ಠಾಣಾ ಪೊಲೀಸರು ಬಂಧಿಸಿ, ಮೂರು ದಿನಗಳ ಕಾಲ ಚಿತ್ರಹಿಂಸೆ ಕೊಟ್ಟಿದ್ದರು ಎಂದು ಆರೋಪಿಸಲಾಗಿದೆ.

ಬಳಿಕ ಬ್ಯಾಟರಿ ಕಳವು ಪ್ರಕರಣ ಮಾತ್ರವಲ್ಲದೆ, ಇನ್ನಿತರೆ ಕಳವು ಪ್ರಕರಣಗಳಲ್ಲಿ ಭಾಗಿಯಾಗಿರುವುದಾಗಿ ಒಪ್ಪಿಕೊಳ್ಳುವಂತೆ ಪಟ್ಟುಹಿಡಿದ ತನಿಖಾಧಿಕಾರಿಗಳು ನನ್ನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದರು ಎಂದು ಸಲ್ಮಾನ್ ದೂರಿದ್ದಾರೆ.
ಸಲ್ಮಾನ್ ತಾಯಿ ಶಬೀನಾ ಮಾತನಾಡಿ, ಸಲ್ಮಾನ್ ದುಡಿಮೆಯ ಮೇಲೆ ನಮ್ಮ ಕುಟುಂಬದ ಜೀವನ ನಿಂತಿದೆ. ಹೀಗಿರುವಾಗ ವಿಚಾರಣೆಗೆಂದು ಕರೆತಂದು, ಕೈಮುರಿದು ಮನೆಗೆ ಕಳುಹಿಸಿದ್ದಾರೆ, ಇಂತಹ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಘಟನೆ ಹಿನ್ನೆಲೆ: ಸಲ್ಮಾನ್ ಖಾನ್ ಕೋಳಿ ಅಂಗಡಿ ವ್ಯಾಪಾರ ನಡೆಸುತ್ತಿದ್ದು, 2021 ಅಕ್ಟೋಬರ್ 27ರಂದು ಕಳ್ಳತನಕ್ಕೆ ಸಂಬಂಧಿಸಿದಂತೆ ರಾತ್ರಿ 11.30ರ ವೇಳೆಗೆ ಠಾಣೆಗೆ ಕರೆದೊಯ್ಯಲಾಗಿತ್ತು.
ಎಷ್ಟು ಹೊತ್ತಾದರೂ ಮಗ ಮನೆಗೆ ಬಾರದ ಹಿನ್ನೆಲೆಯಲ್ಲಿ ಆತನನ್ನು ವಿಚಾರಿಸಲು ತಂದೆ ಹಾಗೂ ತಾಯಿ ಠಾಣೆಗೆ ಹೋಗಿದ್ದಾರೆ. ನಿಮ್ಮ ಮಗ ಇಲ್ಲಿ ಇಲ್ಲ ಎಂದು ಹೇಳಿ ಪೋಷಕರನ್ನು ಕಳುಹಿಸಿದ್ದರು.
ಬಳಿಕ ಸರ್ಜಾಪುರ ಪೊಲೀಸ್ ಠಾಣೆಗೆ ಹೋಗಿ ವಿಚಾರಿಸಿದಾಗ ಅಲ್ಲಿಯೂ ಇಲ್ಲ ಎಂಬ ಉತ್ತರವನ್ನು ಪೊಲೀಸರು ನೀಡಿದ್ದರು. ಮತ್ತೆ ವರ್ತೂರು ಪೊಲೀಸ್ ಠಾಣೆಗೆ ಬಂದಾಗ ಸ್ಟೇಷನ್ ಒಳಗಡೆಯಿಂದಲೇ ಸಲ್ಮಾನ್ ಕಿರುಚಾಡುವುದು ಕೇಳಿದೆ. ಆಗ ತಾಯಿ ಯಾವುದೇ ದೂರು ಇಲ್ಲದೆ ನನ್ನ ಮಗನನ್ನು ಯಾಕೆ ಬಂಧಿಸಿದ್ದೀರಿ ಎಂದು ಪೊಲೀಸರನ್ನು ಕೇಳಿದ್ದಾರೆ.
ಪೊಲೀಸರು ನನ್ನ ಮಗನನ್ನು ಯಾವುದೇ ಕಳ್ಳತನದ ಸುಳ್ಳು ಆರೋಪದಲ್ಲಿ ಸಿಲುಕಿಸಿ ಮಾರಣಾಂತಿಕವಾಗಿ ಹೊಡೆದಿದ್ದಾರೆ ಇದರಿಂದಾಗಿ ಆತನ ಬಲಗೈ ಸಂಪುರ್ಣ ಜಖಂಗೊಂಡಿದ್ದು, ರಕ್ತ ಹೆಪ್ಪುಗಟ್ಟುವಂತೆ ಹೊಡೆದ ಪರಿಣಾಮ ಕೀವು ತುಂಬಿದೆ.
ಏಕಾಏಕಿ ಜ್ವರ ಬಂದು ಕುಸಿದುಹೋಗಿದ್ದ, ನಡೆದಾಡಲು ಸಾಧ್ಯವಾಗಲಿಲ್ಲ, ಬಳಿಕ ಆತನನ್ನು ಬಿಡುಗಡೆ ಮಾಡುವಂತೆ ಕೇಳಿದಾಗ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಬಳಿಕ ಆತನಿಗೆ ಜ್ವರ ಬಂದಿದ್ದ ಕಾರಣ ಪೊಲೀಸರೇ ಕರೆದುಕೊಂಡು ಹೋಗುವಂತೆ ಸೂಚಿಸಿದ್ದರು ಎಂದು ಆರೋಪಿಸಲಾಗಿದೆ.
ವೈದ್ಯರು ಸಲ್ಮಾನ್ನನ್ನು ಪರಿಶೀಲಿಸಿದಾಗ ಆತನಿಗೆ ತೀವ್ರ ಗಾಯಗಳಾಗಿದ್ದು ಮತ್ತು ಆತನ ಬಲಗೈ ಸಂಪೂರ್ಣ ಊನಗೊಂಡಿದೆ, ಕೈ ಸರಿಪಡಿಸಲಾರದಷ್ಟು ಹಾನಿಯಾಗಿರುವುದರಿಂದ ಮತ್ತು ಕೀವು ತುಂಬಿಕೊಂಡಿರುವುದರಿಂದ ಕೈ ತೆಗೆಯಬೇಕು ಎಂದು ಸಲಹೆ ನೀಡಿದ್ದಾರೆ. ವೈದ್ಯರ ಸಲಹೆಯಂತೆ ಕೈಯನ್ನು ಕತ್ತರಿಸಲಾಗಿದೆ. ಶಸ್ತ್ರ ಚಿಕಿತ್ಸೆಗೆ ಎರಡೂವರೆ ಲಕ್ಷ ರೂ ಖರ್ಚಾಗಿದೆ. ಪೊಲೀಸರೇ ಈ ಹಣ ನೀಡಬೇಕು ಎಂದು ಒತ್ತಾಯಿಸಿದ್ದಾರೆ.












Click it and Unblock the Notifications