ಮತ್ತೆ ಕಾಂಗ್ರೆಸ್ನತ್ತ ಹಳ್ಳಿ ಹಕ್ಕಿ ಒಲವು: ಸಿದ್ದರಾಮಯ್ಯ ಆರೋಗ್ಯ ವಿಚಾರಿಸಿದ ಎಚ್ ವಿಶ್ವನಾಥ್
ಬೆಂಗಳೂರು ಡಿಸೆಂಬರ್ 6: ಹಳ್ಳಿ ಹಕ್ಕಿ ಎಚ್. ವಿಶ್ವನಾಥ್ ಮತ್ತೆ ಕಾಂಗ್ರೆಸ್ನತ್ತ ಮುಖ ಮಾಡಿದ್ದು 'ಕೈ' ಹಿಡಿಯುವ ಸಾಧ್ಯತೆಗಳು ಬಲವಾಗಿ ಕಾಣಿಸುತ್ತಿವೆ. ಹೌದು ಇಂದು ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿದ್ದು ಆಶ್ಚರ್ಯ ಮೂಡಿಸಿದೆ. ಈ ವಿಡಿಯೋವನ್ನು ಸ್ವತ: ಸಿದ್ದಯಾಮಯ್ಯ ಟ್ವೀಟ್ನಲ್ಲಿ ಹಂಚಿಕೊಂಡಿದ್ದಾರೆ.
ಈ ಹಿಂದೆ ಇದ್ದ ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಸರ್ಕಾರವನ್ನು ಒಡೆದು ಬಿಜೆಪಿ ಸರ್ಕಾರ ರಚನೆಯಾಗಲು ಕಾರಣೀಕರ್ತರಾದವರಲ್ಲಿ ಎಚ್. ವಿಶ್ವನಾಥ್ ಕೂಡ ಒಬ್ಬರು. ಮೈತ್ರಿ ಸರ್ಕಾರ ತಮ್ಮನ್ನು ಕಡೆಗಣಿಸಿದೆ, ತಮ್ಮ ಆಲೋಚನೆಗಳಿಗೆ ಸ್ಪಂದಿಸುತ್ತಿಲ್ಲ ಎಂಬಿತ್ಯಾದಿ ಆರೋಪಗಳಿಂದ ಕಾಂಗ್ರೆಸ್ ತೊರೆದ ಎಚ್, ವಿಶ್ವನಾಥ್ ಬಿಜೆಪಿ ನಡೆಸಿದ ಆಪರೇಷನ್ ಖೆಡ್ಡಾಕ್ಕೆ ಬಿದ್ದಿದ್ದರು. ಬಿಜೆಪಿ ಸೇರಿದ ಬಳಿಕ ತಮಗೆ ಸಚಿವ ಸ್ಥಾನ ಸಿಗುವ ಆಂಕಾಂಕ್ಷೆಯಲ್ಲಿದ್ದ ಹಳ್ಳಿ ಹಕ್ಕಿಗೆ ಮತ್ತೆ ನಿರಾಸೆಯಾಗಿತ್ತು.
ಮಾಜಿ ಸಚಿವರಾದ ಎಚ್. ವಿಶ್ವನಾಥ್ ಅವರು ಇಂದು ನನ್ನನ್ನು ಭೇಟಿಯಾಗಿ ಆರೋಗ್ಯ ವಿಚಾರಿಸಿದರು. pic.twitter.com/Kitr6TDq0E
— Siddaramaiah (@siddaramaiah) December 6, 2022
ಮೈತ್ರಿ ಸರ್ಕಾರದಿಂದ ಬೇಸತ್ತು ಬಿಜೆಪಿ ಸೇರಿದ ಅತೃಪ್ತ ಶಾಸಕರ ಪೈಕಿ ಕೆಲವರಿಗೆ ಮಾತ್ರ ಸಚಿವ ಸ್ಥಾನ ನೀಡಲಾಗಿತ್ತು. ತಮಗೆ ಸಚಿವ ಸ್ಥಾನ ನೀಡುವ ವಿಶ್ವಾಸದಲ್ಲಿ ಬಿಜೆಪಿಯನ್ನು ಹಾಡಿ ಹೊಗಳಿದ್ದ ಎಚ್. ವಿಶ್ವನಾಥ್ ಯಾವಾಗ ತಮಗೆ ಸಚಿವ ಸ್ಥಾನ ಕೈ ತಪ್ಪಿತೋ ಆಗ ಮತ್ತೆ ಬಿಜೆಪಿ ವಿರುದ್ಧ ಆಕ್ರೋಶ ಹೊರಹಾಕಲು ಶುರು ಮಾಡಿದ್ದರು. ನಂಬಿದವರಿಗೆ ಮೋಸ ಮಾಡಿದೆ ಎಂದು ಬಿಜೆಪಿಯನ್ನು ದೂರಿದ್ದರು. ಬಿಜೆಪಿ ಸರ್ಕಾರ ರಚನೆಯಾದಾಗಿನಿಂದಲೂ ವಿಶ್ವನಾಥ್ ಕಮಲದ ವಿರುದ್ಧ ಕೆಂಡ ಕಾರುತ್ತಲೇ ಬಂದಿದ್ದಾರೆ. ಆದರೀಗ ವಿಶ್ವನಾಥ್ ಮತ್ತೆ ಪಕ್ಷ ಪದಲಾಯಿಸಲು ತೀರ್ಮಾನಿಸಿದ್ದಾರಾ ಎನ್ನುವ ಅನುಮಾನಗಳು ಶುರುವಾಗಿದೆ. ಇದಕ್ಕೆ ಪುಷ್ಠಿ ನೀಡುವಂತೆ ಅವರು 'ಕೈ' ನಾಯಕರನ್ನು ಭೇಟಿ ಮಾಡುತ್ತಿರುವುದೇ ಸಾಕ್ಷಿ.
ದೆಹಲಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ವಿಶ್ವನಾಥ್ ಭೇಟಿ ಮಾಡಿರುವ ಹಿನ್ನೆಲೆಯಲ್ಲಿ ಮತ್ತೆ ವಿಶ್ವನಾಥ್ ಪಕ್ಷಾಂತರ ಮಾಡುತ್ತಾರೆ ಎಂಬ ಸುದ್ದಿ ದಟ್ಟವಾಗಿದೆ. ಬಾಯ್ಬಿಟ್ರೆ ಸಾಕು ಸ್ವಪಕ್ಷದ ವಿರುದ್ಧ ಕಿಡಿಕಾರುವ ಬಿಜೆಪಿ ವಿಧಾನಪರಿಷತ್ ಸದಸ್ಯ ವಿಶ್ವನಾಥ್, ಇದೀಗ ಸದ್ದಿಲ್ಲದೆ ಮರಳಿ ಕಾಂಗ್ರೆಸ್ ಸೇರುವ ಲಕ್ಷಣಗಳು ಕಾಣುತ್ತಿವೆ. ದೆಹಲಿಯಲ್ಲಿ ನಡೆದ ಈ ಅನಿರೀಕ್ಷಿತ ಬೆಳವಣಿಗೆಗೆ ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.
ಜೊತೆಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನೂ ವಿಶ್ವನಾಥ್ ಭೇಟಿ ಮಾಡಿದ್ದಾರೆ. ಸಣ್ಣ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಸಿದ್ದರಾಮಯ್ಯ ಅವರ ಆರೋಗ್ಯವನ್ನು ವಿಚಾರಿಸಿದ್ದಾರೆ. ಈ ವಿಡಿಯೋವನ್ನು ಸಿದ್ದರಾಮಯ್ಯ ಟ್ವೀಟ್ ಮಾಡುವ ಮೂಲಕ ವಿಡಿಯೋವನ್ನು ಹಂಚಿಕೊಂಡಿದ್ದಾರೆ.
ಹೀಗಾಗಿ ಕೈ ನಾಯಕರನ್ನು ಭೇಟಿ ಮಾಡುತ್ತಿರುವ ಹಳ್ಳಿ ಹಕ್ಕಿ ಮತ್ತೆ ಕಾಂಗ್ರೆಸ್ ಗೆ ಹಾರಲಿದೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಅದೇನೇ ಆಗಲಿ ಹಲವಾರು ಬಾರಿ ಪಕ್ಷ ಬದಲಾಯಿಸಿಕೊಂಡು ಬಂದಿರುವ ಎಚ್. ವಿಶ್ವನಾಥ್ ಒಂದೊಂಮ್ಮೆ ಕಾಂಗ್ರೆಸ್ ಸೇರಿದರೂ ಕಾಂಗ್ರೆಸ್ನಲ್ಲೇ ಉಳಿಯುತ್ತಾರಾ? ಅಥವಾ ಅವಕಾಶ ಸಿಕ್ಕರೆ ಮತ್ತೆ ಪಕ್ಷ ಬದಲಾಯಿಸುತ್ತಾರಾ? ಎನ್ನುವ ಅನುಮಾನಗಳು ಕೂಡ ಇವೆ.