ಶಿಕ್ಷಕಿಗೆ ಲೈಂಗಿಕ ಕಿರುಕುಳ ಆರೋಪ, ಕಾಂಗ್ರೆಸ್ನಿಂದ ಗುರಪ್ಪ ಉಚ್ಛಾಟನೆ!
ಕಾಂಗ್ರೆಸ್ ಮುಖಂಡ ಗುರಪ್ಪ ನಾಯ್ಡು ವಿರುದ್ದ ಶಿಕ್ಷಕಿಯೊಬ್ಬರು ಲೈಂಗಿಕ ಕಿರುಕುಳದ ದೂರು ನೀಡಿದ್ದಾರೆ ಎಂದು ಬಿಜೆಪಿ ತರಾಟೆಗೆ ತೆಗೆದುಕೊಂಡಿದೆ. ಹೆಣ್ಣು ಮಕ್ಕಳ ಜೊತೆ ಅಶ್ಲೀಲವಾಗಿ ವರ್ತಿಸಿ, ಅವರ ವಿಡಿಯೋ ಮಾಡಿಕೊಂಡು ಬ್ಲಾಕ್ ಮೇಲ್ ಮಾಡುವ ಗುರಪ್ಪ ನಾಯ್ಡುರನ್ನು ಕೂಡಲೇ ಬಂಧಿಸಬೇಕೆಂದು ಆಗ್ರಹಿಸಿದೆ.
ಶಿಕ್ಷಕಿಗೆ ಲೈಂಗಿಕ ಕಿರುಕುಳ ಮತ್ತು ಮಹಿಳೆಯ ಗೌರವಕ್ಕೆ ಧಕ್ಕೆ ತಂದ ಆರೋಪದಡಿ ಕಾಂಗ್ರೆಸ್ ಮುಖಂಡ ಬಿ ಗುರಪ್ಪ ನಾಯ್ಡು ವಿರುದ್ಧ ಎಫ್ಐಆರ್ ಕೂಡ ದಾಖಲಾಗಿದೆ. ಇದೇ ಆರೋಪದ ಮೇರೆಗೆ ಗುರಪ್ಪ ಅವರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಆರು ವರ್ಷಗಳ ಕಾಲ ಉಚ್ಚಾಟನೆ ಮಾಡಲಾಗಿದೆ.

ಏನಿದು ಪ್ರಕರಣ?: ತ್ಯಾಗರಾಜ ನಗರದ ಖಾಸಗಿ ಶಾಲೆಯ ಮುಖ್ಯಸ್ಥ ಹಾಗೂ ಕಾಂಗ್ರೆಸ್ ಮುಖಂಡ ಗುರಪ್ಪ ನಾಯ್ಡು ಅವರು ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಶಿಕ್ಷಕಿ ಮಾಡಿದ್ದ ಆರೋಪದ ಮೇರೆಗೆ ಚೆನ್ನಮ್ಮನ ಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿತ್ತು. ಅದೇ ಶಾಲೆಯಲ್ಲಿ ಕೆಲಸ ಮಾಡುತ್ತಿದ್ದ ಶಿಕ್ಷಕಿಗೆ ಗುರಪ್ಪ ಲೈಂಗಿಕ ದೌರ್ಜನ್ಯ ನೀಡಿದ್ದಾರೆ ಎಂದು ಆರೋಪಿಸಲಾಗಿದೆ.
ಎಫ್ಐಆರ್ನಲ್ಲಿ ಉಲ್ಲೇಖಿಸಿರುವಂತೆ ಶಾಲಾ ಶಿಕ್ಷಕಿಯರೂ ಸೇರಿ 75ಕ್ಕೂ ಹೆಚ್ಚು ಮಹಿಳೆಯರು ಶಾಲೆಯಲ್ಲಿ ಕೆಲಸ ಮಾಡುತ್ತಿದ್ದು, ಗುರಪ್ಪ ನಾಯ್ಡು ಅವರು ಶಿಕ್ಷಕಿಯರು ಹಾಗೂ ಮಹಿಳಾ ಸಿಬ್ಬಂದಿಗೆ ತಿಳಿಯದಂತೆ ಅವರ ಬೆತ್ತಲೆ ವಿಡಿಯೋಗಳನ್ನು ರೆಕಾರ್ಡ್ ಮಾಡಿದ್ದಾರೆ. ಅದನ್ನು ತೋರಿಸಿ ತಮ್ಮೊಂದಿಗೆ ಸಹಕರಿಸಲು ಪೀಡಿಸುತ್ತಿದ್ದಾರೆ ಎಂದು ಆರೋಪಿಸಲಾಗಿದೆ.

ತಮ್ಮ ಮಾತು ಕೇಳದಿದ್ದರೆ ಆ ಬೆತ್ತಲೆ ವಿಡಿಯೋಗಳನ್ನು ವೈರಲ್ ಮಾಡುವುದಾಗಿ ಬೆದರಿಕೆ ಹಾಕುತ್ತಾರೆ. ಸಂಸ್ಥೆಯಲ್ಲಿನ ಹೆಣ್ಣುಮಕ್ಕಳನ್ನು ತಮ್ಮ ಕಾಮದಾಸೆಗೆ ಬಳಸಿಕೊಂಡಿದ್ದಾರೆ ಎಂದು ಶಿಕ್ಷಕಿ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ. ಗುರಪ್ಪ ನಾಯ್ಡು ಮೇಲೆ ಕೇಸ್ ದಾಖಲಿಸಲು ಈ ಹಿಂದೆಯೂ ನಿರ್ಧರಿಸಿದ್ದೆವು. ಆದರೆ, ಪ್ರಭಾವಿ ಎನ್ನುವ ಕಾರಣಕ್ಕೆ ಸೈಲೆಂಟ್ ಆಗಿದ್ದೆವು ಎಂದು ಹೇಳಿದ್ದಾರೆ.
ನಾನು ಅವರ ಶಾಲೆಯಲ್ಲೆ ಕೆಲಸ ಮಾಡುತ್ತಿದ್ದೆ. ಈ ವೇಳೆ ನನ್ನನ್ನು ಅವರ ರೂಂಗೆ ಕರೆಯುವುದು, ಯಾವಾಗ ಬರುತ್ತೀಯಾ ಎಂದು ಕೇಳುವುದು ಮಾಡುತ್ತಿದ್ದರು. ಗುರಪ್ಪ ನನ್ನೊಂದಿಗೆ ಅಸಭ್ಯವಾಗಿ ವರ್ತಿಸಿ, ಲೈಂಗಿಕ ಚಟುವಟಿಕೆಗೆ ಪ್ರಚೋದನೆ ನೀಡುತ್ತಿದ್ರು. ತಮ್ಮ ರೂಂನಲ್ಲಿ ನನ್ನ ಕೈಹಿಡಿದು ಎಳೆದಾಡಿದ್ರು ಎಂದು ವಿವರಿಸಿದ್ದಾರೆ.
ನಾನು ಒಳ್ಳೆಯ ಕುಟುಂಬದಿಂದ ಬಂದಿದ್ದೇನೆ. ನನ್ನೊಂದಿಗೆ ಆ ರೀತಿ ವರ್ತಿಸಬೇಡಿ ಎಂದು ಬೇಡಿಕೊಂಡಿದ್ದೆ. ಆಗ ನನಗೆ ಅವಾಚ್ಯವಾಗಿ ನಿಂದಿಸಿ, ಬೂಟ್ನಲ್ಲಿ ಒಡೆಯುತ್ತೇನೆ ಎಂದು ಹೇಳಿದ್ದರು. ಇದೇ ರೀತಿ ಅವರು ಕಿರುಕುಳ ನೀಡುತ್ತಿದ್ದರು. ಇವರ ವರ್ತನೆಯಿಂದ ಮಾನಸಿಕವಾಗಿ ನೋವು ಅನುಭವಿಸಿದ್ದಾಗಿ ಶಿಕ್ಷಕಿ ದೂರಿದ್ದಾರೆ. ಅವರ ಕಿರುಕುಳದಿಂದ ನನಗೆ ಭಯವಾಗಿತ್ತು. ಆ ಶಾಕ್ನಿಂದ ಸುಧಾರಿಸಿಕೊಳ್ಳಲು ನನಗೆ ಈಗಲೂ ಸಾಧ್ಯವಾಗಿಲ್ಲ ಎಂದು ದೂರಿನಲ್ಲಿ ಶಿಕ್ಷಕಿ ತಿಳಿಸಿದ್ದಾರೆ ಎನ್ನಲಾಗಿದೆ.
ಇದನ್ನು ಗಂಭೀರವಾಗಿ ಪರಿಗಣಿಸಿರುವ ಕಾಂಗ್ರೆಸ್, ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಕಾರ್ಯದರ್ಶಿ ಸ್ಥಾನದಿಂದ ಗುರಪ್ಪ ನಾಯ್ಡು ಅವರನ್ನು 6 ವರ್ಷಗಳ ಕಾಲ ಉಚ್ಛಾಟನೆ ಮಾಡಲಾಗಿದೆ. ಈ ಸಂಬಂಧ ಕೆಪಿಸಿಸಿ ಶಿಸ್ತು ಸಮಿತಿ ಅಧ್ಯಕ್ಷ ರೆಹಮಾನ್ ಖಾನ್ ಆದೇಶ ಹೊರಡಿಸಿದ್ದಾರೆ.












Click it and Unblock the Notifications