ಶಾಸಕರ ವಿದೇಶ ಪ್ರವಾಸಕ್ಕೆ ಬಿತ್ತು ತಡೆ
ಬೆಂಗಳೂರು, ಜೂ. 18 : ಅಧ್ಯಯನದ ಹೆಸರಿನಲ್ಲಿ ಶಾಕಸರು ಮೋಜು ಮಸ್ತಿ ಮಾಡಲು ಹೋಗುತ್ತಿದ್ದ ವಿದೇಶ ಪ್ರವಾಸಗಳಿಗೆ ಸ್ಪೀಕರ್ ಕಾಗೋಡು ತಿಮ್ಮಪ್ಪ ಬ್ರೇಕ್ ಹಾಕಿದ್ದಾರೆ. ಇನ್ನು ಮುಂದೆ ಶಾಸಕರು ವಿದೇಶ ಪ್ರವಾಸ ಕೈಗೊಳ್ಳಬೇಕಾದರೆ, ಅದು ವಿಷಯಾಧಾರಿತವಾಗಿರಬೇಕು ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಬೆಂಗಳೂರಿನ ವಿಧಾನಸೌಧದಲ್ಲಿ ಬುಧವಾರ ಪತ್ರಿಕಾಗೋಷ್ಠಿ ನಡೆಸಿದ ಸ್ಪೀಕರ್ ಕಾಗೋಡು ತಿಮ್ಮಪ್ಪ, ಶಾಸಕರ ಮೋಜು ಮಸ್ತಿ ವಿದೇಶ ಪ್ರವಾಸಕ್ಕೆ ಇನ್ನು ಮುಂದೆ ಅವಕಾಶ ನೀಡುವುದಿಲ್ಲ. ಯಾವುದೇ ಶಾಸಕರು ವಿದೇಶ ಪ್ರವಾಸ ಅಥವಾ ದೇಶೀಯ ಪ್ರವಾಸ ಕೈಗೊಂಡರೂ ಆದು ವಿಷಯಾಧಾರಿತ ಮತ್ತು ಅಧ್ಯಯನಕ್ಕೆ ಸೀಮಿತವಾಗಿದ್ದರೆ ಮಾತ್ರ ಅನುಮತಿ ನೀಡುವುದಾಗಿ ಹೇಳಿದರು.

ಶಾಸಕರ ವಿದೇಶ ಪ್ರವಾಸದ ಬಗ್ಗೆ ವರದಿ ನೀಡುವಂತೆ ರಚಿಸಿದ್ದ ಸಮಿತಿ, ಶಾಸಕರ ವಿದೇಶ ಪ್ರವಾಸ ವಿಷಯಾಧಾರಿತವಾಗಿರಬೇಕು ಎಂದು ಶಿಫಾರಸು ಮಾಡಿರುವ ಹಿನ್ನೆಲೆಯಲ್ಲಿ ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಕಾಗೋಡು ತಿಮ್ಮಪ್ಪ ತಿಳಿಸಿದರು. [ಶಾಸಕರ ವಿದೇಶ ಪ್ರವಾಸಕ್ಕೆ ಗೌರ್ನರ್ ಗರಂ]
23ರಿಂದ ಅಧಿವೇಶನ : ಜೂ.23ರಿಂದ ಜುಲೈ 30ರವರೆಗೆ ವಿಧಾನಮಂಡಲದ ಅಧಿವೇಶನ ಅದಿವೇಶನ ನಡೆಯಲಿದೆ ಎಂದು ಸ್ಪೀಕರ್ ಕಾಗೋಡು ತಿಮ್ಮಪ್ಪ ಮಾಹಿತಿ ನೀಡಿದರು. 10 ವರ್ಷಗಳ ಬಳಿಕ ಇದೇ ಮೊಟ್ಟ ಮೊದಲ ಬಾರಿಗೆ 28 ಇಲಾಖೆಗಳ ಬೇಡಿಕೆಗಳ ಮೇಲೆ ಸದನದಲ್ಲಿ ಚರ್ಚೆ ನಡೆಯಲಿದೆ ಎಂದರು.
ಅಧಿವೇಶನಕ್ಕೆ ಸಂಬಂಧಿಸಿದಂತೆ 1,151 ಪ್ರಶ್ನೆಗಳು ಬಂದಿದ್ದು, ಇವುಗಳ ಪೈಕಿ 232 ಪ್ರಶ್ನೆಗಳು ಅಂಗೀಕಾರವಾಗಿವೆ. ಒಂದು ಗಮನ ಸೆಳೆಯುವ ಸೂಚನೆ ಬಂದಿದೆ ಎಂದರು. ಹಿಂದೆ ಮೊದಲ ದಿನ ಸಂತಾಪ ನಿರ್ಣಯವನ್ನು ಮಂಡಿಸಿ ಕಲಾಪವನ್ನು ಮುಂದೂಡಲಾಗುತ್ತಿತ್ತು. ಆದರೆ, ಇದರಲ್ಲಿ ಸ್ಪಲ್ಪ ಬದಲಾವಣೆ ಮಾಡಲಾಗಿದ್ದು, ಸಂತಾಪ ನಿರ್ಣಯ ಕೈಗೊಂಡರೂ ಕಲಾಪವನ್ನು ದಿನದ ಮಟ್ಟಿಗೆ ಮುಂದಕ್ಕೆ ಹಾಕುವುದಿಲ್ಲ ಎಂದು ಹೇಳಿದರು.
ಈ ಬಾರಿಯ ಅಧಿವೇಶನ ಅರ್ಥಪೂರ್ಣವಾಗಿ ನಡೆಯಬೇಕು ಎಂಬುದು ನಮ್ಮ ಆಶಯವಾಗಿದೆ. ಆದ್ದರಿಂದ ಎಲ್ಲಾ ಸದಸ್ಯರು, ಪ್ರತಿಪಕ್ಷಗಳು ಅಧಿವೇಶನ ಸುಸೂತ್ರವಾಗಿ ನಡೆಯಲು ಸಹಕಾರ ನೀಡಬೇಕೆಂದು ಮನವಿ ಮಾಡಿದರು.












Click it and Unblock the Notifications