ರಾಜಧಾನಿಯಲ್ಲೂ ಗೃಹಲಕ್ಷ್ಮಿಯರ ಸಂಭ್ರಮ ಜೋರು: ಮೊಬೈಲ್ಗೆ ಮೆಸೇಜ್, ಮಹಿಳೆಯರು ಖುಷ್
ಬೆಂಗಳೂರು, ಆಗಸ್ಟ್ 30: ಅಂತೂ ಕಾಂಗ್ರೆಸ್ ಕೊಟ್ಟಿದ್ದ ಪ್ರಮುಖ ಗ್ಯಾರಂಟಿಗಳ ಪೈಕಿ ಗೃಹಲಕ್ಷ್ಮಿ ಯೋಜನೆ ಟೇಕಾಫ್ ಆಗಿದೆ. ಬಟನ್ ಒತ್ತುವ ಮೂಲಕ ಕಾಂಗ್ರೆಸ್ ಯುವರಾಜ ರಾಹುಲ್ ಗಾಂಧಿ ಯೋಜನೆಗೆ ಚಾಲನೆ ಕೊಟ್ಟಿದ್ದಾರೆ. ಇನ್ನು ಮೈಸೂರಿನಲ್ಲಿ ಮಾತ್ರವಲ್ಲದೆ ರಾಜಧಾನಿಯಲ್ಲೂ ಗೃಹಲಕ್ಷ್ಮಿಯರ ಸಂಭ್ರಮ ಜೋರಾಗಿತ್ತು.
ಇಂದು ನಾಡಿನ ಮಹಿಳಾ ಮಣಿಯರ ಕಣ್ಣು ಸಾಂಸ್ಕೃತಿಕ ನಗರಿ ಮೈಸೂರಿನ ಮೇಲೆ ಬಿದ್ದಿತ್ತು. ಸರ್ಕಾರ ಭರವಸೆಯಂತೆ ಗೃಹಲಕ್ಷ್ಮಿ ಯೋಜನೆಯಡಿಯಲ್ಲಿ ಮನೆಯೊಡತಿಗೆ 2,000 ರೂಪಾಯಿ ನೀಡುವ ಯೋಜನೆಗೆ ವಿದ್ಯುಕ್ತ ಚಾಲನೆ ಸಿಕ್ಕಿದೆ. ಇನ್ನು ರಾಜಧಾನಿಯಲ್ಲಿ ಈ ಯೋಜನೆಯಲ್ಲಿ ಮನೆಮನೆಗಳಿಗೆ ತಲುಪಿಸಲು ಬಿಬಿಎಂಪಿ 198 ವಾರ್ಡ್ಗಳಲ್ಲಿ ಮೈಸೂರಿನ ಕಾರ್ಯಕ್ರಮದ ನೇರಪ್ರಸಾರ ವ್ಯವಸ್ಥೆ ಮಾಡಿತ್ತು.

ಬಿಬಿಎಂಪಿಯ ಪ್ರತೀ 198 ವಾರ್ಡ್ ಗಳಲ್ಲಿ ಕೂಡ ಸಕಲ ರೀತಿಯಲ್ಲಿ ತಯಾರಿ ಮಾಡಿಕೊಳ್ಳಲಾಗಿತ್ತು. ಬಿಬಿಎಂಪಿ ವ್ಯಾಪ್ತಿಯ 198 ವಾರ್ಡ್ ಗಳಲ್ಲಿ ಕಾರ್ಯಕ್ರಮದ ನೇರ ವೀಕ್ಷಣೆ ಮಾಡುವ ಸಲುವಾಗಿ ಟಿವಿ/ಎಲ್.ಇ.ಡಿ ಪರದೆ ವ್ಯವಸ್ಥೆ ಮಾಡಲಾಗಿತ್ತು. ಕಾರ್ಯಕ್ರಮದ ಸ್ಥಳದಲ್ಲಿ ಆಸನ, ಶೌಚಾಲಯ, ಕುಡಿಯುವ ನೀರು, ವಿದ್ಯುತ್, ಇಂಟರ್ನೆಟ್ ಸೇರಿದಂತೆ ಅಗತ್ಯ ಸೌಲಭ್ಯ ಒದಗಿಸಲಾಗಿತ್ತು. ಗೃಹಲಕ್ಷ್ಮಿ ಯೋಜನೆ ಕುರಿತು ಕರಪತ್ರಗಳನ್ನು ವಿತರಣೆ ಮಾಡಲಾಗಿತ್ತು.
ವಲಯ ಜಂಟಿ ಆಯುಕ್ತರು, ಉಪ ಆಯುಕ್ತರು ಹಾಗೂ ಮುಖ್ಯ ಅಭಿಯಂತರರಿಗೆ ಕಾರ್ಯಕ್ರಮದ ಮೇಲುಸ್ತುವಾರಿ ವಹಿಸಲಾಗಿತ್ತು. ಕಾರ್ಯಕ್ರಮ ಆಯೋಜಿಸಿರುವ ಸ್ಥಳದಲ್ಲಿ ವ್ಯವಹರಿಸಲು ಹಾಗೂ ಮೇಲ್ವಿಚಾರಣೆಗಾಗಿ ಪ್ರತಿಯೊಂದು ವಾರ್ಡಿಗೂ ನೋಡಲ್ ಅಧಿಕಾರಿ ನಿಯೋಜನೆ ಮಾಡಲಾಗಿತ್ತು.
ಬೆಂಗಳೂರು ನಗರ ಜಿಲ್ಲೆಯಲ್ಲಿ ಸುಮಾರು 6,16,480 ಜನ ಫಲಾನುಭವಿಗಳು
ಈಗಾಗಲೇ ಬೆಂಗಳೂರು ನಗರ ಜಿಲ್ಲೆಯಲ್ಲಿ ಸುಮಾರು 6,16,480 ಜನ ಫಲಾನುಭವಿಗಳು ಗೃಹಲಕ್ಷ್ಮಿ ಯೋಜನೆಗೆ ಹೆಸರು ನೋಂದಣಿ ಮಾಡಿಕೊಂಡಿದ್ದಾರೆ. ಟೌನ್ ಹಾಲ್ ಜೆ.ಸಿ ರಸ್ತೆ, ಬೆಂಗಳೂರಿನಲ್ಲಿ ಮುಖ್ಯ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿತ್ತು.

ನಗರದ ಪೂರ್ವ, ಪಶ್ಚಿಮ, ದಕ್ಷಿಣ ವಲಯದಲ್ಲಿ ತಲಾ 44, ಬೊಮ್ಮನಹಳ್ಳಿಯಲ್ಲಿ 16, ಮಹದೇವಪುರದಲ್ಲಿ 17, ಯಲಹಂಕದಲ್ಲಿ 11, ದಾಸರಹಳ್ಳಿಯಲ್ಲಿ 8 ಹಾಗೂ ರಾಜರಾಜೇಶ್ವರಿ ನಗರ ವಲಯದಲ್ಲಿ 14 ಕಡೆಗಳಲ್ಲಿ ಕಾರ್ಯಕ್ರಮ ಪ್ರಸಾರ ವ್ಯವಸ್ಥೆ ಮಾಡಲಾಗಿತ್ತು.
ಬಿಬಿಎಂಪಿ ಮುಖ್ಯ ಆಡಳಿತಗಾರ ರಾಕೇಶ್ ಸಿಂಗ್, ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹಾಗೂ ವಿಶೇಷ ಆಯುಕ್ತರುಗಳು ಭಾಗಿಯಾಗಿದ್ದರು. ಟೌನ್ ಹಾಲ್ ಮುಂಭಾಗ ರಂಗೋಲಿ ಚಿತ್ತಾರ, ಪ್ರವೇಶ ದ್ವಾರದಲ್ಲಿ ಹೂಗಳ ಸ್ವಾಗತ ಹಾಗೂ ಮುಖ್ಯ ವೇದಿಕೆಯಲ್ಲಿ ಹಿರಿಯ ಮಹಿಳೆಯರನ್ನ ಕೂರಿಸಿದ್ದು ಸಹ ವಿಶೇಷವಾಗಿತ್ತು.
ಮೈಸೂರಿನಲ್ಲಿ ಫಲಾನುಭವಿಗಳ ಸೌಲಭ್ಯ ವಿತರಣಾ ಕಾರ್ಯಕ್ರಮ
ಇನ್ನು ಮೈಸೂರಿನಲ್ಲಿ ಫಲಾನುಭವಿಗಳ ಸೌಲಭ್ಯ ವಿತರಣಾ ಕಾರ್ಯಕ್ರಮ ರಾಹುಲ್ ಗಾಂಧಿ, ಗ್ರೀನ್ ಸಿಗ್ನಲ್ ನೀಡಿದ ಬಳಿಕ ಹಣ ಜಮೆಯಾದ ಬಗ್ಗೆ ಮೊಬೈಲ್ಗೆ ಮೆಸೇಜ್ ಬಂದಿದ್ದನ್ನು ಕಂಡು ಮಹಿಳೆಯರು ಖುಷ್ ಆದರು.. ಒಟ್ಟಾರೆ ಎಲ್ಲರ ನಿರೀಕ್ಷೆಗೆ ಕಾರಣವಾಗಿದ್ದ ಗೃಹಲಕ್ಷ್ಮಿ ಯೋಜನೆಯ ಕಾವು ಬೆಂಗಳೂರಿನಲ್ಲಿ ಸಹ ಕಂಡುಬಂದಿದೆ. ಸದ್ಯ ಸರ್ಕಾರದ ಈ ಯೋಜನೆ ಬಹಳ ಸಹಕಾರಿಯಾಗಿದ್ದು, ಮುಂದೆ ಇದಕ್ಕೆ ಯಾವುದೇ ಅಡ್ಡಿ ಬರದಂತೆ ನೋಡಿಕೊಳ್ಳಬೇಕು ಅಂತಾ ಸರ್ಕಾರಕ್ಕೆ ಮನವಿ ಮಾಡಿದರು.












Click it and Unblock the Notifications