ನೂತನ ಪಿಂಚಣಿ ಯೋಜನೆ ರದ್ದತಿಗಾಗಿ ಸರ್ಕಾರಿ ನೌಕರರ ಪ್ರತಿಭಟನೆ
ಬೆಂಗಳೂರು, ಜನವರಿ 20: ನೂತನ ಪಿಂಚಣಿ ಯೋಜನೆ ರದ್ದುಪಡಿಸಿ, ನಿಶ್ಚಿತ ಪಿಂಚಣಿ ಯೋಜನೆ ಜಾರಿಗೆ ತರುವಂತೆ ಆಗ್ರಹಿಸಿ ರಾಜ್ಯ ಸರ್ಕಾರಿ ನೌಕರರ ಸಂಘದ ನೂರಾರು ಸದಸ್ಯರು ಶನಿವಾರ ಬೆಂಗಳೂರಿನ ಸಂಗೊಳ್ಳಿ ರಾಯಣ್ಣ ವೃತ್ತದಿಂದ ಸ್ವಾತಂತ್ರ್ಯ ಉದ್ಯಾನದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು.
ನೂತನ ಪಿಂಚಣಿ ವ್ಯವಸ್ಥೆಯಿಂದ 2006 ರ ನಂತರ ನೇಮಕಗೊಂಡ ಸುಮಾರು1.80 ಲಕ್ಷ ನೌಕರರು ಸಾಮಾಜಿಕ ಅನ್ಯಾಯಕ್ಕೆ ಒಳಗಾಗುವಂತಾಗಿದೆ. ಆರ್ಥಿಕ ಕಾರ್ಯ ನಿರ್ವಹಣೆಯಲ್ಲಿ ಬದ್ಧತೆ ಇಲ್ಲವಾಗಿದೆ. ಇದು ಅನಿಶ್ಚಿತ ಪಿಂಚಣಿ ಯೋಜನೆಯಾಗಿದ್ದು, ನೂತನ ಪಿಂಚಣಿ ಪದ್ಧತಿಗೆ ಒಳಪಡುವ ಸರಕಾರಿ ನೌಕರರು ಸೇವಾ ನಿವೃತ್ತಿ ಸಂದರ್ಭ ಪಿಂಚಣಿ ಇತರೆ ಸವಲತ್ತುಗಳಿಂದ ವಂಚಿತರಾಗುವಂತಾಗಿದೆ ಎಂದು ನೌಕರರು ಆರೋಪಿಸಿದ್ದಾರೆ.
33 ವರ್ಷಕ್ಕಿಂತ ಹೆಚ್ಚು ಸೇವೆ ಸಲ್ಲಿಸಿದ್ದರೂ ಕಡಿಮೆ ಪಿಂಚಣಿ ನಿಗದಿಸಲಾಗಿದೆ. ಪಿಂಚಣಿಗಾಗಿ ವೇತನದಲ್ಲಿ ಶೇ.10ರಷ್ಟು ಕಟಾವಣೆ ಮಾಡಲಾಗುತ್ತಿದೆ. ಅದನ್ನು ಷೇರು ಮಾರುಕಟ್ಟೆಯಲ್ಲಿ ತೊಡಗಿಸಲಾಗುತ್ತಿದೆ. ಕುಟುಂಬ ಪಿಂಚಣಿ, ಮರಣ ಉಪದಾನ, ನಿವೃತ್ತಿ ಉಪದಾನ ಇಲ್ಲವಾಗಿದೆ. ನಿವೃತ್ತರಿಗೆ ಕಾಲಕಾಲಕ್ಕೆ ತುಟ್ಟಿಭತ್ಯೆ ಹೆಚ್ಚಳ ಆಗುವುದಿಲ್ಲ.

ಮನವಿ: ನೂತನ ಯೋಜನೆ ಜಾರಿಯಿಂದ ನಿವೃತ್ತಿ ನಂತರ ನೌಕರರ ಹಾಗೂ ಸರಕಾರದೊಂದಿಗಿನ ಸಂಬಂಧ ಕಡಿದು ಹೋಗುತ್ತದೆ. ಬಾಂಡ್ ರೂಪದ ಭದ್ರತೆ ಇಲ್ಲ. ಜತೆಗೆ ನೌಕರರಿಗೆ ಗರಿಷ್ಟ ಭರವಸೆಯೂ ಇಲ್ಲವಾಗಿದೆ. ಈ ಹಿನ್ನೆಲೆಯಲ್ಲಿ ನೌಕರರ ಹಿತರಕ್ಷ ಣೆಗೆ ಸರಕಾರ ಮುಂದಾಗಬೇಕು ಎಂದು ಸರ್ಕಾರಿ ನೌಕರರು ಒತ್ತಾಯಿಸಿದರು.

ಸಂಗೊಳ್ಳಿ ರಾಯಣ್ಣ ವೃತ್ತದಿಂದ ಆನಂದ್ ರಾವ್ ಸರ್ಕಲ್ ಮೇಲ್ಸೇತುವೆಯಲ್ಲಿ ಜಾಥಾ ನಡೆಯುತ್ತಿರುವ ಕಾರಣ, ವಾಹನಸವಾರರು ಬದಲಿ ರಸ್ತೆಯನ್ನು ಬಳಸಬೇಕು ಎಂದು ಡಿಸಿಪಿ ಟಿ.ಪಿ. ಶಿವಕುಮಾರ್ ಟ್ವೀಟ್ ಮಾಡಿದ್ದಾರೆ.












Click it and Unblock the Notifications