ಪಶ್ನೆ ಪತ್ರಿಕೆ ಸೋರಿಕೆ ತಡೆಗೆ ಖಜಾನೆಯೇ ಬದಲಾವಣೆ !
ಬೆಂಗಳೂರು, ಜನವರಿ 9: ಎಸ್ಸೆಸ್ಸೆಲ್ಸಿ , ದ್ವಿತೀಯ ಪಿಯುಸಿ ಪ್ರಶ್ನೆ ಪತ್ರಿಕೆ ಸೋರಿಕೆ ತಡೆಯಲು ರಾಜ್ಯ ಸರಕಾರ ಮಾಸ್ಟ್ರರ್ ಪ್ಲಾನ್ ಮಾಡಿದ್ದು, ಈ ಬಾರಿ ಪ್ರಶ್ನೆಪತ್ರಿಕೆಗಳನ್ನು ಜಿಲ್ಲಾ ಖಜಾನೆಗಳಿಂದಲೇ ಜಿಲ್ಲಾವಾರು ಪರೀಕ್ಷಾ ಕೇಂದ್ರಗಳಿಗೆ ರವಾನಿಸುವ ನಿರ್ಧಾರ ಮಾಡಿದೆ.
ಪ್ರಶ್ನೆ ಪತ್ರಿಕೆಗಳನ್ನು ಇದುವರೆಗೂ ತಾಲ್ಲೂಕು ಕೇಂದ್ರಗಳಿಂದ ಪರೀಕ್ಷಾ ಕೇಂದ್ರಗಳಿಗೆ ರವಾನಿಸಲಾಗುತ್ತಿತ್ತು. ಹಿಂದೆ ದ್ವಿತೀಯ ಪಿಯುಸಿ ವಾರ್ಷಿಕರ ಪರೀಕ್ಷೆ ರಸಾಯನ ಶಾಸ್ತ್ರ ಪತ್ರಿಕೆ ಎರಡು ಬಾರಿ ಸೋರಿಕೆಯಾಗಿದ್ದು ತನಿಖೆಯನ್ನು ಸಿಐಡಿಗೆ ವಹಿಸಲಾಗಿತ್ತು. ಹೀಗಾಗಿ ಈ ವರ್ಷದಿಂದ ಜಿಲ್ಲಾ ಖಜಾನೆಗಳಿಂದಲೇ ಎಸ್ಸೆಸ್ಸೆಲ್ಸಿ ಹಾಗೂ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷಾ ಪ್ರಶ್ನೆ ಪತ್ರಿಕೆಗಳನ್ನು ರವಾನೆ ಮಾಡಲು ನಿರ್ಧರಿಸಲಾಗಿದೆ.[ಪಶ್ನೆ ಪತ್ರಿಕೆ ಸೋರಿಕೆ : ಬಿಬಿಎಂಪಿ ಮಾಜಿ ಸದಸ್ಯ ಬಂಧನ]

ಭದ್ರತೆ ದೃಷ್ಟಿಯಿಂದ ತಾಲ್ಲೂಕು ಖಜಾನೆಗಳಲ್ಲಿ ಪ್ರಶ್ನೆ ಪತ್ರಿಕೆಗಳನ್ನು ಇಡದೆ ಇರಲು ನಿರ್ಧರಿಸಲಾಗಿದ್ದು, ಜಿಲ್ಲಾ ಖಜಾನೆಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಲು ಸರಕಾರ ಮುಂದಾಗಿದೆ ಜೊತೆಗೆ ಪೊಲೀಸ್ ಭದ್ರತೆಯೂ ಇರಲಿದೆ.[ಪಿಯುಸಿ ಪ್ರಶ್ನೆ ಪತ್ರಿಕೆ ಸೋರಿಕೆ, ಇಬ್ಬರು ಆರೋಪಿಗಳಿಗೆ ಜಾಮೀನು]
ಜಿಲ್ಲಾ ಖಜಾನೆಗಳಿಂದ ಎಸ್ಸೆಸ್ಸೆಲ್ಸಿ, ದ್ವಿತೀಯ ಪಿಯುಸಿ ಪತ್ರಿಕೆಗಳನ್ನು ರವಾನೆ ಮಾಡಲು ಮುಂದಾಗಿರುವುದು ಭದ್ರತೆ ದೃಷ್ಟಿಯಿಂದ ಸೂಕ್ತವೆನಿಸಿದರೂ ಖಜಾನೆ ಕೇಂದ್ರದಿಂದ ವ್ಯಾಪ್ತಿಯಲ್ಲಿ ದೂರ ಇರುವ ಮತ್ತು ರಾಜ್ಯ ಗಡಿ ಭಾಗದ ಪರೀಕ್ಷಾ ಕೇಂದ್ರಗಳಿಗೆ ಪ್ರಶ್ನೆಪತ್ರಿಕೆಯನ್ನು ಹೇಗೆ ರವಾನಿಸಲು ಸಾಧ್ಯ ಎಂಬುದು ವಿದ್ಯಾರ್ಥಿಗಳ ಪೋಷಕರ ಪ್ರಶ್ನೆಯಾಗಿದೆ.












Click it and Unblock the Notifications