''ಲಾಟರಿ ನಿಷೇಧದಿಂದ ಬೀದಿಗೆ ಬಿದ್ದ 19 ಲಕ್ಷ ಮಂದಿಗೆ ನೆರವಾಗಿ"
ಬೆಂಗಳೂರು ಫೆಬ್ರವರಿ 3: ಕರ್ನಾಟಕ ರಾಜ್ಯ ಸರಕಾರದ ವತಿಯಿಂದ ನಡೆಯುತ್ತಿದ್ದ ಎಂಐಎಸ್ಎಸ್ಎಲ್ ಲಾಟರಿ ನಿಷೇಧದ ಬಳಿಕ, ಜೀವನೋಪಾಯಕ್ಕಾಗಿ ಪರದಾಡುತ್ತಿರುವ 19 ಲಕ್ಷ ಜನರಿಗೆ ಸರಕಾರ ಸೂಕ್ತ ಪರಿಹಾರ ಕಲ್ಪಿಸುವತ್ತ ಗಮನ ಹರಿಸಬೇಕು ಎಂದು ಚಿತ್ರದುರ್ಗದ ಡಾ ಶಿವಮೂರ್ತಿ ಮುರುಘರಾಜೇಂದ್ರ ಮಹಾಸ್ವಾಮಿಗಳು ಅಭಿಪ್ರಾಯಪಟ್ಟಿದ್ದಾರೆ.
ಕರ್ನಾಟಕ ರಾಜ್ಯ ಲಾಟರಿ ಚಿಲ್ಲರೆ ಮಾರಾಟಗಾರರ ಸಂಘದ ವತಿಯಿಂದ ಆಯೋಜಿಸಲಾಗಿದ್ದ ಸಮಾಲೋಚನಾ ಸಭೆಯಲ್ಲಿ ಮಾತನಾಡಿದ ಅವರು, ಈ ಲಾಟರಿ ಮಾರಾಟವನ್ನು ನಂಬಿಕೊಂಡು ಜೀವನ ಕಟ್ಟಿಕೊಂಡಿದ್ದ 19 ಲಕ್ಷಕ್ಕೂ ಹೆಚ್ಚು ಜನರು ತಮ್ಮ ಜೀವನೋಪಾಯ ಕಂಡುಕೊಳ್ಳುವಲ್ಲಿ ವಿಫಲರಾಗಿದ್ದಾರೆ.
ಸರಕಾರದ ವತಿಯಿಂದ ನಡೆಯುತ್ತಿದ್ದ ಈ ಲಾಟರಿ ಒಂದು ಜೂಜಾಟದ ಪೀಡುಗಾಗಿರಲಿಲ್ಲ, ಅದು ಅದೃಷ್ಟದ ಆಟವಾಗಿತ್ತು. ಆದರೆ, ಬೇರೆ ಬೇರೆ ರಾಜ್ಯಗಳಿಂದ ಬಂದ ಲಾಟರಿಗಳು ಕೆಟ್ಟ ಹೆಸರನ್ನು ತರುವುದಕ್ಕೆ ಕಾರಣೀಭೂತವಾಗಿವೆ ಎನ್ನುವುದನ್ನು ಇಲ್ಲಿ ನಾನು ಮನಗೊಂಡಿದ್ದೇನೆ. ಈ ನಿಟ್ಟಿನಲ್ಲಿ ಈ ಜನರ ಬೆಂಬಲಕ್ಕೆ ಸರಕಾರ ಮುಂದಾಗಬೇಕಾಗಿದೆ. ಸರಕಾರದ ಗಮನ ಸೆಳೆಯುವ ನಿಟ್ಟಿನಲ್ಲಿ ನಾನು ಸಂಬಂಧಪಟ್ಟ ಸಚಿವರು ಹಾಗೂ ಅಧಿಕಾರಿಗಳಿಗೆ ಪತ್ರ ಬರೆಯಲಿದ್ದೇನೆ ಎಂದು ಹೇಳಿದರು.

ಸಂಸ್ಥಾಪಕ ಅಧ್ಯಕ್ಷರಾದ ಸಿ ರಾಮಕೃಷ್ಣ
ಕರ್ನಾಟಕ ರಾಜ್ಯ ಲಾಟರಿ ಚಿಲ್ಲರೆ ಮಾರಾಟಗಾರರ ಸಂಘದ ಸಂಸ್ಥಾಪಕ ಅಧ್ಯಕ್ಷರಾದ ಸಿ ರಾಮಕೃಷ್ಣ ಮಾತನಾಡಿ, ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಸ್ವಾತಂತ್ರ್ಯಪೂರ್ವ ಸ್ವಾತಂತ್ರ್ಯ ಹೋರಾಟಗಾರರಿಗೆ ಅನುಕೂಲವಾಗಲೆಂದು ವಾರ್ ಫಂಡ್ ಲಾಟರಿಯನ್ನು ಪರಿಚಯಿಸಿದ್ದರು. ಕರ್ನಾಟಕ ರಾಜ್ಯದಲ್ಲಿ ಸರಕಾರದ ವತಿಯಿಂದ ನಡೆಯುತ್ತಿದ್ದ ನ್ಯಾಯಯುತವಾದ ಲಾಟರಿಯನ್ನು ನಂಬಿಕೊಂಡು ಎಂಎಸ್ಐಎಲ್ ಏಜೆಂಟರುಗಳಾಗಿ ಸುಮಾರು 19 ಲಕ್ಷ ಜನರು ಜೀವನೋಪಾಯ ನಡೆಸುತ್ತಿದ್ದರು. ದೇವರಾಜ್ ಅರಸು ಅವರ ಕಾಲದಲ್ಲಿ ಲಾಟರಿ ಸಚಿವರನ್ನು ನೇಮಕ ಮಾಡುವ ಮೂಲಕ ರಾಜ್ಯದಲ್ಲಿ ನಿರುದ್ಯೋಗ ನಿವಾರಣೆಯಾಗಲು ಒಂದು ಪ್ರೇರಣೆಯಾದರು.

ಸಾಮಾಜಿಕ ಪಿಡುಗೆಂಬ ಕೆಟ್ಟ ಹೆಸರು
ಹೊರ ರಾಜ್ಯದ ಒಂದಂಕಿ ಸೇರಿದಂತೆ ಇನ್ನಿತರ ಲಾಟರಿಗಳಿಂದ ನಮ್ಮ ಲಾಟರಿ ವ್ಯವಸ್ಥೆ ಒಂದು ಸಾಮಾಜಿಕ ಪಿಡುಗೆಂಬ ಕೆಟ್ಟ ಹೆಸರನ್ನು ಪಡೆದುಕೊಂಡಿತು. ಇದರ ಪರಿಣಾಮ 2007 ರಲ್ಲಿ ರಾಜ್ಯ ಸರಕಾರ ಎಲ್ಲಾ ರೀತಿಯ ಲಾಟರಿಗಳನ್ನು ನಿಷೇಧಿಸಿ ಆದೇಶ ಹೊರಡಿಸುವ ಮೂಲಕ ಎಂಎಸ್ಐಎಲ್ ಮೂಲಕ ಜೀವನ ಕಂಡುಕೊಂಡಿದ್ದ 19 ಲಕ್ಷಕ್ಕೂ ಹೆಚ್ಚು ಕುಟುಂಬಗಳು ಬೀದಿಪಾಲಾಗುವಂತೆ ಮಾಡಿತು. ಲಾಟರಿಯ ಮೇಲೆ ಬಂದಿರುವ ಕಳಂಕವನ್ನು ಹೊಡೆದೋಡಿಸಿ, ರಾಜ್ಯದಲ್ಲಿ ಅನಧಿಕೃತವಾಗಿ ನಡೆಯುತ್ತಿರುವ ಲಾಟರಿಗಳನ್ನು ನಿಷೇಧಗೊಳಿಬೇಕು ಎಂದು ಅವರು ಆಗ್ರಹಿಸಿದರು.

ಲಾಟರಿ ಏಜೆಂಟರುಗಳ ಕಷ್ಟಕರ ಬದುಕು
ಅಲ್ಲದೆ, ಕಳೆದ 13 ವರ್ಷಗಳಿಂದ ಯಾವುದೇ ಸರಿಯಾದ ಜೀವನೋಪಾಯ ಇಲ್ಲದೆ ಇರುವ ಲಾಟರಿ ಏಜೆಂಟರುಗಳಿಗೆ ಈ ಬಾರಿಯ ಬಜೆಟ್ ನಲ್ಲಿ ಸೂಕ್ತ ಪರಿಹಾರ ದೊರಕಿಸಿ ಕೊಡಬೇಕು. ಇಲ್ಲದಿದ್ದಲ್ಲಿ ನಾವು ಏಪ್ರಿಲ್ ತಿಂಗಳಿನಿಂದ ಉಗ್ರಹೋರಾಟವನ್ನು ನಡೆಸುವುದಾಗಿ ಎಚ್ಚರಿಕೆ ನೀಡಿದರು. ಕಾರ್ಯಕ್ರಮದಲ್ಲಿ ಈ ಲಾಟರಿ ದಂಧೆಯ ಬಗ್ಗೆ ತನಿಖಾ ವರದಿ ನೀಡಿದ್ದ ಹಿರಿಯ ಪತ್ರಕರ್ತೆ ವಿಜಯಲಕ್ಷ್ಮಿ ಶಿಬರೂರು ಅವರನ್ನು ಸನ್ಮಾನಿಸಲಾಯಿತು.

ಆನ್ ಲೈನ್ ಲಾಟರಿ ಸಮಸ್ಯೆ
2001-02 ರಲ್ಲಿ ಪ್ರಾರಂಭವಾದ ಆನ್ಲೈನ್ ಲಾಟರಿ ಒಂದಂಕಿ ಮತ್ತು ಬೇರೇ ರಾಜ್ಯದ ಟ್ರೆಡ್ ಲಾಟರಿಗಳು ಸಾಮಾಜಿಕ ಪಿಡುಗಾಗಿ ಅನಿಷ್ಠ ಲಾಟರಿಗಳು, ಹೊರ ರಾಜ್ಯದ ಲಾಟರಿ ದಂಧೆಕೋರರು ಕರ್ನಾಟಕ ರಾಜ್ಯಕ್ಕೆ ಬಂದು ಆರ್ಥಿಕ ವ್ಯವಸ್ಥೇಯನ್ನು ಬುಡಮೇಲು ಮಾಡಿದರು.
ಕಾರ್ಯಕ್ರಮದಲ್ಲಿ ಧಾರ್ಮಿಕ ದತ್ತಿ ಇಲಾಖೆಯ ವಿಶೇಷಾಧಿಕಾರಿ ಡಾ ಲಿಂಗಯ್ಯ, ಸಂಘದ ಗೌರವ ಅಧ್ಯಕ್ಷ ಅಧ್ಯಕ್ಷ ಅಶ್ವಥ್ ನಾರಾಯಣ, ಉಪಾಧ್ಯಕ್ಷ ಅಂತೋಣಿ ಮೈಕಲ್ ರಾಜ್, ಕಾರ್ಯದರ್ಶಿ ಪದ್ಮೋಜಿ ರಾವ್, ಕಾರ್ಯಕಾರಿಣಿ ಸದಸ್ಯ ಶ್ರೀನಿವಾಸ್ ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ ಎಂಐಎಸ್ಎಲ್ ಏಜೆಂಟರುಗಳು ಭಾಗವಹಿಸಿದ್ದರು.












Click it and Unblock the Notifications