ಮನುಷ್ಯ ಏನಾದರೂ ಆಗಬಹುದು ಆದರೆ ಕೃತಘ್ನನಾಗಬಾರದು
ಬೆಂಗಳೂರು, ಆಗಸ್ಟ್ 6: ಮನುಷ್ಯ ಏನಾದರೂ ಆಗಬಹುದು ಆದರೆ ಕೃತಘ್ನನಾಗಬಾರದು. ಒಂದು ವೇಳೆ ಕೃತಘ್ನನಾದರೂ ತಾಯಿಗೆ ಮಾತ್ರ ಕೃತಘ್ನನಾಗಬೇಡ, ಯಾಕಂದ್ರೆ ಹೊತ್ತು ಹೆತ್ತಿದ್ದಾಳೆ ತಾಯಿ. ಒಂದುವೇಳೆ ತಾಯಿಗೆ ಕೃತಘ್ನನಾದರೂ ಗೋಮಾತೆಗೆ ಮಾತ್ರ ಕೃತಘ್ನನಾಗಬಾರದು ಎಂದು ಹೊಸನಗರ ರಾಮಚಂದ್ರಾಪುರ ಮಠದ ರಾಘವೇಶ್ವರ ಶ್ರೀಗಳು ಹೇಳಿದ್ದಾರೆ.
ನಗರದಲ್ಲಿ 'ಗೋಚಾತುರ್ಮಾಸ್ಯ'ದ 19ನೇ ದಿನದ (ಆ 6) ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ಶ್ರೀಗಳು, ತಾಯಿ ಹಾಲು ಕೊಡುವುದು ತನ್ನ ಮಕ್ಕಳಿಗೆ ಮಾತ್ರ, ಆದರೆ ಗೋವು ನಮಗೆಲ್ಲರಿಗೂ ಹಾಲು ಕೊಡುತ್ತದೆ. ಗೋವು ನಮ್ಮನ್ನು ಜೀವಂತ ಇರುವಾಗ ಮಾತ್ರ ಅಲ್ಲ, ಜೀವನದ ಅನಂತರವೂ ರಕ್ಷಿಸುತ್ತದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ. (ನಾವೆಲ್ಲಾ ಆಂಜನೇಯರಾಗಬೇಕಿದೆ)
ನಾವು ಸತ್ತ ಮೇಲೆ ನಾವು ದಾನ ಕೊಟ್ಟ ಗೋವು ನಮ್ಮನ್ನು ವೈತರಣೀ ನದಿಯನ್ನು ದಾಟಿಸಿ ಸ್ವರ್ಗದ ಹಾದಿಯನ್ನು ಸುಗಮಗೊಳಿಸುತ್ತದೆ. ಅಂತಹ ಗೋಸಂತತಿಗೆ ಉಪಕಾರ ಮಾಡಲು ಆಗದಿದ್ರೂ ಕೃತಘ್ನರಾಗಬಾರದು ಎಂದು ಶ್ರೀಗಳು ಕೇಳಿಕೊಂಡಿದ್ದಾರೆ.

ನಮಗೆ ಉಪಕಾರ ಮಾಡುವ ಗೋ ಮಾತೆಗೆ ಅಪಕಾರ ಮಾಡದಿರೋಣ. ಜೀವನದಲ್ಲಿ ಗೋವು ಇರಲೇಬೇಕು, ಅದಿಲ್ಲದಿದ್ದರೆ ನೋವು, ಸಾವು. ಗೋವಿದ್ದರೆ ಮಾತ್ರ ನಲಿವು. ಗೋವಿನಿಂದಲೇ ಭಾರತದ ಶ್ರೇಯಸ್ಸು. ಅಂತಹ ಗೋಮಾತೆಗೆ ಕೃತಘ್ನರಾದರೆ ಪ್ರಾಯಶ್ಚಿತ್ತವಿಲ್ಲ ಎಂದು ರಾಘವೇಶ್ವರ ಶ್ರೀಗಳು ಅಭಿಪ್ರಾಯಪಟ್ಟರು.
ಆಂಧ್ರ ಪ್ರದೇಶದ ಕರ್ನೂಲು ಜಿಲ್ಲೆ, ಯಾದವಗಿರಿ ಆದೋನಿ ಶ್ರೀ ಶಾರದಾ ದತ್ತಪೀಠಂನ ಸುಬ್ರಹ್ಮಣ್ಯ ಭಾರತೀ ಶ್ರೀಗಳು ಮಾತನಾಡುತ್ತಾ, ದ್ವಾಪರ ಯುಗದಲ್ಲಿ ಶ್ರೀಕೃಷ್ಣ ಪರಮಾತ್ಮ ಅವತಾರವೆತ್ತಿ ಗೋವುಗಳನ್ನು ರಕ್ಷಣೆ ಮಾಡಿದ್ದ, ಈ ಕಲಿಯುಗದಲ್ಲಿ ರಾಘವೇಶ್ವರ ಶ್ರೀಗಳು ಅವತರಿಸಿ ಗೋವುಗಳನ್ನು ರಕ್ಷಿಸುತ್ತಿದ್ದಾರೆಂದು ಹೇಳಿದ್ದಾರೆ. (ರಾಘವೇಶ್ವರ ಶ್ರೀಗಳಿಗೆ ಮುನ್ನಡೆ)
ಗೋಪೂಜೆ ಮಾಡಿದರೆ ಎಲ್ಲಾ ದೇವ ದೇವತೆಗಳನ್ನು ಪೂಜಿಸಿದಂತೆ. ಗೋವಿನಷ್ಟು ಪವಿತ್ರವಾದ ಜನ್ಮ ಇನ್ನೊಂದಿಲ್ಲ. ಗೋ-ಮೂತ್ರ, ಗೋಮಯ ಸಕಲ ರೋಗ ಪರಿಹಾರಕ, ಇವೆರಡು ಇದ್ದರೆ ಯಾವ ವೈದ್ಯರೂ ಬೇಕಿಲ್ಲ, ಯಾವ ಔಷಧಿಯೂ ಬೇಕಿಲ್ಲ. ಪ್ರತಿನಿತ್ಯ ಅರ್ಧ ಚಮಚ ಗೋಮೂತ್ರವನ್ನು ಒಂದು ಲೋಟ ನೀರಿನೊಂದಿಗೆ ಸೇವಿಸಿದರೆ ಯಾವ ರೋಗವೂ ಬರುವುದಿಲ್ಲ ಸುಬ್ರಹ್ಮಣ್ಯ ಭಾರತೀ ಶ್ರೀಗಳು ಹೇಳಿದ್ದಾರೆ.
ವಿಜಯನಗರದ ಮಾರುತಿ ಮೆಡಿಕಲ್ ಮಾಲೀಕ, ನಾಡಿನ ಜನರನ್ನು ಗೋವಿನೆಡೆಗೆ ಸೆಳೆಯುತ್ತಿರುವ ಮಹೇಂದ್ರ ಮುನ್ನೋಟ್ ಇವರಿಗೆ ಗೋ ಸೇವಾ ಪುರಸ್ಕಾರವನ್ನು ಈ ಸಂದರ್ಭದಲ್ಲಿ ನೀಡಲಾಯಿತು.
ಶ್ರೀಭಾರತೀಪ್ರಕಾಶನ ಹೊರತಂದ ಸಾಧನಾ ಪಂಚಕ ಪ್ರವಚನಮಾಲಿಕೆಯ ವಿ.ಸಿ.ಡಿ ಹಾಗೂ ಶ್ರೀಧರ ಡಿ.ಎಸ್. ಕಿನ್ನಿಗೋಳಿ ಬರೆದ "ಜಡಭರತ" ಪುಸ್ತಕವನ್ನು ಸುಬ್ರಹ್ಮಣ್ಯಭಾರತೀ ಶ್ರೀಗಳು ಲೋಕಾರ್ಪಣೆ ಮಾಡಿದರು.

ಉತ್ತರಕನ್ನಡದ ಅಂಗಡಿಬೈಲ್, ಚೆನ್ನಗಾರ, ಕುಂಟಗನಿ ಪ್ರದೇಶದ ಗೋಚಾತುರ್ಮಾಸ್ಯ ಸೇವಾಸಮಿತಿ ಅಚಿವೆ ಇದರ ಪದಾಧಿಕಾರಿಗಳಾದ ಜಿ. ಎಂ. ಶೆಟ್ಟಿ ಮಾಬಗಿ, ಬೊಮ್ಮಯ್ಯ ಗುನಾಗಾ, ನಿತ್ಯಾನಂದ ಗೋಪಾಲ ನಾಯಕ ಹಾಗೂ ಸರ್ವ ಸಮಾಜದ ಶಿಷ್ಯರು ಶ್ರೀಗಳನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು. (ಹವ್ಯಕರ ಸಭೆಯಲ್ಲಿ ಮಾರಾಮಾರಿ)
ಬೆಂಗಳೂರು ನಗರ ರಾಜರಾಜೇಶ್ವರಿನಗರ ಹಾಗೂ ಬನಶಂಕರಿ ವಲಯದವರು ಸರ್ವಸೇವೆಯನ್ನು ನೆರವೇರಿಸಿದರು. ಶ್ರೀಮಠದ ಪದಾಧಿಕಾರಿಗಳು, ಚಾತುರ್ಮಾಸ್ಯ ಸಮಿತಿಯ ಸದಸ್ಯರು ಈ ಸಂದರ್ಭದಲ್ಲಿ ಹಾಜರಿದ್ದರು. ಸರ್ಪಂಗಳ ರಾಮಚಂದ್ರ ಭಟ್ ದಂಪತಿಗಳು ಸಭಾಪೂಜೆ ಮಾಡಿದರು. ಅರ್ಪಿತಾ ಹೆದ್ಲಿ ಕಾರ್ಯಕ್ರಮ ನಿರೂಪಿಸಿದರು.












Click it and Unblock the Notifications