Bengaluru Traffic : ಬೆಂಗಳೂರು ಟ್ರಾಫಿಕ್ ಸಮಸ್ಯೆ ಕಮ್ಮಿಯಾಗುತ್ತಿರುವುದು ಹೇಗೆ? ಇಲ್ಲಿದೆ ವಿಸ್ತೃತ ವರದಿ
ಬೆಂಗಳೂರು, ಡಿಸೆಂಬರ್ 03: ಬೆಂಗಳೂರು ಮಹಾನಗರ ಬೆಳೆದಂತೆಲ್ಲ ಟ್ರಾಪಿಕ್ ಸಮಸ್ಯೆ ಉಲ್ಬಣವಾಗುತ್ತಲೇ ಬಂದಿದೆ. ದೇಶದ ಉಳಿದ ಮಹಾನಗರಿಗಳಿಗೆ ಹೋಲಿಸಿದರೆ, ಬೆಂಗಳೂರಿನಲ್ಲಿ ವಾಹನ ದಟ್ಟಣೆ ಹೆಚ್ಚಿದೆ ಎಂಬ ಆರೋಪಗಳು ಹೊಸದೇನಲ್ಲ. ಬೆಂಗಳೂರನ್ನು 'ಜಾಮ್ ಸಿಟಿ' ಎಂದು ಟ್ರೋಲ್ ಮಾಡಿದ ಜನರು ಕಡಿಮೆ ಸಂಖ್ಯೆಯಲ್ಲಿ ಇಲ್ಲ. ಆದರೆ, ಈಗ ಟ್ರಾಪಿಕ್ ಪರಿಸ್ಥಿತಿ ಹತೋಟೆಗೆ ಬರುವ ನಿಟ್ಟಿನಲ್ಲಿ ಸಾಗಿದೆ. ಜಾಮ್ ಸಿಟಿ ಎಂದು ಟ್ರೋಲ್ ಮಾಡಿದ ಜನರೇ ಬೆಂಗಳೂರಿನಲ್ಲಿ ಕಡಿಮೆ ಆಗುತ್ತಿರುವ ಟ್ರಾಪಿಕ್ ಜಾಮ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ಬೆಂಗಳೂರು-ವಿಜಯವಾಡ ಎಕ್ಸ್ಪ್ರೆಸ್ವೇ: 12 ರಿಂದ 6 ಗಂಟೆಗೆ ಇಳಿಯಲಿದೆ ಪ್ರಯಾಣದ ಅವಧಿ
ಬೆಂಗಳೂರಿನಲ್ಲಿ ವಾಹನ ದಟ್ಟಣೆ ಕಡಿಮೆ ಹೇಗಾಯ್ತು? ಪೊಲೀಸರು ತೆಗೆದುಕೊಂಡ ನಿರ್ಧಾರಗಳೇನು? ಇದಕ್ಕೆ ಜನರ ಪ್ರತಿಕ್ರಿಯೆ ಹೇಗಿದೆ ಎಂಬುದರ ಬಗ್ಗೆ ವಿಸ್ತೃತ ವರದಿ ಇಲ್ಲಿದೆ ಓದಿ...
ಕೆಂಪೇಗೌಡ ಏರ್ಪೋರ್ಟ್ ರಸ್ತೆಯಲ್ಲಿ 2 ಗಂಟೆ ಸರಕು ವಾಹನ ನಿಷೇಧ
ಬೆಂಗಳೂರಿನಲ್ಲಿ ಅತೀ ಹೆಚ್ಚು ಟ್ರಾಪಿಕ್ ಜಾಮ್ ಆಗುವ ರಸ್ತೆಗಳಲ್ಲಿ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ರಸ್ತೆಯೂ ಒಂದು. ಇದು ವಿಮಾನ ನಿಲ್ದಾಣದ ಪ್ರಯಾಣಿಕರಿಗೇ ಅಷ್ಟೇ ಅಲ್ಲದೇ, ಹೆಬ್ಬಾಳ, ಜಕ್ಕೂರು, ಯಲಹಂಕ, ಅರಮನೆ ಮೈದಾನ, ಕೊಡಿಗೇಹಳ್ಳಿ, ಜಿಕೆವಿಕೆ, ದೇವನಹಳ್ಳಿ ಕಡೆ ಸಂಚಾರ ಮಾಡುವ ಪ್ರಯಾಣಿಕರಿಗೆ ಕಿರಿಕಿರಿ ಉಂಟು ಮಾಡುತ್ತಿತ್ತು. ವಾಹನ ಸವಾರರು ಕನಿಷ್ಠ 20 ರಿಂದ 25 ನಿಮಿಷಗಳಾದರೂ ಟ್ರಾಪಿಕ್ ಜಾಮ್ನಲ್ಲಿ ನಿಲ್ಲಬೇಕಾಗಿ ಬರುತ್ತಿತ್ತು. ಈ ಸಮಸ್ಯೆಯನ್ನು ಪರಿಹರಿಸಲು ಬೆಂಗಳೂರಿನ ಟ್ರಾಪಿಕ್ ಪೊಲೀಸರು ಮಾರ್ಗೋಪಾಯವೊಂದನ್ನು ಕಂಡುಕೊಂಡಿದ್ದಾರೆ.
ಪ್ರತಿ ದಿನ ಬೆಳಗ್ಗೆ 8.30 ರಿಂದ 10.30ರವರೆಗೆ ಕೆಂಪೇಗೌಡ ಏರ್ಪೋರ್ಟ್ ರಸ್ತೆಯಲ್ಲಿ ಸರಕು ಸಾಗಣೆ ವಾಹನಗಳ ಸಂಚಾರವನ್ನು ನಿಷೇಧಿಸಿದ್ದಾರೆ. ಈ ಕ್ರಮವನ್ನು ಪ್ರಾಯೋಗಿಕವಾಗಿ ಒಂದು ತಿಂಗಳ ಮಟ್ಟಿಗೆ ಪಾಲಿಸಲು ಆದೇಶಿಸಲಾಗಿದೆ.
ಟ್ರಾಪಿಕ್ ಪೊಲೀಸರ ಈ ಕಠಿಣ ಕ್ರಮದಿಂದ ಹೆಬ್ಬಾಳ ಫೈಓವರ್ನಲ್ಲಿ ಸಂಚಾರ ದಟ್ಟಣೆ ನಿಯಂತ್ರಣವಾಗಿರುವುದು ಕಂಡುಬಂದಿದೆ ಎಂದು ಟ್ರಾಫಿಕ್ ವಿಶೇಷ ಪೊಲೀಸ್ ಆಯುಕ್ತ ಡಾ.ಎಂ.ಎ.ಸಲೀಂ ತಿಳಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, 'ವಾಹನ ಸವಾರರು ಈ ಹಿಂದೆ ಏರ್ಪೋರ್ಟ್ ರಸ್ತೆಯಲ್ಲಿರುವ ಎಸ್ಟೀಮ್ ಮಾಲ್ನಿಂದ ಹೆಬ್ಬಾಳ ಫ್ಲೈಓವರ್ಗೆ ತಲುಪಲು ಕನಿಷ್ಠ 20 ನಿಮಿಷಗಳನ್ನು ತೆಗೆದುಕೊಳ್ಳುತ್ತಿದ್ದರು. ಕೆಲವೊಮ್ಮೆ 25 ನಿಮಿಷಗಳ ಕಾಲ ನಿಲ್ಲಬೇಕಾಗಿ ಬರುತ್ತಿತ್ತು. ಈಗ ಸರಕು ವಾಹನಗಳ ಮೇಲೆ 2 ಗಂಟೆಗಳ ಕಾಲ ನಿರ್ಬಂಧ ವಿಧಿಸಿದ ನಂತರ, ಸಂಚಾರದ ಸಮಯ ಆರರಿಂದ ಎಂಟು ನಿಮಿಷಗಳಿಗೆ ಕುಸಿದಿದೆ' ಎಂದು ಹೇಳಿದ್ದಾರೆ.
ದ್ವಿಮುಖ ಸಂಚಾರಕ್ಕೆ ಮುಕ್ತವಾದ ಬಿಟಿಎಂ ಲೇಔಟ್ ರಸ್ತೆ
ಬೆಂಗಳೂರು ನಗರದ ಪ್ರಮುಖ ರಸ್ತೆಗಳಲ್ಲಿ 'ನಮ್ಮ ಮೆಟ್ರೋ' ಕಾಮಗಾರಿಗಳು ಭರದಿಂದ ಸಾಗಿವೆ. ಆದ್ದರಿಂದ, ಇಲ್ಲಿ ವಾಹನ ಸಂಚಾರ ದಟ್ಟಣೆ ಅತಿಯಾಗಿದೆ. ಬನಶಂಕರಿ - ಸಿಲ್ಕ್ಬೋರ್ಟ್ ಜಂಕ್ಷನ್ ನಡುವಿನ ರಸ್ತೆಯಲ್ಲಿ ವಾಹನ ಸವಾರರ ಪರದಾಟವಂತೂ ಹೇಳತೀರದ್ದಾಗಿತ್ತು. ಆದರೆ, ಈ ರಸ್ತೆಯಲ್ಲಿ ಓಡಾಡುವ ಸವಾರರಿಗೆ ಬಿಎಂಆರ್ಸಿಎಲ್ ಖುಷಿ ಸುದ್ದಿಯನ್ನು ನೀಡಿದೆ.
ಅದೇನೆಂದರೆ, ಮೆಟ್ರೋ ಕಾಮಗಾರಿಯಿಂದ ಸಂಚಾರ ದಟ್ಟಣೆ ಉಂಟಾಗುತ್ತಿದ್ದ ಬಿಟಿಎಂ ಲೇಔಟ್ನ ದ್ವಿಮುಖ ರಸ್ತೆಯನ್ನು ವಾಹನ ಸಂಚಾರಕ್ಕೆ ಮುಕ್ತಗೊಳಸಲಾಗಿದೆ. ಬಿಟಿಎಂ ಬಡಾವಣೆಯ 16ನೇ ಮುಖ್ಯರಸ್ತೆಯಲ್ಲಿ ಮೆಟ್ರೋ ರೈಲು ಕಾಮಗಾರಿ ನಡೆಯುತ್ತಿತ್ತು. ಈ ಹಿನ್ನೆಲೆಯಲ್ಲಿ, ಮೆಟ್ರೋ ಫೈಓವರ್ ಕೆಳಗೆ ಬರುವ ಇಲ್ಲಿನ ದ್ವಿಮುಖ ರಸ್ತೆಯನ್ನು ವಾಹನ ಸಂಚಾರಕ್ಕೆ ನಿಷೇಧಿಸಲಾಗಿತ್ತು. ನಿತ್ಯಾ ಸಾವಿರಾರು ವಾಹನಗಳು ಓಡಾಡುವ ಈ ರಸ್ತೆಯಲ್ಲಿ ನಿಷೇಧ ಹೇರಿದ್ದರಿಂದ ವಾಹನ ಸಂಚಾರಕ್ಕೆ ತೀವ್ರ ತೊಂದರೆಯಾಗಿತ್ತು. ಈ ಹಿನ್ನೆಲೆಯಲ್ಲಿ, ಮೈಕೋ ಲೇಔಟ್ ಸಂಚಾರ ಠಾಣೆ ಪೊಲೀಸರು, ಬಿಎಂಆರ್ಸಿಎಲ್ ಅಧಿಕಾರಿಗಳೊಂದಿಗೆ ಚರ್ಚಿಸಿದ್ದಾರೆ. ನಂತರ ಮೆಟ್ರೋ ಫೈಓವರ್ ಕೆಳ ಭಾಗದ ದ್ವಿಮುಖ ರಸ್ತೆಯನ್ನು ವಾಹನ ಸಂಚಾರಕ್ಕೆ ಮುಕ್ತಗೊಳಿಸಿದ್ದಾರೆ. ಈ ನಿರ್ಧಾರದಿಂದ ಬನಶಂಕರಿ ಹಾಗೂ ಸಿಲ್ಕ್ ಬೋರ್ಡ್ ಜಂಕ್ಷನ್ ನಡುವೆ ಬರುವ ಔಟರ್ರಿಂಗ್ ರೋಡಿನ ಟ್ರಾಪಿಕ್ ಜಾಮ್ ತಗ್ಗಿದೆ ಎಂದು ನಾಗರಿಕರು ಹೇಳುತ್ತಿದ್ದಾರೆ.
|
ಮೈಸೂರು- ನೈಸ್ ರೋಡ್ ಜಂಕ್ಷನ್ನಲ್ಲಿಯೂ ತಗ್ಗಿದ ವಾಹನ ದಟ್ಟನೆ
ಬೆಂಗಳೂರಿನಲ್ಲಿ ವಿಪರೀತವಾಗಿ ಟ್ರಾಪಕ್ ಸಮಸ್ಯೆಯನ್ನು ಕಂಡುಬರುವ ಸ್ಥಳಗಳಲ್ಲಿ ಮೈಸೂರು- ನೈಸ್ ರೋಡ್ ಜಂಕ್ಷನ್ ಸಹ ಒಂದಾಗಿದೆ. ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆಯಲ್ಲಿ ಕೈಗೊಂಡ ಕ್ರಮವನ್ನೇ ಮೈಸೂರು- ನೈಸ್ ರೋಡ್ ಜಂಕ್ಷನ್ನಲ್ಲಿಯೂ ಕೈಗೊಳ್ಳಲಾಗಿದೆ. ಪ್ರತಿದಿನ ಬೆಳಿಗ್ಗೆ 8.30 ರಿಂದ 10.30ರವರೆಗೆ ಈ ರಸ್ತೆಯಲ್ಲಿ ಸರಕು ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ. ಭಾರೀ ಸರಕು ವಾಹನಗಳಿಗೆ ಟ್ರಾಪಿಕ್ ಪೊಲೀಸರು ತಡೆ ಒಡ್ಡುತ್ತಿದ್ದಾರೆ. ಆದ್ದರಿಂದ, ಈ ರಸ್ತೆಯಲ್ಲಿ ಸಂಚರಿಸುವ ವಾಹನ ಸವಾರರು ನಿರಾಳರಾಗಿದ್ದಾರೆ ಎಂದು ಪಶ್ಚಿಮ ಬೆಂಗಳೂರಿನ ಉಪ ಪೊಲೀಸ್ ಆಯುಕ್ತ(ಟ್ರಾಪಿಕ್) ಕುಲದೀಪ್ ಕುಮಾರ್. ಆರ್. ಜೈನ್ ತಿಳಿಸಿದ್ದಾರೆ.
ಮೈಸೂರು ರಸ್ತೆ, ತುಮಕೂರು ರಸ್ತೆ, ಕನಕಪುರ ರಸ್ತೆ, ಹೊಸಕೇರಹಳ್ಳಿ- ನೈಸ್ ಜಂಕ್ಷನ್ನಂತಹ ಪ್ರಮುಖ ಪ್ರವೇಶ ದಾರಿಗಳಲ್ಲಿ ಭಾರೀ ಸರಕು ವಾಹನಗಳನ್ನು ನಿಷೇಧಿಸಲಾಗಿದೆ ಎಂದು ಕುಲದೀಪ್ ಕುಮಾರ್ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಕಡಿಮೆಯಾದ ಟ್ರಾಪಿಕ್ ಜಾಮ್: ಸವಾರರ ಮೆಚ್ಚುಗೆ
ಬೆಂಗಳೂರಿನ ಟ್ರಾಪಿಕ್ ಸಮಸ್ಯೆ ಸ್ಪಲ್ಪ ಮಟ್ಟಿಗೆ ಕಡಿಮೆಯಾಗಿದೆ. ಈ ಕಾರಣ, ಸವಾರರು ಮೊದಲ ಹಾಗೆ ಟ್ರಾಪಿಕ್ ಸಮಸ್ಯೆಯಲ್ಲಿ ಸಿಲುಕಿಕೊಳ್ಳುವುದು ಕಂಡುಬರುತ್ತಿಲ್ಲ. ಇದಕ್ಕೆ ಬೆಂಗಳೂರು ಟ್ರಾಪಿಕ್ ಪೊಲೀಸರು ತೆಗೆದುಕೊಂಡ ಜಾನ್ಮೆಯ ಹಾಗೂ ಕಠಿಣ ಕ್ರಮಗಳಿಗೆ ಸವಾರರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಸಂಚಾರ ದಟ್ಟನೆ ತಡೆಗಟ್ಟುವ ನಿಟ್ಟಿನಲ್ಲಿ ಬೆಂಗಳೂರು ನಗರ ಟ್ರಾಫಿಕ್ ಪೊಲೀಸರು ಮಾಡುತ್ತಿರುವ ಯತ್ನಗಳು ಫಲಕಾರಿಯಾಗುತ್ತಿವೆ ಎಂದು ಸಾಮಾಜಿಕ ಮಧ್ಯಮಗಳಲ್ಲಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ನಗರದ 10 ಪ್ರಮುಖ ಜಂಕ್ಷನ್ಗಳ ಸುಧಾರಣೆಗೆ ಕ್ರಮ
ವಾಹಣ ದಟ್ಟಣೆ ತಗ್ಗಿಸಲು ಬೆಂಗಳೂರಿನ 10 ಪ್ರಮುಖ ಜಂಕ್ಷನ್ಗಳ ಸುಧಾರಣೆಗೆ ಕ್ರಮವನ್ನು ತೆಗೆದುಕೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ ನಗರ ಸಂಚಾರ ವಿಭಾಗಕ್ಕೆ ಐಪಿಎಸ್ ಅಧಿಕಾರಿ ಡಾ. ಎಂ.ಎ.ಸಲೀಂ ಅವರನ್ನು ನೇಮಿಸಲಾಗಿದೆ. ಸಲೀಂ ಅವರು ಆಯುಕ್ತರಾಗಿ ನೇಮಕವಾದ ಬಳಿಕ ಸಂಚಾರ ವ್ಯವಸ್ಥೆಯಲ್ಲಿ ಸುಧಾರಣೆ ತರಲಾಗಿದ್ದು, ವಾಹನ ಸಂಚಾರರ ಮೆಚ್ಚುಗೆಗೆ ಪಾತ್ರವಾಗಿದೆ. ಇತ್ತಿಚೆಗೆ ಬೆಂಗಳೂರಿನ 10 ಪ್ರಮುಖ ಪ್ರದೇಶಗಳಲ್ಲಿ ಟ್ರಾಫಿಕ್ ಜಾಮ್ಗೆ ಕಡಿವಾಣ ಹಾಕಲು ಕರ್ನಾಟಕ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಅವರು ಸಹ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು.