ನಮ್ಮ ಮೆಟ್ರೋ : 1 ವಾರದ ಆದಾಯ 4 ಕೋಟಿ
ಬೆಂಗಳೂರು, ಮೇ 09 : ನಮ್ಮ ಮೆಟ್ರೋ ಪೂರ್ವ-ಪಶ್ಚಿಮ ಕಾರಿಡಾರ್ ರೈಲು ಸೇವೆಗೆ ಜನರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಬೈಯಪ್ಪನಹಳ್ಳಿ-ನಾಯಂಡಹಳ್ಳಿ ಮಾರ್ಗದಲ್ಲಿನ ರೈಲು ಸಂಚಾರದಿಂದ 1 ವಾರದಲ್ಲಿ 4 ಕೋಟಿ ರೂ. ಆದಾಯ ಬಂದಿದೆ.
ಸೋಮವಾರ ಬೆಂಗಳೂರಿನಲ್ಲಿ ಬಿಎಂಆರ್ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಪ್ರದೀಪ್ ಸಿಂಗ್ ಖರೋಲಾ ಪತ್ರಿಕಾಗೋಷ್ಠಿ ನಡೆಸಿದರು. 'ಪ್ರತಿದಿನ ಬೈಯಪ್ಪನಹಳ್ಳಿ-ನಾಯಂಡಹಳ್ಳಿ (ಮೈಸೂರು ರಸ್ತೆ) ಮಾರ್ಗದಲ್ಲಿ 1.45 ಲಕ್ಷ ಜನರು ಸಂಚಾರ ನಡೆಸುತ್ತಿದ್ದಾರೆ' ಎಂದು ಹೇಳಿದರು. [ಬೈಯಪ್ಪನಹಳ್ಳಿ-ಮೈಸೂರು ರಸ್ತೆ ಮೆಟ್ರೋ ಸಂಚಾರ ಅವಧಿ ವಿಸ್ತರಣೆ?]

ಪೂರ್ವ-ಪಶ್ಚಿಮ ಕಾರಿಡಾರ್ನ ಮಾರ್ಗ ಏಪ್ರಿಲ್ 30ರಂದು ಸಾರ್ವಜನಿಕ ಸಂಚಾರಕ್ಕೆ ಮುಕ್ತವಾಗಿದೆ. 'ಒಂದು ವಾರದಲ್ಲಿ 4 ಕೋಟಿ ರೂ. ಆದಾಯ ಬಂದಿದೆ. ಮೆಟ್ರೋ ನಿರೀಕ್ಷೆ ಮಾಡಿರುವುದಕ್ಕಿಂತ ಹೆಚ್ಚಿನ ಆದಾಯ ಬರುತ್ತಿದೆ' ಎಂದು ಪ್ರದೀಪ್ ಸಿಂಗ್ ಖರೋಲಾ ತಿಳಿಸಿದರು. [ಸುರಂಗ ಮಾರ್ಗದ ನಮ್ಮ ಮೆಟ್ರೋ ಸಂಚಾರ ಹೇಗಿರುತ್ತದೆ?]
'ಸುರಂಗ ಮಾರ್ಗದಲ್ಲಿ ರೈಲು ಸಂಚಾರ ನಡೆಸುತ್ತಿರುವುದರಿಂದ ನಗರದಲ್ಲಿ ಮಳೆ ಬಂದರೆ ಏನಾಗಬಹುದು? ಎಂಬ ಆತಂಕವಿತ್ತು. ಆದರೆ. ಸತತ ಮೂರು ದಿನ ನಗರದಲ್ಲಿ ಮಳೆ ಸುರಿದಿದ್ದು, ಯಾವುದೇ ಅನಾಹುತ ಸಂಭವಿಸಿಲ್ಲ. ಇದರಿಂದ ನಮ್ಮ ಆತಂಕ ದೂರವಾಗಿದೆ' ಎಂದು ಖರೋಲಾ ಹೇಳಿದರು. [ನಮ್ಮ ಮೆಟ್ರೋ ಪೂರ್ವ-ಪಶ್ಚಿಮ ಕಾರಿಡಾರ್ ದರ ಪಟ್ಟಿ]
2 ವಾರದಲ್ಲಿ ಹಳಿ ಹಾಕುವ ಕಾರ್ಯ : 'ಸಂಪಿಗೆ ರಸ್ತೆಯಿಂದ ಮೆಜೆಸ್ಟಿಕ್ಗೆ ಸಂಪರ್ಕ ಕಲ್ಪಿಸುವ ಸುರಂಗ ಮಾರ್ಗ ಕಾಮಗಾರಿ ಪೂರ್ಣಗೊಂಡಿದ್ದು, ಹಳಿ ಹಾಕುವ ಕಾರ್ಯ ಪ್ರಗತಿಯಲ್ಲಿದೆ. ಮುಂದಿನ 2 ವಾರದಲ್ಲಿ ಈ ಕಾಮಗಾರಿ ಮುಗಿಯಲಿದೆ' ಎಂದು ಪ್ರದೀಪ್ ಸಿಂಗ್ ಖರೋಲಾ ತಿಳಿಸಿದರು.
70 ಅಡಿ ಬಾಕಿ : 'ಚಿಕ್ಕಪೇಟೆಯಿಂದ ಮೆಜೆಸ್ಟಿಕ್ ತನಕ ಸುರಂಗ ಮಾರ್ಗ ಕೊರೆಯುವ ಕಾಮಗಾರಿ ಪ್ರಗತಿಯಲ್ಲಿದೆ. 'ಕಾವೇರಿ' ಮತ್ತು 'ಕೃಷ್ಣ' ಸುರಂಗ ಕೊರೆಯುತ್ತಿವೆ. 'ಕಾವೇರಿ' ಮೆಜೆಸ್ಟಿಕ್ನಿಂದ ಕೇವಲ 70 ಅಡಿ ದೂರದಲ್ಲಿದ್ದು, ಮೇ ಅಂತ್ಯದ ವೇಳೆಗೆ ಅದು ಮೆಜೆಸ್ಟಿಕ್ ತಲುಪುವ ನಿರೀಕ್ಷೆ ಇದೆ' ಎಂದು ಖರೋಲಾ ಹೇಳಿದರು.












Click it and Unblock the Notifications