'1300 ದಶಲಕ್ಷ ಲೀಟರ್ ತ್ಯಾಜ್ಯ ನೀರನ್ನು ಸಂಸ್ಕರಿಸಿ ಪುನರ್ ಬಳಕೆ'
ಬೆಂಗಳೂರು, ಮಾರ್ಚ್ 22 ; ನೀರಿನ ಮಿತ ಬಳಕೆಗೆ ಆದ್ಯತೆ ನೀಡಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯದ ಜನತೆಗೆ ಕರೆ ನೀಡಿದರು.
ವಿಶ್ವ ಜಲ ದಿನಾಚರಣೆಯ ಅಂಗವಾಗಿ ವಿಧಾನಸೌಧ ಮುಂಭಾಗದಲ್ಲಿ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಆಯೋಜಿಸಿದ್ದ ನೀರು ಉಳಿಸಿ ಬೆಂಗಳೂರು ಉಳಿಸಿ ಜಾಗೃತಿ ಜಾಥಾ ಅಭಿಯಾನವನ್ನು ಉದ್ಘಾಟಿಸಿ ಅವರು ಮಾತನಾಡಿದ ಅವರು, ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಪ್ರತಿನಿತ್ಯ 1200 ದಶಲಕ್ಷ ಲೀಟರ್ ನಿಂದ 1300 ದಶಲಕ್ಷ ಲೀಟರ್ ನಷ್ಟು ತ್ಯಾಜ್ಯ ನೀರು ಉತ್ಪತ್ತಿಯಾಗುತ್ತದೆ.
ಇದರ ಮರು ಬಳಕೆಗೆ ಬೆಂಗಳೂರು ಜಲ ಮಂಡಳಿ ಹಾಗೂ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಪ್ರಯತ್ನ ನಡೆಸಿವೆ. ಈ ನೀರನ್ನು ಕುಡಿಯುವ ನೀರಿಗೆ ಬಳಸದೆ ಇತರ ಉದ್ದೇಶಕ್ಕೆ ಬಳಸಿದರೆ ಕುಡಿಯುವ ನೀರನ್ನು ಉಳಿಸಬಹುದಾಗಿದೆ ಎಂದು ಅವರು ತಿಳಿಸಿದರು.

ಕುಡಿಯುವ ನೀರಿಗೆ ತೀವ್ರ ಕೊರತೆ ಇದೆ. ಕಾವೇರಿ ಪಾತ್ರದ ಕಾವೇರಿ, ಕಬಿನಿ ಹಾಗೂ ಹೇಮಾವತಿ ನದಿಗಳಲ್ಲೂ ಅಗತ್ಯ ಪ್ರಮಾಣದಲ್ಲಿ ನೀರಿಲ್ಲ. ಇದರಿಂದ ಬೆಂಗಳೂರು, ಮೈಸೂರು, ಮಂಡ್ಯ ಹಾಗೂ ಹಾಸನ ಜಿಲ್ಲೆಗಳಿಗೆ ಕುಡಿಯುವ ನೀರಿನ ಕೊರತೆ ಉದ್ಭವಿಸಿದೆ.
ಇಂತಹ ಪರಿಸ್ಥಿತಿಯಲ್ಲಿ ಭಾರತದ ಸವೋಚ್ಛ ನ್ಯಾಯಾಲಯವು ತಮಿಳುನಾಡಿಗೆ ಕಾವೇರಿ ನದಿಯಿಂದ ಪ್ರತಿದಿನ 2000 ಕ್ಯೂಸೆಕ್ಸ್ ನೀರು ಬಿಡುವಂತೆ ರಾಜ್ಯಕ್ಕೆ ಸೂಚಿಸಿದೆ.
ಆದಕಾರಣ, ನೀರಿನ ಮಹತ್ವವನ್ನು ಅರಿತು ನೀರನ್ನು ಅಪವ್ಯಯ ಮಾಡದೆ ಅಗತ್ಯಕ್ಕೆ ತಕ್ಕಂತೆ ಮಾತ್ರ ಬಳಸುವ ಪರಿಪಾಠವನ್ನು ನಾವು ರೂಢಿಸಿಕೊಳ್ಳಬೇಕು ಎಂದು ಸಿದ್ದರಾಮಯ್ಯ ಅವರು ರಾಜ್ಯದ ಜನತೆಯಲ್ಲಿ ಮನವಿ ಮಾಡಿದರು.
ನೀರು ಭೂಮಿಯ ಮೇಲೆ ವಾಸಿಸುವ ಮನುಷ್ಯರು, ಪ್ರಾಣಿಗಳು, ಪಕ್ಷಿಗಳು, ಗಿಡ-ಮರಗಳು ಒಳಗೊಂಡಂತೆ ಎಲ್ಲಾ ಜೀವರಾಶಿಗಳಿಗೆ ಅತ್ಯಾವಶ್ಯಕವಾದುದು.
ಬದುಕಿಗೆ ನೀರು ಅತ್ಯಂತ ಅವಶ್ಯಕ. ನೀರು ಕೇವಲ ಕುಡಿಯಲು ಮಾತ್ರವಲ್ಲ, ವ್ಯವಸಾಯ ಹಾಗೂ ಇನ್ನಿತರ ಉಪಯೋಗಕ್ಕೂ ಬರುತ್ತದೆ. ಆದ್ದರಿಂದ ಅತ್ಯಮೂಲ್ಯ ನೀರಿನ ಮಿತ ಬಳಕೆಗೆ ಎಲ್ಲರೂ ಮುಂದಾಗಬೇಕು ಎಂದರು.
ಶೇಕಡಾ 80 ರಷ್ಟು ನೀರು ವ್ಯರ್ಥವಾಗುತ್ತದೆ. ಆಸ್ಟ್ರೇಲಿಯಾ, ಇಸ್ರೇಲ್ ಹಾಗೂ ಸಿಂಗಾಪುರ ದೇಶಗಳಲ್ಲಿ ತ್ಯಾಜ್ಯ ನೀರನ್ನು ಸಂಸ್ಕರಿಸಿ ಪುನರ್ ಬಳಕೆ ಮಾಡಲಾಗುತ್ತಿದೆ.
ವಿಶ್ವ ಜಲ ದಿನದ ಅಂಗವಾಗಿ ಮುಖ್ಯಮಂತ್ರಿಯವರು ಅಲ್ಲಿ ನೆರೆದಿದ್ದ ಅಧಿಕಾರಿಗಳು ಹಾಗೂ ಸಾರ್ವಜನಿಕರಿಗೆ ನೀರಿನ ಮರು ಬಳಕೆ ಕುರಿತಂತೆ ಪ್ರತಿಜ್ಞಾವಿಧಿ ಬೋಧಿಸಿದರು.












Click it and Unblock the Notifications