ತುಘಲಕ್ ಮತ್ತೆ ಬಂದ, ನೋಡಿ ಆನಂದಿಸಿ
ಬೆಂಗಳೂರು, ಸೆ.5: ಕನ್ನಡ ರಂಗಭೂಮಿಯ ಬಹು ಚರ್ಚಿತ ನಾಟಕಗಳಲ್ಲೊಂದಾದ, ಗಿರೀಶ್ ಕಾರ್ನಾಡರ ‘ತುಘಲಕ್' ನ್ನು ಬೆಂಗಳೂರು ಸಮುದಾಯವು, ರಂಗಶಂಕರದಲ್ಲಿ ಶುಕ್ರವಾರ ಹಾಗೂ ಶನಿವಾರ ಮರುಪ್ರದರ್ಶಿಸಲಿದೆ.
ಕಾರ್ನಾಡರ 'ತುಘಲಕ್' ಭಾರತದ ಶ್ರೇಷ್ಠ ನಾಟಕಗಳಲ್ಲೊಂದು.ಐತಿಹಾಸಿಕ ಭಿತ್ತಿಯಲ್ಲಿ ಸಮಕಾಲೀನ ಧ್ವನಿಗಳನ್ನು ಹೊರಡಿಸುವ ಈ ನಾಟಕ ಹಲವು ವ್ಯಾಖ್ಯಾನಗಳ ಸಾಧ್ಯತೆಯನ್ನು ತನ್ನ ಒಡಲೊಳಗಿರಿಸಿಕೊಂಡಿದೆ. ಈ ನಾಟಕದ ಮಹತ್ವಾಕಾಂಕ್ಷೆಯ ಪ್ರಯೋಗಗಳನ್ನು ಕನ್ನಡವೂ ಸೇರಿದಂತೆ ನಾಡಿನ ಅನೇಕ ಭಾಷೆಗಳು ಕಂಡಿವೆ.
ಹೊಸಕಾಲದ ರಂಗ ಸಾಧ್ಯತೆ ಮತ್ತು ಅರ್ಥದ ಅಗತ್ಯತೆಗಳ ಹಿನ್ನೆಲೆಯಲ್ಲಿ ಇದನ್ನು ಪ್ರಯೋಗಿಸಿದ ಸಮುದಾಯ, ಧಾರವಾಡ, ಶಿರಸಿ, ಮಂಗಳೂರು, ಉಡುಪಿ ಮುಂತಾದ ಜಿಲ್ಲಾ ಕೇಂದ್ರಗಳಲ್ಲಿ ಪ್ರದರ್ಶನ ನೀಡಿ, ಇದೀಗ 05/06/2014 ಮತ್ತು 06/08/2014 ರಂದು 30, 31 ಮತ್ತು 32 ನೇ ಪ್ರದರ್ಶನ ನೀಡಲಿದೆ.

ತುಘಲಕ್ ನಾಟಕ ತಂಡ ವಿವರ:
*ರಚನೆ: ಗಿರೀಶ್ ಕಾರ್ನಾಡ್
* ಅಭಿನಯ: ‘ಸಮುದಾಯ' ಬೆಂಗಳೂರು
* ವಿನ್ಯಾಸ ಮತ್ತು ನಿರ್ದೇಶನ: ಡಾ. ಸ್ಯಾಮ್ ಕುಟ್ಟಿ ಪಟ್ಟಂಕಾರಿ
* ಸಹ ನಿರ್ದೇಶನ : ಡಾ. ಶ್ರೀಪಾದ ಭಟ್
* ಸ್ಥಳ: ರಂಗಶಂಕರ
* ದಿನಾಂಕ ಮತ್ತು ಸಮಯ: 05/08/2014; ಸಂಜೆ 7:30ಕ್ಕೆ, 06/08/2014; ಮಧ್ಯಾಹ್ನ 3:30ಕ್ಕೆ ಮತ್ತು ಸಂಜೆ 7:30ಕ್ಕೆ
* ಟಿಕೆಟ್ ದರ: ರೂ. 100/-
* ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆ: 99001 82400, 97399 33889
* ವೆಬ್ ಸೈಟ್ : www.indianstage.in, bookmyshow.com
ಸಮುದಾಯ ತಂಡದ ಬಗ್ಗೆ : ಸಾಮಾಜಿಕ ಚಳವಳಿ ಮತ್ತು ಹೋರಾಟಗಳಿಗೆ ಸಾಂಸ್ಕೃತಿಕ ಆಯಾಮದ ಬದಲಾದ ಮಾದರಿಗಳನ್ನು ಕಟ್ಟಿಕೊಟ್ಟ ಸಂಘಟನೆಯೇ ಸಮುದಾಯ. ತುರ್ತು ಪರಿಸ್ಥಿತಿಯ ಸಾಮಾಜಿಕ ತುರ್ತಿನಲ್ಲಿ ಜನಪರ ಹಾಗೂ ಪ್ರಜಾಪ್ರಭುತ್ವವಾದೀ ಚಿಂತಕರು ನಿರಂತರ ಚಳವಳಿಗಳ ಮೂಲಕ ಹೋರಾಟದ ಬೇರನ್ನು ಗಟ್ಟಿಗೊಳಿಸಿದ್ದಾರೆ.
1975ರಿಂದ ಸತತವಾಗಿ ಹಲವು ಪ್ರಮುಖ ನಾಟಕಗಳಾದ 'ತಾಯಿ', 'ಕುರಿ', 'ಸಂಕ್ರಾಂತಿ', 'ಮಹಾಚೈತ್ರ', 'ಕತ್ತಲೆದಾರಿದೂರ', 'ರುಡಾಲಿ', 'ಪಂಪಭಾರತ', 'ಜುಗಾರಿಕ್ರಾಸ್' ಹಾಗೂ ಇನ್ನು ಹತ್ತು ಹಲವು ವಿನೂತನ ನಾಟಕಗಳನ್ನು ಪ್ರಯೋಗಿಸಿರುವ ಸಮುದಾಯ ಕನ್ನಡ ರಂಗಭೂಮಿಯಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿದೆ.
ನಿರಂತರವಾದ ಜನ ಸಂಸ್ಕೃತಿ ಜಾಥಾಗಳು, ವಿಚಾರ ಸಂಕಿರಣಗಳು, ಬೀದಿನಾಟಕಗಳು, ರಂಗ ತರಬೇತಿ ಕಾರ್ಯಾಗಾರಗಳು ಹಾಗೂ ಇತರೆ ಸಾಮಾಜಿಕ ಚಿಂತನೆಗಳುಳ್ಳ ಚಟುವಟಿಕೆಗಳು ಮುಖ್ಯ ಹೋರಾಟವನ್ನು ಶಕ್ತಗೊಳಿಸಿವೆ.












Click it and Unblock the Notifications