ಗುದ್ದೋಡು ಪ್ರಕರಣ : ಎಫ್ಐಆರ್ ರದ್ದು ಮಾಡಲು ಗೀತಾವಿಷ್ಣು ಅರ್ಜಿ
ಬೆಂಗಳೂರು, ಜುಲೈ 31 : ಹಿಟ್ ಎಂಡ್ ರನ್ ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮ ವಿರುದ್ಧ ದಾಖಲಾಗಿರುವ ಎಫ್ಐಆರ್ ರದ್ದುಗೊಳಿಸಬೇಕು ಎಂದು ಗೀತಾವಿಷ್ಣು ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ.
ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಮೈಕೆಲ್ ಕುನ್ಹ ಅವರಿದ್ದ ಏಕಸದಸ್ಯ ಪೀಠ, ಪ್ರತಿವಾದಿಗಳಾದ ಜಯನಗರ ಠಾಣೆ ಪೊಲೀಸರಿಗೆ ನೋಟಿಸ್ ಜಾರಿ ಮಾಡಿದೆ. ಹಿಟ್ ಎಂಡ್ ರನ್ ಪ್ರಕರಣದ ವಿಚಾರಣೆಯನ್ನು ಸಿಸಿಬಿ ಪೊಲೀಸರು ನಡೆಸುತ್ತಿದ್ದಾರೆ.
ಗೀತಾ ವಿಷ್ಣು ಕಾರು ಅಪಘಾತದ ಕೇಸ್ ಸಿಸಿಬಿ ತನಿಖೆಗೆ
ಹಿಟ್ ಎಂಡ್ ರನ್ ಕುರಿತು ಮೊದಲು ಜಯನಗರ ಠಾಣೆಯಲ್ಲಿ ದೂರು ದಾಖಲಾಗಿತ್ತು. ಆದರೆ, ಕಾರಿನಲ್ಲಿ ಮಾದಕ ವಸ್ತುಗಳು ಪತ್ತೆಯಾದ ಹಿನ್ನಲೆಯಲ್ಲಿ ಪ್ರಕರಣದ ತನಿಖೆಯನ್ನು ಸಿಸಿಬಿಗೆ ಹಸ್ತಾಂತರ ಮಾಡಲಾಗಿತ್ತು.
ರಸ್ತೆ ಅಪಘಾತ, ಮಲ್ಯ ಆಸ್ಪತ್ರೆಯಿಂದ ವಿಷ್ಣು ಪರಾರಿ!
ಏನಿದು ಘಟನೆ? : 2017ರ ಸೆಪ್ಟೆಂಬರ್ 28ರಂದು ಗೀತಾವಿಷ್ಣು ಮತ್ತು ಅವರ ಸ್ನೇಹಿತರು ಇದ್ದ ಎಸ್ಯುವಿ ಕಾರು ಮಾರುತಿ ಓಮಿನಿ ಕಾರಿಗೆ ಮೇಯೊಹಾಲ್ ಬಳಿ ಡಿಕ್ಕಿ ಹೊಡೆದಿತ್ತು. ಘಟನೆಯಲ್ಲಿ 6 ಜನರು ಗಾಯಗೊಂಡಿದ್ದರು.
ಕಾರಿಗೆ ಗುದ್ದಿದ ಬಳಿಕ ಕಾರು ನಿಲ್ಲಿಸದೇ ಅವರು ಪರಾರಿಯಾಗಿದ್ದರು. ಬಳಿಕ ಸೌತ್ ಎಂಡ್ ಸರ್ಕಲ್ ಬಳಿ ನಾಮಫಲಕಕ್ಕೆ ಕಾರು ಡಿಕ್ಕಿ ಹೊಡೆದಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಗೀತಾವಿಷ್ಣುವನ್ನು ಬಂಧಿಸಿದ್ದರು.
ಅಪಘಾತದಲ್ಲಿ ಗಾಯಗೊಂಡ ಅವರನ್ನು ಮಲ್ಯ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ, ಆಸ್ಪತ್ರೆಯಿಂದ ಅವರು ಪರಾರಿಯಾಗಿದ್ದರು. ಅಪಘಾತವಾದ ಕಾರಿನಲ್ಲಿ ಮಾದಕ ವಸ್ತುಗಳು ಪತ್ತೆಯಾದ ಶಂಕೆ ಹಿನ್ನಲೆಯಲ್ಲಿ ಪ್ರಕರಣವನ್ನು ಸಿಸಿಬಿಗೆ ವರ್ಗಾವಣೆ ಮಾಡಲಾಗಿತ್ತು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮ ವಿರುದ್ಧ ದಾಖಲಾಗಿರುವ ಎಫ್ಐಆರ್ ರದ್ದು ಮಾಡುವಂತೆ ಗೀತಾವಿಷ್ಣು ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಆದರೆ, ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೂ ಚಾರ್ಜ್ ಶೀಟ್ ಸಲ್ಲಿಕೆಯಾಗಿಲ್ಲ.