ಗೌರಿ ಲಂಕೇಶ್ ಹತ್ಯೆ: ನಕ್ಸಲ್ ಆಯಾಮ ಕೈಬಿಟ್ಟ ತನಿಖಾದಳ
ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಇದುವರೆಗೆ ಸುಮಾರು 500ಕ್ಕೂ ಹೆಚ್ಚು ಜನರನ್ನು ವಿಚಾರಣೆ ನಡೆಸಿರುವ ವಿಶೇಷ ತನಿಖಾ ದಳ (SIT), ನಕ್ಸಲ್ ಆಯಾಮದಲ್ಲಿ ತನಿಖೆ ನಡೆಸುವುದನ್ನು ಕೈಬಿಟ್ಟಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಬೆಂಗಳೂರು, ಅ 6: ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಇದುವರೆಗೆ ಸುಮಾರು ಐನೂರಕ್ಕೂ ಹೆಚ್ಚು ಜನರನ್ನು ವಿಚಾರಣೆ ನಡೆಸಿರುವ ವಿಶೇಷ ತನಿಖಾ ದಳ (SIT), ನಕ್ಸಲ್ ಆಯಾಮದಲ್ಲಿ ತನಿಖೆ ನಡೆಸುವುದನ್ನು ಕೈಬಿಟ್ಟಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಹಿರಿಯ ಸಂಶೋಧಕ ಕಲಬುರ್ಗಿ ಮತ್ತು ಗೌರಿ ಹತ್ಯೆಗೆ ಒಂದೇ ಪಿಸ್ತೂಲ್ ಬಳಕೆಯಾಗಿದೆ ಎಂದು ಎಫ್ಎಸ್ಎಲ್ (ಫಾರೆನ್ಸಿಕ್ ಸೈನ್ಸ್ ಲಾಬೋರೇಟರಿ) ವರದಿ ಬಂದಿರುವ ಹಿನ್ನಲೆಯಲ್ಲಿ, ಗೌರಿ ಹತ್ಯೆ ನಕ್ಸಲ್ ವಿಚಾರದಲ್ಲಿ ನಡೆದಿರುವ ಸಾಧ್ಯತೆಯಿಲ್ಲ ಎಂದು ಎಸ್ಐಟಿ, ಇತರ ಆಯಾಮದತ್ತ ವಿಚಾರಣೆ ನಡೆಸುತ್ತಿದೆ ಎಂದು ಪ್ರಜಾವಾಣಿ ಪತ್ರಿಕೆ ವರದಿ ಮಾಡಿದೆ.

ಈ ಮಧ್ಯೆ, ಗೌರಿ ಲಂಕೇಶ್ ಅವರನ್ನು ಗುಂಡಿಕ್ಕಿ ಪರಾರಿಯಾಗುತ್ತಿದ್ದ ಹಂತಕನನ್ನು ವಿದ್ಯಾರ್ಥಿಯೊಬ್ಬ ಹತ್ತಿರದಿಂದ ನೋಡಿರುವ ಹಿನ್ನಲೆಯಲ್ಲಿ, ವಿದ್ಯಾರ್ಥಿಯನ್ನು, ತನಿಖಾಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ. ಹಂತಕ, ಬೈಕ್ ನಿಂದ ಪರಾರಿಯಾಗುತ್ತಿದ್ದಾಗ, ವಿದ್ಯಾರ್ಥಿ ಮತ್ತು ಪಕ್ಕದ ಕಟ್ಟಡದಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರನ್ನು ನೋಡಿಕೊಂಡು ವಾಪಸ್ ಹೋಗುತ್ತಿದ್ದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಹಂತಕ ಕೆಂಪು ಬಣ್ಣದ ಪಲ್ಸರ್, ಡಿಸ್ಕವರಿ ಅಥವಾ ಫ್ಯಾಷನ್ ಬೈಕನ್ನು ಬಳಸಿಕೊಂಡಿರಬಹುದು. ಆತನ ನಂಬರ್ ಪ್ಲೇಟ್ ಕಾಣಿಸಲಿಲ್ಲ, ಘಟನೆ ನಡೆದ ಕೂಡಲೇ ಮಾಧ್ಯಮದವರು, ಪೊಲೀಸರು ಬರಲಾರಂಭಿಸಿದರು. ಆಗಲೇ, ನನಗೆ ಗೌರಿ ಲಂಕೇಶ್ ಹತ್ಯೆಯಾಗಿದೆ ಎಂದು ಗೊತ್ತಾಗಿದ್ದು ಎಂದು ವಿದ್ಯಾರ್ಥಿ ವಿಚಾರಣಾಧಿಕಾರಿಗಳಿಗೆ ಹೇಳಿದ್ದಾನೆಂದು ವರದಿಯಾಗಿದೆ.
ಬೈಕಿನಲ್ಲಿ ಬಂದ ಇಬ್ಬರು ಹೆಲ್ಮೆಟ್ ಧರಿಸಿದ್ದರು, ಎತ್ತರ ಸುಮಾರು 5'3 ಅಡಿ ಇರಬಹುದು ಎಂದು ವಿದ್ಯಾರ್ಥಿ, ಅಧಿಕಾರಿಗಳಿಗೆ ತಿಳಿಸಿದ್ದಾನೆ.
ಇಂದ್ರಜಿತ್ ಹೇಳಿಕೆ: ನನ್ನ ಸಹೋದರಿ ಹತ್ಯೆಯಾಗಿ ಒಂದು ತಿಂಗಳಾದರೂ ಹಂತಕರ ಪತ್ತೆಯಾಗಿಲ್ಲ. ಆದರೂ, ನಾವು ಸಿಬಿಐಗೆ ವಹಿಸುವಂತೆ ಸರಕಾರವನ್ನು ಒತ್ತಾಯಿಸುವುದಿಲ್ಲ. ಎಸ್ಐಟಿ ತನಿಖೆಯ ಮೇಲೆ ನಮಗೆ ವಿಶ್ವಾಸವಿದೆ. ತನಿಖಾಧಿಕಾರಿಗಳ ನೈತಿಕ ಸ್ಥೈರ್ಯ ಕುಗ್ಗಿಸುವ ಕೆಲಸವನ್ನು ನಾವು ಮಾಡುವುದಿಲ್ಲ ಎಂದು ಗೌರಿ ಸಹೋದರ ಇಂದ್ರಜಿತ್ ಲಂಕೇಶ್ ಹೇಳಿದ್ದಾರೆ.












Click it and Unblock the Notifications