ಗೌರಿ ಲಂಕೇಶ್ ಹತ್ಯೆ : ಗನ್ ಮತ್ತು ಬೈಕ್ಗಾಗಿ ಎಸ್ಐಟಿ ಶೋಧ
ಬೆಂಗಳೂರು, ಜುಲೈ 26 : ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ 10 ಆರೋಪಿಗಳನ್ನು ಎಸ್ಐಟಿ ಪೊಲೀಸರು ಬಂಧಿಸಿದ್ದಾರೆ. ಆದರೆ, ಪೊಲೀಸರಿಗೆ ಇನ್ನೂ ಹತ್ಯೆಗೆ ಬಳಸಿದ ಗನ್ ಮತ್ತು ಬೈಕ್ ಸಿಕ್ಕಿಲ್ಲ.
2017ರ ಸೆಪ್ಟೆಂಬರ್ 5ರಂದು ರಾಜರಾಜೇಶ್ವರಿ ನಗರದ ನಿವಾಸದ ಮುಂದೆ ಗೌರಿ ಲಂಕೇಶ್ ಹತ್ಯೆ ಮಾಡಲಾಗಿತ್ತು. ಸರ್ಕಾರ ಪ್ರಕರಣದ ತನಿಖೆಗಾಗಿ ಎಸ್ಐಟಿ ರಚನೆ ಮಾಡಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೂ 10 ಆರೋಪಿಗಳನ್ನು ಬಂಧಿಸಲಾಗಿದೆ.
ಗೌರಿ ಲಂಕೇಶ್ ಅವರ ಮೇಲೆ ಗುಂಡು ಹಾರಿಸಿದ್ದು ಪರುಶುರಾಮ್ ವಾಗ್ಮೋರೆ, ಬೈಕ್ ಚಲಾಯಿಸುತ್ತಾ ಆತನಿಗೆ ಸಹಾಯ ಮಾಡಿದ್ದು ಗಣೇಶ್ ಮಿಸ್ಕಿನ್. ಈ ಇಬ್ಬರೂ ಆರೋಪಿಗಳು ಎಸ್ಐಟಿ ವಶದಲ್ಲಿದ್ದಾರೆ. ಇವರಿಂದ ಹತ್ಯೆ ಪ್ರಕರಣದ ಹೆಚ್ಚಿನ ಮಾಹಿತಿ ಸಂಗ್ರಹಿಸಲಾಗುತ್ತಿದೆ.

ಗೌರಿ ಲಂಕೇಶ್ ಹತ್ಯೆಗೆ 7.65 ಎಂ.ಎಂ.ಪಿಸ್ತೂಲ್ ಬಳಸಲಾಗಿದೆ. ಹತ್ಯೆ ದಿನ ಆರೋಪಿಗಳು ಬೈಕ್ ಬಳಸಿದ್ದಾರೆ. ಹತ್ಯೆ ಮಾಡಿದ ಬಳಿಕ ಬೈಕ್ನಲ್ಲಿಯೇ ಪರಾರಿಯಾಗಿದ್ದಾರೆ. ಆದರೆ, ಎಸ್ಐಟಿ ಅಧಿಕಾರಿಗಳಿಗೆ ಗನ್ ಮತ್ತು ಬೈಕ್ ಸಿಕ್ಕಿಲ್ಲ.
ಗನ್ ಮತ್ತು ಬೈಕ್ ಪಡೆಯಲು ಆರೋಪಿಗಳಿಗೆ ಸ್ಥಳೀಯರು ಸಹಕಾರ ನೀಡಿದ್ದಾರೆ ಎಂಬ ಸುದ್ದಿ ಇದೆ. ಆದ್ದರಿಂದ, ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತಷ್ಟು ಆರೋಪಿಗಳನ್ನು ಬಂಧಿಸುವ ಸಾಧ್ಯತೆ ಇದೆ. ಬಿಡದಿ, ಕುಂಬಳಗೋಡು, ರಾಜರಾಜೇಶ್ವರಿ ನಗರದ ಹಲವು ವ್ಯಕ್ತಿಗಳ ಬಗ್ಗೆ ಪೊಲೀಸರು ಮಾಹಿತಿ ಸಂಗ್ರಹಿಸುತ್ತಿದ್ದಾರೆ.
'ಗೌರಿ ಲಂಕೇಶ್ ಹತ್ಯೆ ಪ್ರಕರಣದ ಆರೋಪಿಗಳನ್ನು ಬಂಧಿಸಲಾಗಿದೆ. ಆರೋಪಿಗಳ ಹಿಂದೆ ಯಾರಿದ್ದಾರೆ ಎಂಬುವನ್ನು ಶೀಘ್ರವೇ ಪತ್ತೆ ಹಚ್ಚಲಾಗುತ್ತದೆ. ನಾವು ಕೆಲವು ದಿನ ಕಾಯಬೇಕಾಗುತ್ತದೆ' ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಮವಾರ ಮಡಿಕೇರಿ ಮೂಲದ ರಾಜೇಶ್ ಡಿ.ಬಂಗೇರ ಅವರನ್ನು ಬಂಧಿಸಲಾಗಿದೆ. ಎಸ್ಐಟಿ ಅಧಿಕಾರಿಗಳ ಮನವಿಯಂತೆ ಆರೋಪಿಯನ್ನು ಆಗಸ್ಟ್ 6ರ ತನಕ ಎಸ್ಐಟಿ ಕಷ್ಟಡಿಗೆ ನೀಡಲಾಗಿದೆ.












Click it and Unblock the Notifications