ಗೌರಿ ಲಂಕೇಶ್ ಹತ್ಯೆ ಪ್ರಾಥಮಿಕ ತನಿಖೆಯ ಮುಖ್ಯಾಂಶಗಳು
Recommended Video

ಬೆಂಗಳೂರು, ಸೆಪ್ಟೆಂಬರ್ 6 : ಪತ್ರಕರ್ತೆ ಗೌರಿ ಲಂಕೇಶ್ ಅವರ ಹತ್ಯೆ ಪೂರ್ವ ನಿಯೋಜಿತವಾದದ್ದು, ತಂತ್ರಗಾರಿಕೆಯಿಂದ ಈ ಹತ್ಯೆ ಮಾಡಲಾಗಿದೆ ಎಂಬುದು ಪೊಲೀಸರ ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ. ಇಬ್ಬರು ಆಕೆಯನ್ನು ಹಿಂಬಾಲಿಸಿದ್ದಾರೆ. ಒಬ್ಬ ಅದಾಗಲೇ ಗೌರಿ ಅವರ ಮನೆ ಬಳಿ ಕಾದಿದ್ದು, ಈ ದುಷ್ಕೃತ್ಯ ಎಸಗಿದ್ದಾರೆ.
ರಾಜರಾಜೇಶ್ವರಿ ನಗರದ ಮನೆ ಬಳಿ ಮಂಗಳವಾರ ರಾತ್ರಿ ಗೌರಿ ಲಂಕೇಶ್ ಅವರ ಹತ್ಯೆಯಾಗಿತ್ತು. ಈ ಕೃತ್ಯವನ್ನು ಮನೆಯ ಬಳಿಯೇ ಮಾಡಿರುವುದು ಕೂಡ ತಂತ್ರಗಾರಿಕೆ. ಆ ರಸ್ತೆಯಲ್ಲಿ ಬೆಳಕು ಕಡಿಮೆ ಹಾಗೂ ಸಂದಿ ರಸ್ತೆಗಳು ಹೆಚ್ಚು ಇರುವುದರಿಂದ ತಪ್ಪಿಸಿಕೊಳ್ಳುವುದಕ್ಕೆ ಸಹಕಾರಿ ಎಂಬ ಕಾರಣಕ್ಕೆ ಮನೆಯ ಬಳಿಯೇ ಹತ್ಯೆ ಮಾಡಲಾಗಿದೆ.

ಪೊಲೀಸರ ಪ್ರಕಾರ, ಗೌರಿ ಲಂಕೇಶ್ ಮನೆ ಎದುರು ಬೀದಿ ದೀಪ ಇದೆ. ಅದಾದ ನಂತರ ನಾನೂನು ಮೀಟರ್ ದೂರದಲ್ಲಿ ಮತ್ತೊಂದು ಇದೆ. ಜತೆಗೆ ಆಕೆಯ ಮನೆ ಎದುರಿಗೆ ಎರಡು ಅಪಾರ್ಟ್ ಮೆಂಟ್ ಗಳ ನಿರ್ಮಾಣ ಕಾರ್ಯ ನಡೆಯುತ್ತಿದೆ. ಈ ಬಡಾವಣೆಯ ಯಾರೂ ಕೂಡ ಹತ್ಯೆ ಮಾಡುದವರನ್ನು ನೋಡಿದ್ದೇವೆ ಹೇಳಿಕೊಂಡಿಲ್ಲ.
ಈ ಪ್ರದೇಶದಲ್ಲಿ ಸಂದಿ ರಸ್ತೆಗಳು ಹೆಚ್ಚಿರುವುದರಿಂದ ದುಷ್ಕರ್ಮಿಗಳು ಸುಲಭವಾಗಿ ತಪ್ಪಿಸಿಕೊಂಡಿದ್ದಾರೆ. ಈ ಹತ್ಯೆಗೂ ಮುನ್ನ ತುಂಬ ದಿನ ಗಮನಿಸಲಾಗಿದೆ. ಗೌರಿ ಲಂಕೇಶ್ ಅವರು ಸಾಮಾನ್ಯವಾಗಿ ರಾತ್ರಿ ಒಂಬತ್ತರ ನಂತರವೇ ಕಚೇರಿಯಿಂದ ಹೊರಡುತ್ತಾರೆ. ಆದರೆ ಮಂಗಳವಾರ ಬೇಗ ಹೊರಟಿದ್ದರು.
ಗೌರಿ ಲಂಕೇಶ್ ಚಲನವಲನದ ಮೇಲೆ ನಿಗಾ ವಹಿಸಲಾಗಿತ್ತು ಎಂಬುದು ಇದರಿಂದಲೇ ತಿಳಿಯುತ್ತದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಪ್ರತ್ಯಕ್ಷದರ್ಶಿಗಳು ಯಾರೂ ಇಲ್ಲ ಎಂದು ಕರ್ನಾಟಕ ಪೊಲೀಸ್ ಹಿರಿಯ ಅಧಿಕಾರಿ ಆರ್.ಕೆ.ದತ್ತಾ ಅವರು ತಿಳಿಸಿದ್ದಾರೆ.
ಆ ಬಡಾವಣೆಯ ಜನರಿಗೆ ಪಿಸ್ತೂಲಿನಿಂದ ಹಾರಿದ ಗುಂಡಿನ ಸದ್ದು ಕೇಳಿದೆ. ಆ ನಂತರ ಏನಾಯಿತು ಎಂದು ನೋಡಲು ಹೊರಗೆ ಬಂದಿದ್ದಾರೆ. ಪ್ರತ್ಯಕ್ಷದರ್ಶಿಗಳು ಹತ್ಯೆ ಮಾಡಿದವರನ್ನು ನೋಡಿಲ್ಲವಾದ್ದರಿಂದ ಅವರು ಎಷ್ಟು ಮಂದಿ ಇದ್ದರು ಎಂದು ನಿರ್ಧಾರ ಮಾಡುವುದು ಕೂಡ ಕಷ್ಟ.
ಗೌರಿ ಲಂಕೇಶ್ ರ ಮನೆ ಹೊರಗೆ ಇರುವ ಸಿಸಿಟಿವಿಯನ್ನೇ ಸಾಕ್ಷ್ಯವಾಗಿ ನೆಚ್ಚಿಕೊಳ್ಳಬೇಕಿದೆ ಹಾಗೂ ಆ ಮೂಲಕವೇ ಪ್ರಕರಣವನ್ನು ಭೇದಿಸಬೇಕಿದೆ.











Click it and Unblock the Notifications