ಗೌರಿ ಲಂಕೇಶ್ ಹತ್ಯೆ: ನವೀನ್ ಕುಮಾರ್ ವಿರುದ್ಧ ಕೊಲೆ ಪ್ರಕರಣ ದಾಖಲು
ಬೆಂಗಳೂರು, ಮಾರ್ಚ್ 9: ವಿಶೇಷ ತನಿಖಾ ದಳದಿಂದ ಕೆ.ಟಿ.ನವೀನ್ ಕುಮಾರ್ ನನ್ನು ಬಂಧಿಸಿದ ಇಪ್ಪತ್ತು ದಿನಗಳ ನಂತರ ಕೊಲೆ ಆರೋಪದ ಪ್ರಕರಣ ದಾಖಲಿಸಲಾಗಿದೆ. ಹಿಂದೂ ಯುವ ಸೇನಾದ ಸ್ಥಾಪಕ- ಸದಸ್ಯ ನವೀನ್ ಕುಮಾರ್ ಫೆಬ್ರವರಿ ಹದಿನೆಂಟರಂದು ಬೆಂಗಳೂರಿನ ಉಪ್ಪಾರಪೇಟೆಯ ವ್ಯಾಪ್ತಿಯಲ್ಲಿ ಅಕ್ರಮವಾಗಿ ಪಿಸ್ತೂಲು ಮಾರುವಾಗ ವಶಕ್ಕೆ ಪಡೆಯಲಾಗಿತ್ತು.
ನವೀನ್ ಕುಮಾರ್ ನ ಆರಂಭದಲ್ಲಿ ವಿಚಾರಣೆ ನಡೆಸುವಾಗ ಪತ್ರಕರ್ತೆ ಗೌರಿ ಲಂಕೇಶ್ ಹಂತಕರಿಗೆ ಆತ ನೆರವು ನೀಡಿರಬಹುದು ಎಂಬ ಗುಮಾನಿ ಇತ್ತು. ಆದರೆ ಶುಕ್ರವಾರ, ಹದಿನೈದು ದಿನಗಳ ಕಾಲ ಆತನ ವಿಚಾರಣೆ ನಡೆಸಿದ ನಂತರ ವಿಶೇಷ ತನಿಖಾ ದಳವು ಹತ್ಯೆ ಆರೋಪಿ ಎಂದು ಪ್ರಕರಣ ದಾಖಲಿಸಿದೆ.
"ಹೌದು, ಆತನನ್ನು ಬಂಧಿಸಲಾಗಿದೆ. ಅವನು ಗೌರಿ ಹತ್ಯೆ ಪ್ರಕರಣದ ಮುಖ್ಯ ಆರೋಪಿ ಹೌದೋ ಅಲ್ಲವೋ ಎಂಬುದು ಚಾರ್ಜ್ ಶೀಟ್ ಹಾಕುವ ವೇಳೆ ಗೊತ್ತಾಗುತ್ತದೆ. ನವೀನ್ ಕುಮಾರ್ ವಿರುದ್ಧ ಐಪಿಸಿ ಸೆಕ್ಷನ್ 302ರ (ಕೊಲೆ) ಅಡಿ ಪ್ರಕರಣ ದಾಖಲಿಸಲಾಗಿದೆ" ಎಂದು ತನಿಖಾಧಿಕಾರಿಯೊಬ್ಬರು ಮಾಧ್ಯಮವೊಂದಕ್ಕೆ ಮಾಹಿತಿ ನೀಡಿದ್ದಾರೆ.
ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ

ಮೂರನೇ ಎಸಿಎಂಎಂ ಕೋರ್ಟ್ ನಲ್ಲಿ ನವೀನ್ ಕುಮಾರ್ ನನ್ನು ಹಾಜರು ಪಡಿಸಲಾಗಿತ್ತು. ತನಿಖೆ ವೇಳೆಯಲ್ಲಿ ಬಯಲಾದ ಮಹತ್ವದ ಮಾಹಿತಿ ಎಂದು ಮುಚ್ಚಿದ ಲಕೋಟೆಯಲ್ಲಿ ಕೋರ್ಟ್ ಗೆ ಸಲ್ಲಿಸಲಾಯಿತು. ನವೀನ್ ಕುಮಾರ್ ನನ್ನು ಐದು ದಿನಗಳ ಕಾಲ ಪೊಲೀಸ್ ವಶಕ್ಕೆ ನೀಡಲಾಯಿತು.
ಗೌರಿ ಲಂಕೇಶ್ ಹತ್ಯೆಯಲ್ಲಿ ಆರೋಪಿಗಳು ಎನ್ನಲಾದ ನಾಲ್ವರು ಸದಸ್ಯರ ಪೈಕಿ ನವೀನ್ ಕೂಡ ಒಬ್ಬ ಎಂಬ ಗುಮಾನಿ ಇದೆ. ಎಂ.ಎಂ.ಕಲ್ಬುರ್ಗಿ ಹತ್ಯೆಯಲ್ಲೂ ನವೀನ್ ಪಾತ್ರ ಇರುವ ಬಗ್ಗೆ ಎಸ್ ಐಟಿ ಶಂಕೆ ಪಟ್ಟಿದೆ.












Click it and Unblock the Notifications