ಗೌರಿ ಹತ್ಯೆ : ಅಂಕಣಕಾರ ಶಿವಸುಂದರ್ ವಿಶೇಷ ಸಂದರ್ಶನ
ಬೆಂಗಳೂರು, ಸೆಪ್ಟೆಂಬರ್ 11: "ಗೌರಿ ಲಂಕೇಶ್ ಪ್ರಕರಣದಲ್ಲಿ ನಕ್ಸಲರು ಈ ಹತ್ಯೆ ಮಾಡಿರಬಹುದು ಎಂಬ ಆಯಾಮ ಕೊಟ್ಟು ದಾರಿ ತಪ್ಪಿಸುವ ಪ್ರಯತ್ನ ನಡೆಯುತ್ತಿದೆ" ಎಂದು ಪತ್ರಕರ್ತ ಹಾಗೂ ಸಾಮಾಜಿಕ ಕಾರ್ಯಕರ್ತ ಶಿವಸುಂದರ್ ಅಭಿಪ್ರಾಯ ಪಡುತ್ತಾರೆ.
ಗೌರಿ ಲಂಕೇಶ್ ಹತ್ಯೆ, ನಿವೃತ್ತ ಎಸಿಪಿ ಸಂಗ್ರಾಮ್ ಸಿಂಗ್ ವಿಶ್ಲೇಷಣೆ
ಶಿವಸುಂದರ್ ಅವರು ಹವ್ಯಾಸಿ ಪತ್ರಕರ್ತರು ಹಾಗೂ ಅಂಕಣಕಾರರು. ಅವರ ಲೇಖನಗಳು ವಾರ್ತಾಭಾರತಿ, ಪ್ರಜಾವಾಣಿ, ದ ಹಿಂದೂ, ಇಪಿ ಡಬ್ಲ್ಯು, ಕನ್ನಡ ಪ್ರಭಗಳಲ್ಲಿ ಪ್ರಕಟವಾಗಿವೆ. ಜತೆಗೆ ಸಾಮಾಜಿಕ ಕಾರ್ಯಕರ್ತರಾಗಿಯೂ ಅವರು ಗುರುತಿಸಿಕೊಂಡಿದ್ದಾರೆ.
ಗೌರಿ ಲಂಕೇಶ್ ಅವರ ಒಡನಾಡಿಯಾಗಿ, ಹಲವು ವರ್ಷಗಳ ಕಾಲ ಗೌರಿ ಲಂಕೇಶ್ ಪತ್ರಿಕೆಗಾಗಿ ಚಾರ್ವಾಕ ಅಂಕಣ ಬರೆದಿದ್ದಾರೆ.
'ಒನ್ಇಂಡಿಯಾ ಕನ್ನಡ' ಮಾಡಿದ ಸಂದರ್ಶನದಲ್ಲಿ ವಿವಿಧ ವಿಚಾರಗಳ ಬಗ್ಗೆ ಅವರು ಮಾತನಾಡಿದ್ದಾರೆ.
ಆಸ್ತಿ ವಿವಾದಕ್ಕೆ ಕೊಲೆಯಾಗಿರಬಹುದು ಎಂಬ ದಿಕ್ಕಿನಲ್ಲೇ ಕಲಬುರ್ಗಿ ಹತ್ಯೆ ಪ್ರಕರಣದ ತನಿಖೆಯು ಮೊದಲ ಆರು ತಿಂಗಳು ನಡೆಯಿತು. ಅಲ್ಲಿಗೆ ಕೊಲೆಗಾರರು ಸಿಕ್ಕುವ ಅವಕಾಶ ತಪ್ಪಿಹೋಯಿತು. ಮಾರ್ಚ್ 8, 2005ರಿಂದ ಗೌರಿ ಸಂಪಾದಕಿಯಾಗಿ ಪತ್ರಿಕೆ ಹೊರಬರಲು ಆರಂಭಿಸಿದ ದಿನದಿಂದ ಪ್ರತಿ ಸಂಚಿಕೆಯಲ್ಲೂ ಬಲಪಂಥೀಯ, ಆರೆಸ್ಸೆಸ್ ಧೋರಣೆಗಳನ್ನು ಖಂಡಿಸುತ್ತಾ ಬಂದಿದ್ದಾರೆ. ಅದು ಮೊನ್ನೆ ಅವರೇ ರೂಪಿಸಿದ ಕೊನೆ ಸಂಚಿಕೆವರೆಗೆ ಮುಂದುವರಿದಿತ್ತು ಎಂದರು ಶಿವಸುಂದರ್.
ಆಮಿಷವೊಡ್ಡಿದರು, ಬೆದರಿಸಿದರು, ಕೇಸುಗಳನ್ನು ಹಾಕಿದರು. ಆದರೆ ಈಕೆ ಯಾವುದಕ್ಕೂ ಜಗ್ಗದವಳಲ್ಲ ಎನಿಸಿದಾಗ ಹತ್ಯೆ ಮಾಡಿದ್ದಾರೆ. ನಕ್ಸಲರು ಈ ಕೊಲೆ ಮಾಡಿಲ್ಲ ಎಂಬುದು ನನ್ನ ಬಲವಾದ ನಂಬಿಕೆ. ಆದರೆ ಆ ಆಯಾಮದಲ್ಲಿ ತನಿಖೆಯೇ ಆಗಬಾರದು ಅಂತೇನೂ ಹೇಳಲ್ಲ. ಆದರೆ ಈ ರೀತಿ ಹತ್ಯೆ ಮಾಡಿದ್ದರೆ ಅದನ್ನು ನಕ್ಸಲರು ಬಹಿರಂಗ ಪಡಿಸುತ್ತಿದ್ದರು ಎಂದು ಹೇಳಿದರು.
ಗೌರಿ ಲಂಕೇಶ್ ಬಗ್ಗೆ ಮನ ಬಿಚ್ಚಿ ಮಾತನಾಡಿದ ರವಿ ಬೆಳಗೆರೆ
ನಕ್ಸಲರ ಕಾರ್ಯವೈಖರಿಯನ್ನು ಟೀಕಿಸಿದ್ದೀವಿ, ವಿಮರ್ಶೆ ಮಾಡಿದ್ದೀವಿ, ಅವರ ಮೂರ್ಖತನವನ್ನು ಎತ್ತಾಡಿದ್ದೀವಿ. ಇಷ್ಟೂ ವರ್ಷದಲ್ಲಿ ನಮಗೆ ಬಂದದ್ದು ಒಂದೇ ಪತ್ರ. ಅದೂ ಬೆದರಿಕೆಯಲ್ಲ. ನಮ್ಮ ಆಲೋಚನೆ ಹೀಗಿದೆ. ನೀವು ಅದನ್ನು ಹೀಗೆ ವಿಮರ್ಶೆ ಮಾಡಿದ್ದೀರಿ ಎಂಬಂಥ ಸ್ಪಷ್ಟನೆ ನೀಡುವಂಥದ್ದಾಗಿತ್ತೇ ವಿನಾ ಬೆದರಿಕೆಯದಾಗಿರಲಿಲ್ಲ ಎಂದರು.
ಆದರೆ, ಬಲಪಂಥೀಯ ವಿಚಾರಧಾರೆಗಳನ್ನಾಗಲೀ ಮೋದಿ ಸರಕಾರದ ಓರೆ-ಕೋರೆಗಳನ್ನಾಗಲೀ ಟೀಕಿಸಿ ಬರೆದಾಗ ಅವಾಚ್ಯ ಶಬ್ದಗಳನ್ನು ಬಳಸಿ ಬಯ್ಯುತ್ತಿದ್ದರು, ಬೆದರಿಸುತ್ತಿದ್ದರು. ಇವೆಲ್ಲ ಮಾಮೂಲು ಅಂದುಕೊಂಡು ನಾವು ಸುಮ್ಮನಾಗ್ತೀವಿ. ನಿಮಗೆ ನಕ್ಸಲರ ಜತೆ ಸಂವಾದ ಸಾಧ್ಯವಿದೆ. ಆದರೆ ಬಲಪಂಥೀಯರು ಹೇಳಿದ್ದನ್ನಷ್ಟೇ ನೀವು ಕೇಳಿಸಿಕೊಳ್ಳಬೇಕು. ಪ್ರಶ್ನೆ ಮಾಡುವುದನ್ನು ಅವರು ಸಹಿಸುವುದಿಲ್ಲ ಎಂದು ಶಿವಸುಂದರ್ ಅರೆಕ್ಷಣ ಮೌನವಾದರು.
ನೂರ್ ಶ್ರೀಧರ್, ಸಿರಿಮನೆ ನಾಗರಾಜು ಪ್ರಮುಖರು
ಗೌರಿ ಲಂಕೇಶ್ ಅವರು ಮುಖ್ಯವಾಹಿನಿಗೆ ಕರೆತಂದ ಹೋರಾಟಗಾರರಲ್ಲಿ ಪ್ರಮುಖರು ನೂರ್ ಶ್ರೀಧರ್ ಹಾಗೂ ಸಿರಿಮನೆ ನಾಗರಾಜು. ವೈಚಾರಿಕ ಭಿನ್ನಾಭಿಪ್ರಾಯದಿಂದಾಗಿ ಮುಖ್ಯ ವಾಹಿನಿಯಲೇ ಹೋರಾಟ ಮುಂದುವರಿಸುವ ಉದ್ದೇಶದಿಂದ ಅವರು ವಾಪಸ್ ಬಂದಿದ್ದರು. ಅವರಿಬ್ಬರ ಉದ್ದೇಶವನ್ನು ಸರಕಾರಕ್ಕೆ ಮನವರಿಕೆ ಮಾಡಿಕೊಡುವ ಕೆಲಸ ಮಾಡಿದ್ದರು ಗೌರಿ.
ಒಂಬತ್ತು ಮಂದಿ ಮುಖ್ಯವಾಹಿನಿಗೆ
ಈಗ ಕಾಂಗ್ರೆಸ್ ಸರಕಾರ ಮಾಡಿರುವ ಸಮಿತಿಯು ಈ ರೀತಿ ಒಂಬತ್ತು ನಕ್ಸಲರನ್ನು ಮುಖ್ಯವಾಹಿನಿಗೆ ಕರೆತಂದಿದೆ. ಅದರೆ ಅದರಲ್ಲಿ ನೂರ್ ಶ್ರೀಧರ್, ಸಿರಿಮನೆ ನಾಗರಾಜು ಮಾತ್ರ ಮಾವೋವಾದಿ ಸಿದ್ಧಾಂತದ ಪ್ರತಿಪಾದಕರು ಹಾಗೂ ಆ ಸಂಘಟನೆಯಲ್ಲಿ ಮುಖ್ಯ ಸ್ಥಾನದಲ್ಲಿದ್ದವರು. ಈಗ ವಾದ ಮಾಡುತ್ತಿರುವಂತೆ ನಕ್ಸಲರಿಗೆ ಸಿಟ್ಟು ಅನ್ನೋದಿದ್ದರೆ ಅವರಿಬ್ಬರ ಮೇಲಿರಬೇಕಿತ್ತು.
ಆದರೆ, ಅವರು ಯಾರೂ ಪೊಲೀಸರಿಗೆ ಮಾಹಿತಿ ನೀಡಿ, ನಕ್ಸಲರ ವಿರುದ್ಧ ಕೆಲಸ ಮಾಡುತ್ತಿರುವವರಲ್ಲ. ಇನ್ನು ಮುಖ್ಯವಾಹಿನಿಗೆ ಬಂದ ಇತರ ನಕ್ಸಲರು ಮಾವೋವಾದಿಗಳಲ್ಲ. ಗೌರಿ ಕಾರಣದಿಂದ ನಕ್ಸಲ್ ಸಂಘಟನೆ ದುರ್ಬಲವಾಯಿತು ಅನ್ನೋದು ಕೂಡ ಹುಟ್ಟು ಹಾಕುತ್ತಿರುವ ಸುದ್ದಿ.
ನಕ್ಸಲರಾಗಿದ್ದರೆ ತಾವೇ ಕೊಂದಿದ್ದಾಗಿ ಹೇಳಿಕೊಳ್ಳುತ್ತಿದ್ದರು
ಇನ್ನು ನಕ್ಸಲರು ಯಾರನ್ನೇ ಕೊಲ್ಲುವಂತಿದ್ದರೆ ಕೊಲ್ಲುತ್ತೇವೆ ಎಂದು ಮುಂಚಿತವಾಗಿಯೇ ತಿಳಿಸುತ್ತಾರೆ. ಆ ನಂತರ ಕೊಂದದ್ದು ನಾವೇ, ಈ ಕಾರಣಕ್ಕೆ ಕೊಂದಿದ್ದೇವೆ ಎಂದು ಕೂಡ ಬಹಿರಂಗ ಪಡಿಸುತ್ತಾರೆ. ಆಂಧ್ರದಲ್ಲಿ ನಕ್ಸಲರನ್ನು ಮುಖ್ಯವಾಹಿನಿಗೆ ಕರೆತರುವ ಪ್ರಯತ್ನ ಮಾಡುತ್ತಿದ್ದ ಕೆಲವರ ಹತ್ಯೆಯಾಗಿದೆ. ಆದರೆ ಅದನ್ನು ಪೊಲೀಸರು, ಗೂಂಡಾಗಳೇ ಮಾಡಿಸಿರುವುದು ಎಂಬುದು ಸಾಬೀತಾಗಿದೆ.
ವಿಕ್ರಂ ಗೌಡನ ಹೆಸರು ತೇಲಿಬಿಟ್ಟಿರುವುದು ಮಾಧ್ಯಮ
ಈಗ ವಿಕ್ರಂ ಗೌಡನ ಹೆಸರು ತೇಲಿಬಿಟ್ಟಿರುವ ಕೆಲ ಮಾಧ್ಯಮಗಳಿಗೆ ಪೊಲೀಸರೇ ಸ್ಪಷ್ಟನೆ ನೀಡಿದ್ದಾರೆ. ಆತನ ಪಾತ್ರವಿಲ್ಲ ಎಂದು ತಿಳಿಸಿದ್ದಾರೆ. ಪೊಲೀಸರೇ ನಿರಾಕರಿಸಿದ ಮಾಹಿತಿ ಇವರಿಗೆಲ್ಲಿಂದ ಸಿಗುವುದಕ್ಕೆ ಸಾಧ್ಯ? ಕೆಲ ಮಾಧ್ಯಮಗಳು ನಿರ್ದಿಷ್ಟ ಸಿದ್ಧಾಂತ, ಪಕ್ಷದ ಪರವಾಗಿ ಕೆಲಸ ಮಾಡುತ್ತಿವೆ. ಅದು ಜನರಿಗೂ ಗೊತ್ತಾಗುತ್ತದೆ.
ಬಲಪಂಥೀಯ ಬ್ಲೂವೇಲ್ ಆಟದಲ್ಲಿ ಸಣ್ಣ ವಯಸ್ಸಿನ ಹುಡುಗರು
ಗೌರಿಗೆ ಐವತ್ತೈದು ವರ್ಷ ವಯಸ್ಸಾಗಿತ್ತು. ಈಗಿನ್ನೂ ಇಪ್ಪತ್ತು-ಇಪ್ಪತ್ತೆರಡು ವರ್ಷದಲ್ಲಿರುವ ಹುಡುಗರು, "ನಿನ್ನೆ ನೀನು ಯಾರ ಜತೆ ಇದ್ದೆಯೆ?" ಎಂಬ ಮೆಸೇಜು, ಪೋಸ್ಟ್ ಗಳಲ್ಲಿ ಹಾಕುತ್ತಿದ್ದರು. ಅದಕ್ಕೆ ಆಕೆ, ಅವರು ನಮ್ಮ ಮಕ್ಕಳೇ. ಆದರೆ ದಾರಿ ತಪ್ಪಿದ ಮಕ್ಕಳು ಎಂದು ಸುಮ್ಮನಾಗುತ್ತಿದ್ದರು. ಚಿಕ್ಕ ವಯಸ್ಸಿನ ಹುಡುಗರ ಮೆದುಳುಗಳಲ್ಲಿ ವಿಷ ತುಂಬಲಾಗುತ್ತಿದೆ.
ಬಲಪಂಥೀಯ ಸಂಘಟನೆಗಳು ಬ್ಲೂವೇಲ್ ಆಟದಂತೆ ಚಿಕ್ಕ ವಯಸ್ಸಿನವರನ್ನು ಆಡಿಸುತ್ತಿವೆ. ಒಂದು ವೇಳೆ ಸಿಕ್ಕಿಬಿದ್ದರೂ ನಾಥೂರಾಂ ಗೋಡ್ಸೆ ವಿಚಾರದಲ್ಲಿ ಹೇಳಿದಂತೆ, ಆತ ನಮ್ಮ ಸಂಘಟನೆ ಬಿಟ್ಟು ಬಹಳ ಕಾಲ ಆಗಿತ್ತು. ನಮಗೂ ಅವನಿಗೂ ಸಂಬಂಧ ಇಲ್ಲ ಎಂದು ಬಿಡುತ್ತಾರೆ.
ಗೌರಿ ಲಂಕೇಶ್ ಬಗ್ಗೆ ಅವಹೇಳನಕಾರಿ ಪೋಸ್ಟ್ ಹಾಕಿದ್ದ ಮಲ್ಲಿ ಅರ್ಜುನ್ ಬಂಧನ
ಅಂತರರಾಷ್ಟ್ರೀಯ ಮಟ್ಟದಲ್ಲಿ ಸುದ್ದಿ
ಅಂತರರಾಷ್ಟ್ರೀಯ ಮಟ್ಟದಲ್ಲಿ ಗೌರಿ ಲಂಕೇಶ್ ಹತ್ಯೆ ಸುದ್ದಿಯಾಗುತ್ತಿದೆ. ಇದರಿಂದ ಬಿಜೆಪಿಗೆ ಮುಜುಗರ ಎದುರಾಗಿದೆ. ಆದ್ದರಿಂದಲೇ ನಕ್ಸಲರು ಮಾಡಿದ್ದು ಎಂದು ಹೇಳಲಾಗುತ್ತಿದೆ. ಬಿಜೆಪಿಯ ಹೇಳಿಕೆ ಆಗಿದ್ದರೆ ಇದನ್ನು ಗಂಭೀರವಾಗಿ ತೆಗೆದುಕೊಳ್ಳುವ ಅಗತ್ಯವೇ ಇರಲಿಲ್ಲ. ಆದರೆ ಅಧಿಕಾರದಲ್ಲಿರುವ ಸಚಿವ ರವಿಶಂಕರ್ ಪ್ರಸಾದ್ ಹೇಳುತ್ತಾರೆ.
ಅಂದರೆ, ತನಿಖೆ ಆಗಷ್ಟೇ ಆರಂಭವಾದ ಪ್ರಕರಣದಲ್ಲಿ ಪರೋಕ್ಷವಾಗಿ ಇದೇ ಹಾದಿಯಲ್ಲಿ ಸಾಗಬೇಕು ಎಂದು ಸೂಚಿಸಿದ ಹಾಗಾಯಿತು. ನಮ್ಮ ಒತ್ತಾಯ ಏನೆಂದರೆ ಎಲ್ಲ ಆಯಾಮದಲ್ಲೂ ತನಿಖೆಯಾಗಲಿ. ನಕ್ಸಲರು, ಬಲಪಂಥೀಯರು, ವೈಯಕ್ತಿಕ ದ್ವೇಷ..ಹೀಗೆ ಎಲ್ಲ ಆಯಾಮದಲ್ಲೂ ಆಗಲಿ. ಆದರೆ ಅಧಿಕಾರದಲ್ಲಿ ಇರುವವರು ತನಿಖಾ ತಂಡವನ್ನು ನಿರ್ದೇಶಿಸಬೇಡಿ.
ಗೌರಿಗೆ ಕರ್ನಾಟಕ ಸರ್ಕಾರ ರಕ್ಷಣೆ ಏಕೆ ಕೊಟ್ಟಿರಲಿಲ್ಲ: ರವಿಶಂಕರ್ ಪ್ರಶ್ನೆ
ಇಂಗ್ಲಿಷ್ ಪತ್ರಿಕೋದ್ಯಮದಲ್ಲೇ ಇದ್ದಿದ್ದರೆ...
ಗೌರಿ ಇಂಗ್ಲಿಷ್ ಪತ್ರಿಕೋದ್ಯಮದಲ್ಲೇ ಇದ್ದಿದ್ದರೆ ಲಕ್ಷಗಟ್ಟಲೆ ಸಂಬಳ ತೆಗೆದುಕೊಳ್ಳುವ ಕೆಲಸದಲ್ಲಿ ಇರುತ್ತಿದ್ದರು. ರೀಜಿನಲ್ ಹೆಡ್ ಆಗಿರುತ್ತಿದ್ದರು. ಆದರೆ ಅದೆಲ್ಲ ಬಿಟ್ಟು ಹೋರಾಟದ ಹಾದಿಯಲ್ಲಿ ಸಾಗಿದರು. ಈ ತಿಂಗಳು ಪತ್ರಿಕೆಯ ಎಲ್ಲ ಸಿಬ್ಬಂದಿಗೆ ವೇತನ ನೀಡುವುದು ಕಷ್ಟವಿತ್ತು. ಆದರೆ ಇನ್ಷೂರೆನ್ಸ್ ನ ಹಣ ಬಂತು, ಅದರಲ್ಲಿ ಕೊಟ್ಟೆ ಅಂದರು.
ಆಕೆ ಸಮಾಜದ ಋಣವನ್ನೂ ಇರಿಸಿಕೊಂಡಿಲ್ಲ, ತನ್ನ ಜತೆ ಕೆಲಸ ಮಾಡುವವರ ಋಣವನ್ನೂ ಇಟ್ಟುಕೊಂಡಿಲ್ಲ. ಆಕೆ ಇದ್ದದ್ದು ಕೂಡ ತಾಯಿ ಇಂದಿರಾ ಅವರ ಮನೆಯಲ್ಲಿ. ಪತ್ರಿಕೆ ಸಂಪಾದಕರು ಅಂದರೆ ಶ್ರೀಮಂತರು ಎಂಬ ಕಲ್ಪನೆ ಜನಸಾಮಾನ್ಯರಲ್ಲಿದೆ. ಆಕೆ ಲಂಕೇಶ್ ಪತ್ರಿಕೆಯಲ್ಲಿ ತೆಗೆದುಕೊಳ್ಳುತ್ತಿದ್ದದ್ದು ಇಪ್ಪತ್ತು ಸಾವಿರ ವೇತನ. ಇನ್ನೊಂದು ಪತ್ರಿಕೆಗೆ ಅಂಕಣ ಬರೆಯುತ್ತಿದ್ದರು. ಅದರಿಂದ ಇಪ್ಪತ್ತೆಂಟು ಸಾವಿರ ಸಂಭಾವನೆ ಬರುತ್ತಿತ್ತು. ಪ್ರತಿ ವಾರ ಗೌರಿ ಲಂಕೇಶ್ ಪತ್ರಿಕೆ ಬರುತ್ತಿದ್ದುದೇ ಅಚ್ಚರಿ.
ನಾನು ಗೌರಿ, ನಾವೆಲ್ಲ ಗೌರಿ
ಗೌರಿ ಲಂಕೇಶ್ ಸಾವಿಗೆ ಇಷ್ಟೊಂದು ಮಂದಿ ಮರುಗುತ್ತಿದ್ದಾರೆ. ಸೆಪ್ಟೆಂಬರ್ ಹನ್ನೆರಡರಂದು ರಾಜ್ಯದ ನಾನಾ ಭಾಗ, ದೇಶದ ನಾನಾ ಕಡೆಯಿಂದ ಜನರು ಪ್ರತಿಭಟನೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಇದು ಆಕೆಯ ಪ್ರಭಾವ ಅಲ್ಲದೇ ಇನ್ನೇನು? "ನಾನು ಗೌರಿ, ನಾವೆಲ್ಲ ಗೌರಿ" ಎಂದು ಈ ಹೋರಾಟದಲ್ಲಿ ಪಾಲ್ಗೊಂಡವರು ಪಟ್ಟಿ ಹಾಕಿಕೊಂಡಿರುತ್ತಾರೆ.
ಬಸವನಗುಡಿ ಠಾಣೆಯಲ್ಲಿ ಪೊಲೀಸ್ ಕಂಪ್ಲೇಂಟ್
ಗೌರಿಯ ಕಡೆಗೆ ಪಿಸ್ತೂಲು ಗುರಿ ಮಾಡಿ ಹಂತಕ ಕೊಂದ. ಅದಕ್ಕೂ ಮುನ್ನ ಯಾರಾದರೂ ಆಕೆಯ ಕಡೆ ಪಿಸ್ತೂಲು ಗುರಿ ಮಾಡಿದ್ದರೆ ಅದು ಇಂದ್ರಜಿತ್ ಲಂಕೇಶ್. ಈ ಬಗ್ಗೆ ಗೌರಿ ಹಾಗೂ ಕವಿತಾ ಬಸವನಗುಡಿ ಪೊಲೀಸ್ ಸ್ಟೇಷನ್ ನಲ್ಲಿ ಕಂಪ್ಲೇಂಟ್ ಕೊಟ್ಟಿದ್ದರು. ಅವರೇ ಈಗ ಸಿಬಿಐ ತನಿಖೆಗೆ ಒತ್ತಾಯಿಸುತ್ತಿದ್ದಾರೆ.
ನಮಗೆ ಯಾವ ಸಂಘಟನೆ ಬಗ್ಗೆ ಅನುಮಾನ ಇದೆಯೋ ಅದರ ಜತೆ ಗುರುತಿಸಿಕೊಂಡ ಪಕ್ಷ ಕೇಂದ್ರದಲ್ಲಿ ಅಧಿಕಾರದಲ್ಲಿದೆ. ಅದರ ಹಿಡಿತದಲ್ಲಿರುವ ತನಿಖಾ ಸಂಸ್ಥೆಯಿಂದ ನಾವು ಏನು ನಿರೀಕ್ಷೆ ಮಾಡುವುದಕ್ಕೆ ಸಾಧ್ಯ? ಆದರೆ ನಮಗೆ ಸಂದೇಹ ಬರುವ ರೀತಿಯಲ್ಲಿ ಸಿಬಿಐ ತನಿಖೆಗೆ ಒತ್ತಾಯ ಮಾಡಲಾಗುತ್ತಿದೆ. ಆದ್ದರಿಂದ ರಾಜ್ಯದ ಎಸ್ ಐಟಿ ತಂಡದಿಂದಲೇ ತನಿಖೆ ಆಗಬೇಕು ಎಂಬುದು ನಮ್ಮ ಆಗ್ರಹ.