ಸಂಪಂಗಿರಾಮನಗರದಲ್ಲಿ ಹೃದಯರೋಗ ಮತ್ತು ದಂತ ರೋಗ ತಪಾಸಣೆ
ಬೆಂಗಳೂರು, ಫೆಬ್ರವರಿ 19: ನಗರದ ವಿಜಯ ಚಾರಿಟೆಬಲ್ ಟ್ರಸ್ಟ್ ಮತ್ತು ವಿಲ್ಸನ್ ಗಾರ್ಡನ್ನ ಸೌತ್ ಬೆಂಗಳೂರು ಸೌಹಾರ್ದ ಕೋ-ಆಪರೇಟಿವ್ ಸೊಸೈಟಿಯ ಸಹಯೋಗದಲ್ಲಿ ಉಚಿತ ಹೃದಯರೋಗ ತಪಾಸಣೆ ಮತ್ತು ಉಚಿತ ದಂತರೋಗ ತಪಾಸಣೆ ಹಾಗೂ ದಂತ ಚಿಕಿತ್ಸಾ ಶಿಬಿರವನ್ನು ಆಯೋಜಿಸಲಾಗಿದೆ.
2019 ರ ಫೆಬ್ರವರಿ 21, 22 ಮತ್ತು 23 ರಂದು ಸಂಪಂಗಿರಾಮನಗರದ 5 ನೇ ಅಡ್ಡರಸ್ತೆಯಲ್ಲಿರುವ ಡಾ.ನಕುಲ್ ಡೆಂಟಲ್ ಕೇರ್ನಲ್ಲಿ ನಡೆಯಲಿರುವ ಈ ಆರೋಗ್ಯ ಶಿಬಿರದಲ್ಲಿ ಸಾರ್ವಜನಿಕರಿಗೆ ತಜ್ಞ ವೈದ್ಯರ ತಂಡ ಹೃದ್ರೋಗ ತಪಾಸಣೆ, ಇಸಿಜಿ, ದಂತ ತಪಾಸಣೆ ನಡೆಸಲಿದೆ.
ಫೆಬ್ರವರಿ 21 ರಂದು ನಡೆಯಲಿರುವ ಸಮಾರಂಭದ ಮುಖ್ಯ ಅತಿಥಿಗಳಾಗಿ ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಉದಯ ಗರುಡಾಚಾರ್, ಅದಮ್ಯ ಚೇತನದ ಸಂಸ್ಥಾಪಕ ಅಧ್ಯಕ್ಷರಾದ ತೇಜಸ್ವಿನಿ ಅನಂತಕುಮಾರ್ ವಾರ್ಡ್ ಸಂಖ್ಯೆ 11 ರ ಕಾರ್ಪೊರೇಟರ್ ವಸಂತಕುಮಾರ್ ಅವರು ಆಗಮಿಸಲಿದ್ದಾರೆ.

ಈ ಮೂರು ದಿನಗಳ ಆರೋಗ್ಯ ತಪಾಸಣಾ ಶಿಬಿರದಲ್ಲಿ ತಜ್ಞ ವೈದ್ಯರಾದ ಡಾ.ಗಂಗಾಧರ ಟಿ.ಬಿ(ಕಾರ್ಡಿಯೋಥೊರೆಸಿಸ್ ಸರ್ಜನ್, ಏಸ್ತರ್ ಸಿಎಂಐ ಆಸ್ಪತ್ರೆ), ಡಾ.ರೂಪ(ಪೆಥಾಲಾಜಿಸ್ಟ್), ಡಾ.ರಮೇಶ್ ಚೌಧರಿ(ಇಂಪ್ಲಾಂಟೋಲಾಜಿಸ್ಟ್), ಡಾ.ಪೃಥ್ವಿ ಎಸ್(ಓರಲ್ & ಮ್ಯಾಕ್ಸಿಲೋಫೇಶಿಯಲ್ ಸರ್ಜನ್), ಡಾ.ನಕುಲ್ (ಡೆಂಟಿಸ್ಟ್, ಇಂಪ್ಲಾಂಟೋಲಾಜಿಸ್ಟ್, ಬೆಂಗಳೂರು ಆಸ್ಪತ್ರೆ), ಡಾ.ಲತಾಶ್ರೀ(ಡೆಂಟಿಸ್ಟ್, ಇಂಪ್ಲಾಂಟೋಲಾಜಿಸ್ಟ್, ವಿಜಯ ಡೆಂಟಲ್ ಕೇರ್, ರಾಜಾಜಿನಗರ), ಡಾ.ರಂಜಿತಾ(ಆರ್ಥಡೋಂಟಿಸ್ಟ್) ಮತ್ತು ಡಾ.ಪ್ರೀತಿ(ಡೆಂಟಲ್ ಸರ್ಜನ್, ದೊಮ್ಮಲೂರು) ನೇತೃತ್ವದ ತಂಡಗಳು ಸಾರ್ವಜನಿಕರಿಗೆ ತಪಾಸಣೆ ನಡೆಸಿ ಸೂಕ್ತ ಸಲಹೆ ಸೂಚನೆಗಳನ್ನು ನೀಡಲಿವೆ.
ಈ ಕುರಿತು ಮಾತನಾಡಿದ ನಗರದ ವಿಜಯ ಚಾರಿಟೆಬಲ್ ಟ್ರಸ್ಟ್ ಅಧ್ಯಕ್ಷ ವಿಜಯ್ ಮತ್ತು ವಿಲ್ಸನ್ ಗಾರ್ಡನ್ನ ಸೌತ್ ಬೆಂಗಳೂರು ಸೌಹಾರ್ದ ಕೋ-ಆಪರೇಟಿವ್ ಸೊಸೈಟಿಯ ಅಧ್ಯಕ್ಷ ನಾಗರಾಜ್ ಅವರು, ಈ ಆರೋಗ್ಯ ತಪಾಸಣೆ ಶಿಬಿರದಲ್ಲಿ ಪಾಲ್ಗೊಂಡು ತಮ್ಮ ಆರೋಗ್ಯ ಮತ್ತು ದಂತ ತಪಾಸಣೆ ಮಾಡಿಸಿಕೊಳ್ಳಬೇಕೆಂದು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.












Click it and Unblock the Notifications