Karnataka Poll: ಹೋಟೆಲ್ಗಳ ಉಚಿತ ಉಪಹಾರ ಆಫರ್: ಬಿಬಿಎಂಪಿ ನಿರ್ಬಂಧಕ್ಕೆ ಹೈಕೋರ್ಟ್ ತಡೆ
ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಮತ ಹಾಕಿ ಬಂದವರಿಗೆ ಉಚಿತವಾಗಿ ಉಪಹಾರ, ತಂಪು ಪಾನೀಯ ಸೇರಿದಂತೆ ವಿವಿಧ ಆಫರ್ ಗಳನ್ನು ನೀಡಿದ್ದ ಬೆಂಗಳೂರಿನ ಎರಡು ಹೋಟೆಲ್ಗಳ ನಿರ್ಧಾರಕ್ಕೆ ಬಿಬಿಎಂಪಿ ನಿರ್ಬಂಧ ವಿಧಿಸಿತ್ತು. ಆದರೆ ಹೈಕೋರ್ಟ್ ಈ ನಿರ್ಬಂಧಕ್ಕೆ ತಡೆ ನೀಡಿದ್ದು, ಹೋಟೆಲ್ ಮಾಲೀಕರಿಗೆ ಜಯ ಸಿಕ್ಕಿದೆ.
ಬಿಬಿಎಂಪಿ ಕ್ರಮದ ವಿರುದ್ಧ ಹೋಟೆಲ್ ಮಾಲೀಕರ ಸಂಘಟನೆ ಹೈಕೋರ್ಟ್ ಮೊರೆ ಹೋಗಿತ್ತು. ಮಂಗಳವಾರ ಹೈಕೋರ್ಟ್ನಲ್ಲಿ ಅರ್ಜಿಯ ವಿಚಾರಣೆ ನಡೆಯಿತು. ಮತದಾನ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಮತದಾನದ ಪ್ರಮಾಣವನ್ನು ಹೆಚ್ಚಿಸಲು ಈ ನಿರ್ಧಾರ ಮಾಡಿದ್ದೇವೆ, ಇದಕ್ಕೆ ನಿರ್ಬಂಧ ಹೇರುವುದು ಸರಿಯಲ್ಲ ಎಂದ ಹೋಟೆಲ್ ಮಾಲೀಕರ ಸಂಘಟನೆ ಮನವಿ ಮಾಡಿದ್ದವು. ಹೋಟೆಲ್ ಮಾಲಿಕರ ಮನವಿಯನ್ನು ಹೈಕೋರ್ಟ್ ಪುರಸ್ಕರಿಸಿದೆ.

ಬೆಂಗಳೂರು ನಗರದ ನೃಪತುಂಗ ರಸ್ತೆಯಲ್ಲಿರುವ ನಿಸರ್ಗ ಗ್ರ್ಯಾಂಡ್ ಮತ್ತು ಚಾಲುಕ್ಯ ಸಾಮ್ರಾಟ್ ಹೋಟೆಲ್ಗಳು, ಮತದಾನ ಮಾಡಿ ಬಂದವರಿಗೆ ಉಚಿತ ತಿಂಡಿ, ಮೈಸೂರು ಪಾಕ್ ಮತ್ತು ತಂಪು ಪಾನೀಯ ನೀಡುವುದಾಗಿ ಆಫರ್ ಮಾಡಿದ್ದವು. ಹೋಟೆಲ್ಗಳ ಈ ಕೊಡುಗೆಗಳಿಗೆ ಬಿಬಿಎಂಪಿ ವಿರೋಧ ಮಾಡಿತ್ತು. ಇಂತಹ ಆಫರ್ ಗಳನ್ಉ ಹೋಟೆಲ್ ಮಾಲಿಕರು ನೀಡಬಾರದು ನಾವು ಇದಕ್ಕೆ ಅನುಮತಿ ನೀಡಲ್ಲ ಎಂದು ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್ ಹೇಳಿದ್ದರು.
ಬಿಬಿಎಂಪಿಯ ಸೂಚನೆಗೆ ಹೋಟೆಲ್ ಮಾಲಿಕರು ಕೆರಳಿದ್ದರು. ಇದು ರಾಜಕೀಯ ಹೊರತಾದ ಕೊಡುಗೆಯಾಗಿದೆ. 2018ರಲ್ಲಿ ಬೆಂಗಳೂರಿನಲ್ಲಿ ಕೇವಲ 54.7% ಮತದಾನವಾಗಿತ್ತು. ಈ ಬಾರಿ ಮತದಾನದ ಪ್ರಮಾಣವನ್ನು ಹೆಚ್ಚಿಸಲು ಈ ಆಫರ್ ನೀಡಿದ್ದೇವೆ, 2018 ರ ವಿಧಾನಸಭಾ ಚುನಾವಣೆ ಮತ್ತು 2019ರ ಲೋಕಸಭಾ ಚುನಾವಣೆಯಲ್ಲಿ ಕೂಡ ಈ ಆಫರ್ ನೀಡಿದ್ದೆವು ಎಂದು ಹೋಟೆಲ್ ಮಾಲಿರು ಹೇಳಿದರು.
2018ರಲ್ಲಿ ಸುಮಾರು 3900 ಮತದಾರರು ಇದರ ಅನುಕೂಲ ಪಡೆದುಕೊಂಡಿದ್ದರು, 2019ರಲ್ಲಿ ಅದು 5100ಕ್ಕೆ ಏರಿಕೆಯಾಗಿತ್ತು, ಈ ಬಾರಿ ಕೂಡ ಮತದಾರರನ್ನು ಸೆಳೆಯಲು ಈ ಪ್ರಯತ್ನ ಮಾಡಲಾಗುತ್ತಿದೆ ಎಂದು ಹೇಳಲಾಗಿದೆ.












Click it and Unblock the Notifications