ಇನ್ನೊಂದು ಶ್ರೀಲಂಕಾ ಸೃಷ್ಟಿಸುವ ಪಕ್ಷಗಳು ನಿಮಗೆ ಬೇಕಾ?: ಎಚ್ಡಿಕೆ ಪ್ರಶ್ನೆ
ಬೆಂಗಳೂರು, ಜು.11: ಅಭಿವೃದ್ಧಿ ಹೆಸರಿನಲ್ಲಿ ಬಿಜೆಪಿ ಸರ್ಕಾರ ಜನರ ತೆರಿಗೆ ಹಣ ಲೂಟಿ ಮಾಡುತ್ತಿದೆ. ನಾನು ಯಾವುದೇ ಲೂಟಿ ಹೊಡೆಯುವ ಸಂಸ್ಥೆಗಳನ್ನು ನಡೆಸುತ್ತಿಲ್ಲ. ನಿಮಗೆ ಈ ಪಕ್ಷಗಳು ಇನ್ನೋಂದು ಶ್ರೀಲಂಕಾ ಸೃಷ್ಟಿ ಮಾಡುತ್ತದೆ. ಹೀಗಾಗಿ ಇಂತಹ ಪಕ್ಷಗಳು ನಿಮಗೆ ಬೇಕಾ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಪ್ರಶ್ನಿಸಿದರು.
ದಾಸರಹಳ್ಳಿಯ ಅಬ್ಬಿಗೆರೆ ಹಾಗೂ ಹೊಸಕೆರೆಹಳ್ಳಿಯಲ್ಲಿ ನಡೆದ ಜನತಾ ಮಿತ್ರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಜೆಡಿಎಸ್ ಪಕ್ಷಕ್ಕೆ ಬೆಂಗಳೂರಿನಲ್ಲಿ ನೆಲೆಯೇ ಇಲ್ಲ ಎಂದು ಕೆಲವರು ಹೇಳುತ್ತಿದ್ದಾರೆ. ನಮ್ಮ ಪಕ್ಷಕ್ಕೆ ನಗರದಲ್ಲಿ ನೆಲೆ ಇದೆಯೋ ಇಲ್ಲವೋ ಎಂಬುದನ್ನು ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ತೋರಿಸುತ್ತೇನೆ. ಬಡವರನ್ನು ಹಿಂಸೆ ಮಾಡುವ ಕೆಲಸ ನಡೆದರೆ ಶ್ರೀಲಂಕಾದ ಪರಿಸ್ಥಿತಿ ಇಲ್ಲಿಯೂ ನಡೆಯುತ್ತದೆ. ಇನ್ನೊಂದು ಶ್ರೀಲಂಕಾ ಸೃಷ್ಟಿ ಮಾಡುವ ಪಕ್ಷಗಳು ನಿಮಗೆ ಬೇಕಾ ಎಂದು ಎಚ್ಡಿಕೆ ಪ್ರಶ್ನೆ ಮಾಡಿದರು.
ಪ್ರಧಾನಿ ನರೇಂದ್ರ ಮೋದಿ ಅವರನ್ನು ನಂಬಬೇಡಿ. ನರೇಂದ್ರ ಮೋದಿ ಮಾತಿಗೆ ನೀವು ಮರುಳಾಗಬೇಡಿ. ಮೋದಿ ಹಾಗೂ ಬಿಜೆಪಿ ಪಕ್ಷ ಇರುವುದೇ ಶ್ರೀಮಂತರಿಗಾಗಿ, ಚುನಾವಣೆ ಸಂದರ್ಭದಲ್ಲಿ ಹಣ ಕೊಟ್ಟು ಮತ ಪಡೆಯಲು ಬರುತ್ತಾರೆ. ನಿಮ್ಮ ದುಡ್ಡನ್ನು ಲೂಟಿ ಮಾಡಿ ಮಜಾ ಮಾಡುತ್ತಿದ್ದಾರೆ. ಅವರು ಶ್ರೀಮಂತರ ಪರವಾಗಿದ್ದಾರೆ. ಬಡವರ ಪರ ಇಲ್ಲ. ಪಿಎಸ್ಐ ಹುದ್ದೆ ಪಡೆಯಲು ಲಕ್ಷಾಂತರ ರೂ. ಲಂಚ ನೀಡಬೇಕಾದ ಪರಿಸ್ಥಿತಿ ಇದೆ. ಜನರ ಹಣ ರಾಜ್ಯದಲ್ಲಿ ಲೂಟಿಯಾಗುತ್ತಿದೆ ಎಂದು ಟೀಕಿಸಿದರು.

ಬಿಜೆಪಿ ಸರ್ಕಾರವೇ ತಪ್ಪು ಮಾಡುತ್ತಿದೆ
ಅಭಿವೃದ್ಧಿ ವಿಚಾರದಲ್ಲಿ ತಾರತಮ್ಯ ಮಾಡಲಾಗುತ್ತಿದೆ. ಬಿಜೆಪಿ ಸರಕಾರವೇ ಇಂಥ ತಪ್ಪು ಮಾಡುತ್ತಿದೆ. ದಾಸರಹಳ್ಳಿ ವಿಧಾನಸಭಾ ಕ್ಷೇತ್ರಕ್ಕೆ ನೀಡಲಾಗಿದ್ದ 750 ಕೋಟಿ ಹಣವನ್ನು ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ನಿಲ್ಲಿಸಿದೆ. ನಿಮಗೆ ದ್ರೋಹ ಮಾಡುವ ಪಕ್ಷಗಳ ಮೊದಲ ಸ್ಥಾನದಲ್ಲಿ ಬಿಜೆಪಿ ಇದೆ. ವಿದ್ಯುತ್, ಅನಿಲ ಬೆಲೆ ಏರಿಕೆ ಮಾಡಲಾಗುತ್ತಿದೆ. ಇದು ಜನಸಾಮಾನ್ಯರಿಗೆ ಹೊರೆ. ಮಹಾನಗರದಲ್ಲಿ ಮಾಡಬೇಕಾದ ಕೆಲಸಗಳ ಮಾಹಿತಿ ಪಡೆಯಲು ಈ ಜನತಾಮಿತ್ರ ವಾಹನ ನಿಮ್ಮ ಮನೆ ಮುಂದೆ ಕಳಿಸುತ್ತಿದ್ದೇವೆ ಎಂದು ಅವರು ಹೇಳಿದರು.

ಆರೋಗ್ಯಮಿತ್ರ ಅಡಿಯಲ್ಲಿ ಉಚಿತ ಆರೋಗ್ಯ
ಇಂಗ್ಲಿಷ್ ಮೀಡಿಯಂ ವಿದ್ಯಾಭ್ಯಾಸಕ್ಕೆ ಹಣ ನೀಡದೆ ಮಕ್ಕಳು ಉಚಿತವಾಗಿ ಕಲಿಯುವ ವ್ಯವಸ್ಥೆ ಮಾಡುತ್ತೇವೆ. ಆರೋಗ್ಯಮಿತ್ರ ಅಡಿಯಲ್ಲಿ ಉಚಿತ ಆರೋಗ್ಯ ಒದಗಿಸುತ್ತೇವೆ. ಜೆಡಿಎಸ್ ಅಧಿಕಾರಕ್ಕೆ ಬಂದರೆ ಹೆಣ್ಣು ಮಕ್ಕಳು ಸ್ವಾಭಿಮಾನದಿಂದ ಬದುಕಲು ಬೇಕಾಗಿರುವ ಎಲ್ಲ ಅಗತ್ಯ ಸೌಲಭ್ಯಗಳನ್ನೂ ಒದಗಿಸುತ್ತೇವೆ. ಬಡ ಕುಟುಂಬಗಳಿಗೆ ಉಚಿತವಾಗಿ ವಿದ್ಯುಚ್ಛಕ್ತಿ ಕೊಡಲು ಚಿಂತನೆ ಮಾಡಲಾಗಿದೆ. ಲೂಟಿ ಆಗುತ್ತಿರುವ ನಿಮ್ಮ ಹಣ ನಿಮಗೇ ತಲುಪಬೇಕು. ನಿಮ್ಮ ಕಷ್ಟಗಳು ಏನೇ ಇದ್ದರೂ ಜನತಾ ಮಿತ್ರ ವಾಹನದ ಬಾಕ್ಸ್ನಲ್ಲಿ ಹಾಕಿ, ಯಾವ ರೀತಿಯ ಯೋಜನೆ ಬೇಕು ಅದನ್ನು ಮಾಡುತ್ತೇವೆ ಎಂದು ಅವರು ಹೇಳಿದರು.

ಹೈಕೋರ್ಟ್ನಿಂದ ಪ್ರತಿ ನಿತ್ಯ ಸರ್ಕಾರಕ್ಕೆ ಛೀಮಾರಿ
ಹೊಸಕೆರೆಹಳ್ಳಿ ಸುತ್ತಮುತ್ತ ಬಡವಾಣೆಗಳ ಸಮಸ್ಯೆ ಬಗೆಹರಿಸಲು ನನ್ನ ಅವಧಿಯಲ್ಲಿ ಸಾಕಷ್ಟು ಕೆಲಸ ಮಾಡಿದ್ದೇನೆ. ಈ ಭಾಗದಲ್ಲಿ ಕಾವೇರಿ ನೀರಿಯ ಯೋಜನೆಯನ್ನು ಕೊಟ್ಟಿದ್ದು ಹೆಚ್.ಡಿ.ದೇವೇಗೌಡರು. ಇವತ್ತು ಅಭಿವೃದ್ಧಿ ಹೆಸರಲ್ಲಿ ಬಿಜೆಪಿ ಸರ್ಕಾರ ಲೂಟಿ ಹೊಡೆಯುತ್ತಿದೆ. 40 ಪರ್ಸೆಂಟ್ ಕಮೀಷನ್ ಹೆಸರಲ್ಲಿ ಲೂಟಿ ನಡೆಯುತ್ತಿದೆ. ಬೆಂಗಳೂರು ಮೂಲಭೂತ ಸಮಸ್ಯೆಗಳ ಬಗ್ಗೆ ಹೈಕೋರ್ಟ್ ಪ್ರತಿ ನಿತ್ಯ ಸರ್ಕಾರಕ್ಕೆ ಛೀಮಾರಿ ಹಾಕುತ್ತಿದೆ ಎಂದು ಕಿಡಿಕಾರಿದರು ಹೆಚ್ ಡಿಕೆ.

ಜೆಡಿಎಸ್ ನೆಲೆ ಇಲ್ಲ ಅನ್ನುತ್ತಿದ್ದಾರೆ
ಇಟ್ಟಮಡುವಿನಲ್ಲಿ ನಡೆದ ಜನತಾ ಮಿತ್ರ ಕಾರ್ಯಕ್ರಮದಲ್ಲಿ ಮಾತನಾಡಿದ ಮಾಜಿ ಸಿಎಂ ಕುಮಾರಸ್ವಾಮಿ ಅವರು, ಬೆಂಗಳೂರು ನಗರದಲ್ಲಿ ಜೆಡಿಎಸ್ ನೆಲೆ ಇಲ್ಲ ಅನ್ನುತ್ತಿದ್ದಾರೆ. ಮುಂದಿನ ಚುನಾವಣೆಯಲ್ಲಿ ಜೆಡಿಎಸ್ಗೆ ಭವಿಷ್ಯವಿಲ್ಲ ಅಂತಾರೆ. ಇಂತಹವರಿಗೆ ಇಟ್ಟಮಡುವಿನ ಜನತೆ ಉತ್ತರ ಕೊಟ್ಟಿದ್ದಾರೆ. ನಮ್ಮ ಪಕ್ಷದ ಶಕ್ತಿ ಏನು ಎಂಬುದನ್ನು ತೋರಿಸುತ್ತೇನೆ ಎಂದರು.

ದೇವೇಗೌಡರು 9 ಟಿಎಂಸಿ ನೀರು ಕೊಟ್ಟರು
ಕೆಂಪೇಗೌಡರು ಕಟ್ಟ ಕೆರೆಗಳಿಗೆ ಕೊಳಚೆ ನೀರು ತುಂಬಿಸುತ್ತಿದ್ದಾರೆ. ಅದೇ ವಿಷಪೂರಿತ ನೀರನ್ನು ನೀವು ಈಗಲೂ ಕುಡಿಯಬೇಕಿತ್ತು. ಕೇಂದ್ರದಲ್ಲಿದ್ದ ಕಾಂಗ್ರೆಸ್ ಸರಕಾರ ಕಾವೇರಿ ನೀರು ತರಲು ಒಪ್ಪಿಗೆ ಕೊಡಲಿಲ್ಲ. ದೇವೇಗೌಡರು ಪ್ರಧಾನಿ ಆದಾಗ ನಗರಕ್ಕೆ 9 ಟಿಎಂಸಿ ನೀರು ಕೊಟ್ಟರು. ಬೆಂಗಳೂರಿನ ರಿಂಗ್ ರೋಡ್ಗೆ 95 ಎಕರೆ ಭೂಮಿ ಕೊಟ್ಟವರು ದೇವೇಗೌಡರು. ನಾನು ಬಿಬಿಎಂಪಿ ರಚನೆ ಮಾಡಿದೆ. 198 ವಾರ್ಡ್ ರಚನೆ ಮಾಡಿದೆ. ಮೆಟ್ರೋ ಯೋಜನೆಯ ಚಾಲನೆ ನೀಡಿದೆ ಎಂದು ಅವರು ಮಾಹಿತಿ ನೀಡಿದರು.
ದಾಸರಹಳ್ಳಿ ಕ್ಷೇತ್ರದ ಶಾಸಕ ಆರ್.ಮಂಜುನಾಥ್ ಮಾತನಾಡಿ, ಕ್ಷೇತ್ರದಲ್ಲಿ ಹಲವು ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಕಾವೇರಿ ನೀರನ್ನು ಈ ಭಾಗದ ಜನರಿಗೆ ಒದಗಿಸಲಾಗಿದೆ. ಅಭಿವೃದ್ಧಿ ವಿಚಾರದಲ್ಲಿ ದಾಸರಹಳ್ಳಿ ಕ್ಷೇತ್ರವನ್ನು ಮೊದಲ ಸ್ಥಾನಕ್ಕೆ ಕೊಂಡೊಯ್ಯಲು ಪ್ರಯತ್ನಿಸುತ್ತಿದ್ದೇನೆ ಎಂದು ಹೇಳಿದರು. ಬೆಂಗಳೂರು ನಗರ ಜೆಡಿಎಸ್ ಅಧ್ಯಕ್ಷ ಆರ್.ಪ್ರಕಾಶ್ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.












Click it and Unblock the Notifications