ಹುಲಿ ಉಗುರು ಧರಿಸಿದ್ದ ಆರೋಪ: ದರ್ಶನ್, ಜಗ್ಗೇಶ್ ಮನೆಗೆ ಅರಣ್ಯಾಧಿಕಾರಿಗಳ ಭೇಟಿ
ಹುಲಿ ಉಗುರು ಧರಿಸಿದ್ದ ಆರೋಪದ ಮೇಲೆ ನಟ ದರ್ಶನ್ ಅವರ ಮನೆಗೆ ಅರಣ್ಯಾಧಿಕಾರಿಗಳು ಭೇಟಿ ನೀಡಿದ್ದು ಪರಿಶೀಲನೆ ಮಾಡುತ್ತಿದ್ದಾರೆ. ಇನ್ನು ಜಗ್ಗೇಶ್ ಕೂಡ ಹುಲಿ ಉಗುರು ಧರಿಸಿದ್ದ ಆರೋಪ ಎದುರಿಸುತ್ತಿದ್ದು ಅವರ ಮನೆಗೂ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಲಿದ್ದಾರೆ.
ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿರುವ ದರ್ಶನ್ ಮನೆಗೆ ಅರಣ್ಯಾಧಿಕಾರಿಗಳು ಭೇಟಿ ನೀಡಿದ್ದು, ನೋಟಿಸ್ ನೀಡಿದ್ದಾರೆ. ಈ ಸಂದರ್ಭದಲ್ಲಿ ನಟ ದರ್ಶನ್ ಮನೆಯಲ್ಲೇ ಇದ್ದರು ಎಂದು ವರದಿಯಾಗಿದೆ.

ನಟ ದರ್ಶನ್ ಹುಲಿ ಉಗುರು ಧರಿಸಿದ್ದ ಫೋಟೊ ವೈರಲ್ ಆಗಿತ್ತು, ಈ ಫೋಟೊ ಆಧರಿಸಿ ಸರ್ವ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಶಿವಕುಮಾರ್ ಎನ್ನುವವರು ಅರಣ್ಯಾಧಿಕಾರಿಗಳಿಗೆ ದೂರು ನೀಡಿ, ಕ್ರಮ ತೆಗೆದುಕೊಳ್ಳುವಂತೆ ಒತ್ತಾಯಿಸಿದ್ದರು. ಈ ಬೆನ್ನಲ್ಲಿ ದರ್ಶನ್ ಮನೆಗೆ ಭೇಟಿ ನೀಡಿರುವ ಅಧಿಕಾರಿಗಳು ಪರಿಶೀಲನೆಗೆ ಮುಂದಾಗಿದ್ದಾರೆ.
ಬೆಂಗಳೂರಿನ ಆರ್ ಎಫ್ಒ ಸೇರಿದಂತೆ ಮೂವರು ದರ್ಶನ್ ಮನೆಗೆ ಭೇಟಿ ನೀಡಿದ್ದು ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಒಂದು ವೇಳೆ ದರ್ಶನ್ ಮನೆಯಲ್ಲಿ ಹುಲಿಯುಗುರು ಲಾಕೆಟ್ ಪತ್ತೆಯಾದರೆ ಅವರಿಗೆ ಸಂಕಷ್ಟ ಎದುರಾಗಲಿದೆ.
ನಟ ಜಗ್ಗೇಶ್ ಮನೆಗೂ ಭೇಟಿ
ನಟ ಮತ್ತು ಬಿಜೆಪಿ ರಾಜ್ಯಸಭಾ ಸದಸ್ಯ ಜಗ್ಗೇಶ್ ಮನೆಗೂ ಕೂಡ ಅರಣ್ಯಾಧಿಕಾರಿಗಳು ಭೇಟಿ ನೀಡಿದ್ದಾರೆ. ಮಲ್ಲೇಶ್ವರದಲ್ಲಿರುವ ಜಗ್ಗೇಶ್ ಮನೆಗೆ ಭೇಟಿ ನೀಡಿ ನೋಟಿಸ್ ನೀಡಿರುವ ಅರಣ್ಯಾಧಿಕಾರಿಗಳು, ಹುಲಿ ಉಗುರು ಧರಿಸಿದ್ದರ ಬಗ್ಗೆ ಮಾಹಿತಿ ಕಲೆಹಾಕುತ್ತಿದ್ದಾರೆ.
ಮಾಧ್ಯಮವೊಂದಕ್ಕೆ ಸಂದರ್ಶನ ನೀಡುವ ಸಂದರ್ಭದಲ್ಲಿ ನಟ ಜಗ್ಗೇಶ್ ತಮ್ಮ ಕೊರಳಿನಲ್ಲಿದ್ದ ಹುಲಿ ಉಗುರಿನ ಲಾಕೆಟ್ ಅನ್ನು ತೋರಿಸಿ ಇದು ನಿಜವಾದ ಹುಲಿಯುಗುರು ನನ್ನ ತಾಯಿ ನನಗೆ ನೀಡಿದ್ದು ಎಂದು ಹೇಳಿದ್ದರು, ಈ ಮಾಧ್ಯಮ ಸಂದರ್ಶನದ ತುಣುಕು ಸಾಕಷ್ಟು ವೈರಲ್ ಆಗಿದ್ದು, ಜಗ್ಗೇಶ್ ಮೇಲೆ ಕ್ರಮ ತೆಗೆದುಕೊಳ್ಳುವಂತೆ ಸಾರ್ವಜನಿಕರು ಸಾಮಾಜಿಕ ಮಾಧ್ಯಮದಲ್ಲಿ ಒತ್ತಾಯಿಸಿದ್ದರು.
ಹುಲಿ ಉಗುರು ಧರಿಸಿದ್ದ ಆರೋಪದ ಅಡಿಯಲ್ಲಿ ಬಿಗ್ ಬಾಸ್ 10ನೇ ಆವೃತ್ತಿಯ ಅಭ್ಯರ್ಥಿ ವರ್ತೂರು ಸಂತೋಷ್ ಬಂಧನದ ಬೆನ್ನಲ್ಲೇ ಈ ವಿಚಾರ ಮುನ್ನಲೆಗೆ ಬಂದಿದೆ. ಹುಲಿ ಚರ್ಮದ ಕೂತಿದ್ದ ಫೋಟೊ ವೈರಲ್ ಆದ ನಂತರ, ವಿನಯ್ ಗುರೂಜಿ ಆಶ್ರಮಕ್ಕೆ ಕೂಡ ಅರಣ್ಯಾಧಿಕಾರಿಗಳು ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದ್ದಾರೆ.
ಇನ್ನು ನಿರ್ಮಾಪಕ ರಾಕ್ಲೈನ್ ವೆಂಕಟೇಶ್ ಕೂಡ ಹುಲಿ ಉಗುರಿನ ಲಾಕೆಟ್ ಹಾಕಿದ್ದ ಫೋಟೊ ವೈರಲ್ ಆಗಿದ್ದು ಅವರನ್ನೂ ಕೂಡ ವಿಚಾರಿಸುವ ಸಾಧ್ಯತೆ ಇದೆ. ಬಿದನಗೆರೆ ಧನಂಜಯ ಗುರೂಜಿ ಅವರು ಕೂಡ ಹುಲಿ ಉಗುರಿನ ಲಾಕೆಟ್ ಧರಿಸಿದ್ದ ಫೋಟೊ ವೈರಲ್ ಆಗಿದ್ದು, ಅವರ ಆಶ್ರಮಕ್ಕೂ ಭೇಟಿ ನೀಡಿರುವ ಅರಣ್ಯಾಧಿಕಾರಿಗಳು ತಪಾಸಣೆ ನಡೆಸಿದ್ದಾರೆ.
ಇನ್ನು ತಪಾಸಣೆ ಸಂದರ್ಭದಲ್ಲಿ ಧನಂಜಯ ಗುರೂಜಿ ಅದನ್ನು ನಕಲಿ ಉಗುರು ಎಂದು ಹೇಳಿದ್ದಾರೆ ಎಂದು ಅರಣ್ಯಾಧಿಕಾರಿಗಳು ಹೇಳಿದ್ದಾರೆ. ಆದರೆ ಹುಲಿ ಉಗುರನ್ನು ಹೆಚ್ಚಿನ ತಪಾಸಣೆಗಾಗಿ ಎಫ್ಎಸ್ಎಲ್ಗೆ ಕಳುಹಿಸಲು ನಿರ್ಧರಿಸಿದ್ದು, ಅಲ್ಲಿಂದ ವರದಿ ಬಂದ ನಂತರ ಮುಂದಿನ ಕ್ರಮ ತೆಗೆದುಕೊಳ್ಳಲು ನಿರ್ಧರಿಸಲಾಗಿದೆ.












Click it and Unblock the Notifications