Bengaluru: ಹೋಟೆಲ್ ಆಹಾರ ದರದಲ್ಲಿ ಭಾರೀ ಏರಿಕೆ- ಯಾವಾಗಿಂದ? ಎಷ್ಟು ಏರಿಕೆ? ವಿವರ ತಿಳಿಯಿರಿ
ಬೆಂಗಳೂರು, ಜುಲೈ 14: ಬೆಲೆ ಏರಿಕೆಯು ಎಲ್ಲರ ಮೇಲೆ ಪರಿಣಾಮ ಬೀರುತ್ತಿದೆ. ತರಕಾರಿಗಳ ದರವು ದಿನೇದಿನೇ ಹೆಚ್ಚುತ್ತಿದೆ. ಟೊಮೆಟೊ ಬೆಲೆಯಂತೂ ಗಗನಕ್ಕೇರಿದೆ. ಬೆಂಗಳೂರಿನ ಹೋಟೆಲ್ ಮಾಲೀಕರು ಆಹಾರದ ಬೆಲೆಯನ್ನು ಹೆಚ್ಚಿಸಲು ಮುಂದಾಗಿದ್ದಾರೆ.
ಬೆಂಗಳೂರು ಹೋಟೆಲ್ ಮಾಲೀಕರ ಸಂಘವು ಈ ನಿರ್ಧಾರಕ್ಕೆ ಬರಲು ತೀರ್ಮಾನಿಸಿದೆ. ತನ್ನ ವ್ಯಾಪ್ತಿಯಲ್ಲಿರುವ ರೆಸ್ಟೊರೆಂಟ್ಗಳು ಮತ್ತು ಫಾಸ್ಟ್ ಫುಡ್ ಮಳಿಗೆಗಳಲ್ಲಿ ಆಹಾರದ ಬೆಲೆಯನ್ನು ಶೇಕಡಾ 10 ರಿಂದ 15 ರಷ್ಟು ಹೆಚ್ಚಿಸಲು ಸಿದ್ಧವಾಗಿದೆ. ಜುಲೈ 25 ರಂದು ಬೆಂಗಳೂರು ಹೋಟೆಲ್ ಮಾಲೀಕರ ಸಂಘ ಕರೆದಿರುವ ಸಭೆಯಲ್ಲಿ ಈ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ವರದಿಯಾಗಿದೆ.

ವಿದ್ಯುಚ್ಛಕ್ತಿ, ಸರಕುಗಳು ಮತ್ತು ಹಲವಾರು ಪದಾರ್ಥಗಳ ಬೆಲೆ ಹೆಚ್ಚಳದಿಂದಾಗಿ ಹೋಟೆಲ್ ಮಾಲೀಕರು ಕಂಗಾಲಾಗಿದ್ದಾರೆ. ಈ ಹಿನ್ನೆಲೆಯಲ್ಲಿ ತಮ್ಮನ್ನು ತಾವು ಉಳಿಸಿಕೊಳ್ಳಲು ಬೆಲೆಯನ್ನು ಹೆಚ್ಚಿಸುವಂತೆ ಮಾಲೀಕರು ಒತ್ತಾಯಿಸುತ್ತಿದ್ದಾರೆ ಎಂದ ಸಂಘವು ಹೇಳಿದೆ.
ಈ ವಿಚಾರವಾಗಿ ಮಾತನಾಡಿರುವ ಬೆಂಗಳೂರು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಪಿ.ಸಿ.ರಾವ್, 'ವಿದ್ಯುತ್ ಬಿಲ್ಗಳು ಹೆಚ್ಚಾಗಿದೆ. ಸರಕುಗಳ ಬೆಲೆ ಹೆಚ್ಚಾಗಿದೆ. ತರಕಾರಿಗಳು ದುಬಾರಿಯಾಗುತ್ತಿವೆ. ಮಾರುಕಟ್ಟೆಯಲ್ಲಿ ತಮ್ಮನ್ನು ತಾವು ಉಳಿಸಿಕೊಳ್ಳಲು, ಹೋಟೆಲ್ ಮಾಲೀಕರು ಯತ್ನಿಸುತ್ತಿದ್ದಾರೆ' ಎಂದು ತಿಳಿಸಿದ್ದಾರೆ.
ತಮ್ಮ ಹೋಟೆಲ್ಗಳಲ್ಲಿ ನೀಡುವ ಆಹಾರದ ಬೆಲೆಗಳ ಮೇಲೆ ಕನಿಷ್ಠ 10 ಪ್ರತಿಶತದಷ್ಟು ಹೆಚ್ಚಳ ಮಾಡಲೇಬೇಕೆಂದು ಒತ್ತಾಯಿಸುತ್ತಿದ್ದಾರೆ. ಈ ವಿಚಾರವಾಗಿ ನಾವು ಜೂಮ್ ಸಭೆಗಳಲ್ಲಿ ಚರ್ಚೆ ನಡೆಸಿದ್ದೇವೆ. ಶೀಘ್ರದಲ್ಲೇ ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳುತ್ತೇವೆ. ಈಗಾಗಲೇ ಕೆಲವು ಹೋಟೆಲ್ ಮಾಲೀಕರು ಬೆಲೆ ಏರಿಕೆ ಮಾಡಿದ್ದು, ಕೆಲವರು ಆಷಾಢ ಮುಗಿಯಲು ಕಾಯುತ್ತಿದ್ದಾರೆ ಎಂದು ಹೇಳಿದ್ದಾರೆ.

ಹಾಲಿನ ದರದಲ್ಲಿ ಏರಿಕೆಯಾಗುವ ನಿರೀಕ್ಷೆ ಇದ್ದು, ಅದರ ಆಧಾರದ ಮೇಲೆ ಜುಲೈ 25ರಂದು ಕರೆದಿರುವ ಸಭೆಯಲ್ಲಿ ನಿರ್ಧಾರ ಕೈಗೊಳ್ಳುವುದಾಗಿ ಅವರು ತಿಳಿಸಿದ್ದಾರೆ.
ಕರ್ನಾಟಕ ಹಾಲು ಮಹಾಮಂಡಳದ (ಕೆಎಂಎಫ್) ಅಧ್ಯಕ್ಷ ಭೀಮಾ ನಾಯ್ಕ್ ನೇತೃತ್ವದ ನಿಯೋಗ ಶುಕ್ರವಾರ ಸಂಜೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಲಿದೆ. ನಂದಿನಿ ಹಾಲಿನ ದರವನ್ನು ಲೀಟರ್ಗೆ 5 ರೂ. ಏರಿಸಲು ಚರ್ಚೆ ನಡೆಸಲಿದೆ.
ಬೆಲೆಗಳನ್ನು ಹೆಚ್ಚಿಸದೆ ಹೋಟೆಲ್ ಮಾಲೀಕರು ಪ್ರಸ್ತುತ ಮಾರುಕಟ್ಟೆಯಲ್ಲಿ ಉಳಿದುಕೊಳ್ಳಲು ಸಾಧ್ಯವಾಗುವುದಿಲ್ಲ ಎಂದು ರಾವ್ ಹೇಳಿದ್ದಾರೆ.

ಇತ್ತೀಚೆಗೆ, ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗವು (ಕೆಇಆರ್ಸಿ) ವಿದ್ಯುತ್ ದರವನ್ನು ಹೆಚ್ಚಿಸುವ ಆದೇಶವನ್ನು ಜಾರಿಗೆ ತರಲು ನಿರ್ಧರಿಸಿದೆ. ಇದರ ನಂತರ ನಗರದ ಕೆಲವು ಹೋಟೆಲ್ಗಳು ಮತ್ತು ದರ್ಶಿನಿಗಳು ಆಹಾರದ ಬೆಲೆಗಳನ್ನು ಹೆಚ್ಚಿಸಿವೆ ಎಂದು ತಿಳಿದುಬಂದಿದೆ.












Click it and Unblock the Notifications