ಜಯದೇವಾ ಮೇಲ್ಸೇತುವೆ ನೆಲಸಮ ಕಾರ್ಯಾರಂಭ: ವಾಹನ ಸವಾರರಿಗೆ ತೀವ್ರ ಅಡಚಣೆ
ಬೆಂಗಳೂರು, ಜನವರಿ 15: ಜಯದೇವಾ ಆಸ್ಪತ್ರೆ ಬಳಿ ಇರುವ ಮೇಲ್ಸೇತುವೆಯನ್ನು ನೆಲಸಮ ಮಾಡುವ ಕಾರ್ಯ ನಾಳೆಯಿಂದ ಪ್ರಾರಂಭವಾಗಲಿದ್ದು, ವಾಹನ ಸವಾರರಿಗೆ ಅತಿಯಾದ ಕಿರಿಕಿರಿ ಈ ಪ್ರದೇಶದಲ್ಲಿ ಉಂಟಾಗಲಿದೆ.
ಜಯದೇವ ಆಸ್ಪತ್ರೆ ಬಳಿ ಮೆಟ್ರೋ ಕಾಮಗಾರಿ ನಡೆಯುತ್ತಿದ್ದು ಈ ಕಾಮಗಾರಿಗಾಗಿ 12 ವರ್ಷ ಹಿಂದೆ ನಿರ್ಮಿಸಿದ್ದ ಮೇಲ್ಸೇತುವೆಯನ್ನು ಕೆಡವಲಾಗುತ್ತಿದೆ. ಹೀಗೆ ಮೇಲ್ಸೇತುವೆಯೊಂದನ್ನು ಕೆಡವುತ್ತಿರುವುದು ಬೆಂಗಳೂರಿನಲ್ಲಿ ಇದೇ ಮೊದಲು.
ಜಯದೇವಾ ಮುಂದಿನ ಸಿಲ್ಕ್ ಬೋರ್ಡ್ ಕಡೆಗಿನ ರಸ್ತೆ ಅತಿ ಹೆಚ್ಚು ದಟ್ಟಣೆ ಹೊಂದಿದ ರಸ್ತೆಯಾಗಿದ್ದು, ಈಗಾಗಲೇ ಅಲ್ಲಿ ವಾಹನ ಸವಾರರು ನರಕ ಅನುಭವಿಸುತ್ತಿದ್ದಾರೆ. ನಾಳೆಯಿಂದ ಮೇಲ್ಸೇತುವೆ ಸಹ ಕೆಡವಲು ಆರಂಭಿಸಿದರೆ ವಾಹನ ಸವಾರರಿಗೆ ಇನ್ನಷ್ಟು ಸಂಕಷ್ಟ ಎದುರಾಗಲಿದೆ.

ಮೇಲ್ಸೇತುವೆ ನೆಲಸಮಗೊಳಿಸುವ ಕಾರ್ಯ ದೀರ್ಘ ಸಮಯ ತೆಗೆದುಕೊಳ್ಳಲಿದೆ. ಕನಿಷ್ಟ ಮೂರು ತಿಂಗಳ ಕಾಲ ಈ ಕಾರ್ಯ ನಡೆಯಲಿದ್ದು, ವಾಹನ ಸವಾರರು ಸಂಕಷ್ಟ ಎದುರಿಸಬೇಕಿದೆ.
ಮೇಲ್ಸೇತುವೆ ನೆಲಸಮಗೊಳಿಸಿದರೆ ವಾಹನ ಸಂಚಾರ ನಿಯಂತ್ರಣ ಅಸಾಧ್ಯವಾಗುತ್ತದೆ ಎಂದು ಸಂಚಾರಿ ಪೊಲೀಸರು ಬಿಎಂಆರ್ಸಿಎಲ್ ಅಧಿಕಾರಿಗಳಿಗೆ ಹೇಳಿದ್ದರು. ಆದರೆ ಮೆಟ್ರೋ ನಿರ್ಮಾಣಕ್ಕೆ ಮೆಟ್ರೋ ನೆಲಸಮ ಅಗತ್ಯವಾಗಿರುವ ಕಾರಣ ಅನಿವಾರ್ಯವಾಗಿ ಈ ನಿರ್ಣಯ ಕೈಗೊಳ್ಳಲಾಗಿದೆ.
ಕಾಮಗಾರಿ ನಡೆಸುವ ಸಂದರ್ಭದಲ್ಲಿ ವಾಹನ ದಟ್ಟಣೆ ಹೆಚ್ಚಾಗಬಾರದು ಎಂಬ ಉದ್ದೇಶದಿಂದ ನೆಲಸಮ ಕಾರ್ಯಾಚರಣೆಯನ್ನು ರಾತ್ರಿ ವೇಳೆ ನಡೆಸಲು ತೀರ್ಮಾನಿಸಲಾಗಿದೆ. ಆದರೂ ಸಹ ವಾಹನ ದಟ್ಟಣೆ ಸಾಮಾನ್ಯಕ್ಕಿಂತಲೂ ಹೆಚ್ಚೇ ಆಗಲಿದೆ.
ವಾಹನದಟ್ಟಣೆ ತಪ್ಪಿಸಲು ನಾಳೆಯಿಂದ ಪರ್ಯಾಯ ರಸ್ತೆ ವ್ಯವಸ್ಥೆ ಮಾಡಲಾಗಿದ್ದು, ಕಾಮಗಾರಿ ನಡೆಯುವ ಪ್ರದೇಶದಲ್ಲಿ ಕೇವಲ ಬಿಎಂಟಿಸಿ ಬಸ್, ಆಂಬುಲೆನ್ಸ್ ಹಾಗೂ ದ್ವಿಚಕ್ರ ವಾಹನಗಳ ಸಂಚಾರಕ್ಕೆ ಮಾತ್ರ ಅನುವು ಮಾಡಿಕೊಡುತ್ತಿದೆ. ಇತರ ವಾಹನಗಳು ಪರ್ಯಾಯ ರಸ್ತೆಗಳಲ್ಲಿ ಸಂಚರಿಸುವಂತೆ ರಸ್ತೆ ನಕ್ಷೆ ಸಿದ್ಧಪಡಿಸಲಾಗಿದೆ. ಜಯದೇವ ವೃತ್ತದಿಂದ ಬನ್ನೇರುಘಟ್ಟ ರಸ್ತೆಯ ಸಂಚಾರಕ್ಕೆ ಅಷ್ಟು ಅಡಚಣೆಯಾಗದಿದ್ದರೂ ರಾತ್ರಿ 10 ಗಂಟೆಯಿಂದ ಬೆಳಗ್ಗೆ 6 ಗಂಟೆವರೆಗೂ ಮಾರೇನಹಳ್ಳಿ ಮುಖ್ಯರಸ್ತೆಯ ಸಂಚಾರವನ್ನು ಸಂಪೂರ್ಣ ಸ್ಥಗಿತಗೊಳಿಸಲಾಗುತ್ತಿದೆ.
ಕಳೆದ 2017ರಲ್ಲೇ ಜಯದೇವ ಮೇಲ್ಸೇತುವೆ ನೆಲಸಮ ಗೊಳಿಸುವಂತೆ ಬಿಎಂಆರ್ಸಿಎಲ್ ಮನವಿ ಸಲ್ಲಿಸು ತ್ತಲೇ ಬಂದಿತ್ತು. ಆದರೆ, ಇದಕ್ಕೆ ವ್ಯಾಪಕ ಪ್ರತಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಕಾಮಗಾರಿಯನ್ನು ಮುಂದೂಡುತ್ತಲೇ ಬರಲಾಗಿತ್ತು.
ಕಳೆದ 2017ರಲ್ಲೇ ಜಯದೇವ ಮೇಲ್ಸೇತುವೆ ನೆಲಸಮ ಗೊಳಿಸುವಂತೆ ಬಿಎಂಆರ್ಸಿಎಲ್ ಮನವಿ ಸಲ್ಲಿಸುತ್ತಲೇ ಬಂದಿತ್ತು. ಆದರೆ, ಇದಕ್ಕೆ ವ್ಯಾಪಕ ಪ್ರತಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಕಾಮಗಾರಿಯನ್ನು ಮುಂದೂಡುತ್ತಲೇ ಬರಲಾಗಿತ್ತು.












Click it and Unblock the Notifications