ಮೊದಲು ಸಿದ್ದಗಂಗಾ ಶ್ರೀಗಳಿಗೆ ಭಾರತರತ್ನ ನೀಡಿ: ಸಿದ್ದರಾಮಯ್ಯ
ಬೆಂಗಳೂರು, ಅಕ್ಟೋಬರ್ 18: ಮಹಾತ್ಮ ಗಾಂಧಿ ಹತ್ಯೆಗೆ ಸಂಚು ರೂಪಿಸಿದ್ದವರಲ್ಲಿ ಸಾವರ್ಕರ್ ಕೂಡ ಒಬ್ಬರು. ಆದರೆ ಸೂಕ್ತ ಸಾಕ್ಷ್ಯ ಇಲ್ಲದ ಕಾರಣ ಅವರನ್ನು ಆರೋಪಿಯಾಗಿ ಗುರಿತಿಸಿರಲಿಲ್ಲ ಎಂಬ ವಿವಾದಾತ್ಮಕ ಹೇಳಿಕೆ ನೀಡಿದ್ದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಮೊದಲು ಸಿದ್ದಗಂಗಾ ಸ್ವಾಮೀಜಿಗಳಿಗೆ ಭಾರತ ರತ್ನ ನೀಡಿ ಎಂದು ಬಿಜೆಪಿ ಸರ್ಕಾರವನ್ನು ಆಗ್ರಹಿಸಿದ್ದಾರೆ.
'ಸಾವರ್ಕರ್ ಅವರಿಗೆ 'ಭಾರತ ರತ್ನ' ಆ ಮೇಲೆ ಕೊಡುವಿರಂತೆ, ಮೊದಲು ಸಾಮಾಜಿಕ ಸೇವೆಗಾಗಿ ತನ್ನ ಬದುಕನ್ನು ತೇದು ಲಿಂಗೈಕ್ಯವಾಗಿರುವ ಸಿದ್ದಗಂಗಾ ಮಠದ ಡಾ.ಶಿವಕುಮಾರ ಸ್ವಾಮೀಜಿಗಳಿಗೆ ಮೊದಲು ಭಾರತರತ್ನ ನೀಡಿ. ಕನಿಷ್ಠ ಈ ಒಂದು ಭರವಸೆಯನ್ನಾದರೂ ಈಡೇರಿಸಿ' ಎಂದು ಸಿದ್ದರಾಮಯ್ಯ ಶುಕ್ರವಾರ ಟ್ವೀಟ್ ಮಾಡಿದ್ದಾರೆ.
ಗಾಂಧಿ ಹತ್ಯೆಗೆ ಸ್ಕೆಚ್ ಹಾಕಿದ್ದು ಸಾವರ್ಕರ್; ವಿವಾದದ ಕಿಡಿ ಎಬ್ಬಿಸಿದ ಸಿದ್ದರಾಮಯ್ಯ
ಇದಕ್ಕೂ ಮೊದಲು ಮಂಗಳೂರಿನಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ್ದ ಸಿದ್ದರಾಮಯ್ಯ, 'ಸಾವರ್ಕರ್ನಂಥ ವ್ಯಕ್ತಿಗೆ ಭಾರತರತ್ನ ಕೊಡಲು ಬಿಜೆಪಿ ಮುಂದಾಗಿದೆ. ಗೋಡ್ಸೆಗೂ ಭಾರತ ರತ್ನ ಕೊಟ್ಟುಬಿಡಲಿ' ಎಂದು ವ್ಯಂಗ್ಯವಾಡಿದ್ದರು.
ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಸಿದ್ದರಾಮಯ್ಯ ಅವರು ಸಾವರ್ಕರ್ ಬಗ್ಗೆ ಅಗೌರವದ ಮಾತನಾಡಿದ್ದಾರೆ. ಅವರು ಸಾವರ್ಕರ್ ಪಾದದ ದೂಳಿಗೂ ಸಮರಲ್ಲ' ಎಂದು ಟೀಕಿಸಿದ್ದರು.
ಸಿದ್ದರಾಮಯ್ಯ ಅವರ ಹೊಗಳಿ, ತೆಗಳಿದ ನಳಿನ್ ಕಟೀಲ್
ದೇಶಾಭಿಮಾನಿಗಳಿಗೆ ಗೌರವ ಕೊಡುವ ಗುಣ ಕಾಂಗ್ರೆಸ್ ರಕ್ತದಲ್ಲಿಯೇ ಇಲ್ಲ. ಹೋರಾಟಗಾರರಿಗೆ ಕಾಂಗ್ರೆಸ್ ಅವಮಾನ ಮಾಡುತ್ತಲೇ ಬಂದಿದೆ. ಇತಿಹಾಸ ತಿಳಿಯದೆ ಉಡಾಫೆಯಿಂದ ಮಾತನಾಡುವ ವ್ಯಕ್ತಿ ಸಿದ್ದರಾಮಯ್ಯ. ಅವರು ಹೇಳಿಕೆ ಹಿಂಪಡೆದು ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದ್ದರು.
ಇದಕ್ಕೆ ಪ್ರತಿಯಾಗಿ ಸಿದ್ದರಾಮಯ್ಯ, ಸಾವರ್ಕರ್ಗೆ ಬಳಿಕ ಭಾರತ ರತ್ನ ನೀಡಿ, ಮೊದಲು ಸಿದ್ದಗಂಗಾ ಶ್ರೀಗಳಿಗೆ ಭಾರತ ರತ್ನ ನೀಡಲು ಗಮನಹರಿಸಿ ಎಂದು ತಿರುಗೇಟು ನೀಡಿದ್ದಾರೆ.