ಕುಡುಕ ತಂದೆಯನ್ನೇ ಕೊಲೆಗೈದ ಮಗ ಈಗ ಪೊಲೀಸರ ಅತಿಥಿ
Recommended Video

ಬೆಂಗಳೂರು, ಜೂನ್. 20: ಮದ್ಯವ್ಯಸನಿಯಾಗಿದ್ದ ತಂದೆಯನ್ನು ಮಗನೇ ಕೊಂದಿದ್ದು, ಕಗ್ಗಲೀಪುರ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬೆಂಗಳೂರಿನ ಕೆ.ಜಿ. ನಗರದ ನಿವಾಸಿ ಸತೀಶ್ ಬಂಧಿತ ಕೊಲೆ ಆರೋಪಿ.
ಇದೇ ತಿಂಗಳು 7ರಂದು ತನ್ನ ತಂದೆ ಚೆಲುವ ಅಲಿಯಾಸ್ ಸೆಲ್ವಂನನ್ನು ಕೊಲೆ ಮಾಡಿದ್ದ. ಸೆಲ್ವಂ ವಿಪರೀತವಾಗಿ ಕುಡಿದು ಬಂದು ಆಗಾಗ ಮನೆಯಲ್ಲಿ ಗಲಾಟೆ ಮಾಡುತ್ತಿದ್ದ. ಇದರಿಂದ ರೋಸಿಹೋಗಿದ್ದ ಮಗ ಸತೀಶ್ ತನ್ನ ತಂದೆಯನ್ನು ಬೆಂಗಳೂರು ಹೊರವಲಯದ ಆನೇಕಲ್ ಅರಣ್ಯ ಪ್ರದೇಶದ ಭೂತಾನಹಳ್ಳಿ ಬಳಿ ಕರೆತಂದು ಕೊಲೆಗೈದಿದ್ದ.
ಮೊದಲಿಗೆ ಮದ್ಯ ಖರೀದಿಸಿ ಬಳಿಕ ನಿರ್ಜನ ಅರಣ್ಯ ಪ್ರದೇಶದಲ್ಲಿ ಸೆಲ್ವಂಗೆ ಮದ್ಯ ಕುಡಿಸಿದ ಸತೀಶ್ ದೊಣ್ಣೆಯಿಂದ ಹೊಡೆದು ನಂತರ ತಲೆ ಮೇಲೆ ಕಲ್ಲು ಎತ್ತಾಕಿ ಕೊಂದಿದ್ದ. ನಂತರ ಶವದ ಗುರುತು ಪತ್ತೆಯಾಗದಂತೆ ಪೆಟ್ರೋಲ್ ಸುರಿದು ಬೆಂಕಿ ಹಾಕಿ ಪರಾರಿಯಾಗಿದ್ದ.

ಇನ್ನು ಅರ್ಧಂಬರ್ಧ ಸುಟ್ಟು ಹೋಗಿದ್ದ ಮೃತ ದೇಹದ ಗುರುತು ಪತ್ತೆ ಮಾಡಿದ ಕಗ್ಗಲೀಪುರ ಪೊಲೀಸರು ಕೃತ್ಯ ನಡೆದ ಸ್ಥಳದಲ್ಲಿ ಮದ್ಯಸೇವನೆ ಮಾಡಿರುವ ಅಂಶಗಳನ್ನು ಆಧರಿಸಿ ಪರಿಶೀಲನೆ ನಡೆಸಿದಾಗ ಈ ಕೃತ್ಯ ಬೆಳಕಿಗೆ ಬಂದಿದೆ.
ಮದ್ಯದಂಗಡಿಯೊಂದರ ಸಿಸಿಟಿವಿ ದೃಶ್ಯಾವಳಿ ಹಾಗೂ ಇನ್ನಿತರ ಸಾಕ್ಷಾಧಾರಗಳ ಆಧಾರದ ಮೇಲೆ ಸತೀಶ್ ಈ ಕೃತ್ಯ ಎಸಗಿರುವ ಬಗ್ಗೆ ದೃಢಪಟ್ಟಿತ್ತು. ಇದೀಗ ಕೊಲೆ ಆರೋಪಿಯಾದ ಸತೀಶ್ ನನ್ನು ಬಂಧಿಸಲಾಗಿದೆ.

ಮದ್ಯವ್ಯಸನಿಯಾಗಿದ್ದ ತಂದೆ ವಿಪರೀತವಾಗಿ ಕುಡಿದು ಕುಟುಂಬದವರಿಗೆ ಹಾಗೂ ತನಗೆ ಹಿಂಸೆ ನೀಡುತ್ತಿದ್ದ. ಹಾಗಾಗಿ ತಂದೆಯನ್ನು ಕೊಲೆ ಮಾಡಿದ್ದಾಗಿ ಆರೋಪಿ ಸತೀಶ್ ವಿಚಾರಣೆ ವೇಳೆ ತಪ್ಪೊಪ್ಪಿಕೊಂಡಿದ್ದಾನೆ ಎಂದು ರಾಮನಗರ ಎಸ್ಪಿ ರಮೇಶ್ ಬಾನೋತ್ ಮಾಹಿತಿ ನೀಡಿದರು.












Click it and Unblock the Notifications