ಚುನಾವಣೆ ಮೂಲಕ ರೈತರೇ ವಿಧಾನಸೌಧಕ್ಕೆ ಎಂಟ್ರಿ; ಭಾಸ್ಕರ್ ರಾವ್
ಬೆಂಗಳೂರು, ಏಪ್ರಿಲ್ 21: ಬೆಂಗಳೂರಿನ ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನದಲ್ಲಿ ನಡೆಯುತ್ತಿರುವ ಆಮ್ ಆದ್ಮಿ ಪಕ್ಷ ಮತ್ತು ರೈತ ಒಕ್ಕೂಟದ ನೇತೃತ್ವದಲ್ಲಿ ರೈತ ಸಮಾವೇಶ ನಡೆಯುತ್ತಿದೆ.
ಬೆಂಗಳೂರಿನಲ್ಲಿ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಮತ್ತು ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದಲ್ಲಿ ಸಮಾವೇಶ ನಡೆಯುತ್ತಿದ್ದು, ಕಾರ್ಯಕ್ರಮದಲ್ಲಿ ಆಪ್ ಮುಖಂಡ, ಮಾಜಿ ಐಪಿಎಸ್ ಅಧಿಕಾರಿ ಭಾಸ್ಕರ ರಾವ್ ಮಾತನಾಡಿದರು.
ಇವತ್ತು ಐತಿಹಾಸಿಕ ಮೈತ್ರಿ ದಿನಾಚರಣೆ, ಇಷ್ಟು ದಿನ ರೈತರು ಚಳುವಳಿ ಮೂಲಕ ಸರ್ಕಾರಕ್ಕೆ ತಮ್ಮ ಕೂಗು ತಲುಪಿಸುತ್ತಿದ್ದರು. ಇನ್ಮೇಲೆ ರೈತರೇ ವಿಧಾನಸೌಧಕ್ಕೆ ಚುನಾವಣೆ ಮೂಲಕ ಹೋಗಲು ಮುಂದಾಗಿದ್ದಾರೆ ಎಂದರು.

ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದಲ್ಲಿ ಆಪ್ ಮೂಲಕ ಕರ್ನಾಟಕ ವಿಧಾನಸೌಧಕ್ಕೆ ನೇರವಾಗಿ ಹೋಗಲು ರೈತರು ನಿರ್ಧರಿಸಿದ್ದಾರೆ ಎಂದು ಹೇಳಿದರು.
ರೈತ ಹೋರಾಟದಿಂದ ಪ್ರಯೋಜನ ಬಹಳ ಕಡಿಮೆ, ಹೋರಾಟದಿಂದ ಆಶ್ವಾಸನೆ ಮಾತ್ರ ಸಿಗುತ್ತದೆ, ಪರಿಹಾರ ಸಿಗಲ್ಲ. 2497 ರೈತರು ಕಳೆದೆರಡು ವರ್ಷದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರೈತರು ಸ್ವಾಭಿಮಾನಿಗಳು, ಪಡೆದ ಸಾಲ ತೀರಿಸಿದರೆ ಮರ್ಯಾದೆ ಹೋಗುತ್ತೆ ಅಂತ ಅಂಜುವವರು ಎಂದು ಭಾಸ್ಕರ್ ರಾವ್ ಹೇಳಿದರು.
ಆಪ್ ಪಕ್ಷದಲ್ಲಿ ಹಣ ಬಲ, ತೋಳ್ಬಲ, ಜಾತಿ ಬಲ ಇಲ್ಲ. ಪಂಜಾಬ್ನಲ್ಲಿ ಒಟ್ಟು ಆಯ್ಕೆಯಾದವರಲ್ಲಿ 82 ಜನ ಹೊಸಬರು ಇದ್ದಾರೆ. ಅವರು ಬಿರಿಯಾನಿ ಸರಬರಾಜು ಮಾಡಿಲ್ಲ, ನೋಟು ಸರಬರಾಜು ಮಾಡಿಲ್ಲ ಎಂದು ತಿಳಿಸಿದರು.
ನಮ್ಮ ರಾಜ್ಯದಲ್ಲಿ ಯಾವುದೇ ಸೇವೆ ಉಚಿತ ಇಲ್ಲ ಆದರೂ, ಆರ್ಥಿಕ ಸ್ಥಿತಿ ಹದಗೆಟ್ಟಿದೆ. ದೆಹಲಿಯಲ್ಲಿ ಹಲವು ಸೇವೆಗಳು ಸರ್ಕಾರದಿಂದ ಉಚಿತ ನೀಡಲಾಗುತ್ತಿದೆ. ಆದರೂ ದೆಹಲಿ ಆರ್ಥಿಕ ಸ್ಥಿತಿ ಚೆನ್ನಾಗಿದೆ ಭಾಸ್ಕರ ರಾವ್ ಹೇಳಿದರು.
ಬಡವರೂ ತೆರಿಗೆ ಕಟ್ಟುತ್ತಾರೆ, ಶ್ರೀಮಂತರು ಮಾತ್ರ ತೆರಿಗೆದಾರರಲ್ಲ. ಬಡವರಾಗಿ ಹುಟ್ಟಿದೀವಿ, ಬಡವರಾಗಿ ಸಾಯುವುದು ಬೇಡ. ನಮ್ಮ ಪಕ್ಷ ನೂತನ ಪಕ್ಷ. ಮುಂದಿನ ಚುನಾವಣೆಯಲ್ಲಿ ರೈತರು, ಬಡವರು, ಹಿಂದುಳಿದವರು, ಯುವಕರು, ವಿದ್ಯಾರ್ಥಿಗಳು, ಅಲ್ಪಸಂಖ್ಯಾತರು ಚುನಾವಣೆಯಲ್ಲಿ ಭಾಗವಹಿಸಬಹುದೆಂದರು.
ಉತ್ತರ ಕರ್ನಾಟಕದಲ್ಲಿ ನಾಲ್ಕೈದು ಸಲ ಗೆದ್ದಿರುವವರ ಕ್ಷೇತ್ರದಲ್ಲಿ ಹೋಗಿ ನೋಡಿ. ಜನ ಇನ್ನೂ ಸಮಸ್ಯೆಗಳಲ್ಲೇ ಬದುಕುತ್ತಿದ್ದಾರೆ. ಯಾವುದೇ ಸರ್ಕಾರಗಳಿಗೂ ದುಡ್ಡಿನ ಕೊರತೆ ಇಲ್ಲ. ದುಡ್ಡಿನ ಕೊರತೆ ಆಗುವುದು ಭ್ರಷ್ಟಾಚಾರದಿಂದ. ನಮ್ಮಲ್ಲಿ ಲೋಕಾಯುಕ್ತ, ಎಸಿಬಿ ಇದೆ. ಆದರೂ ಭ್ರಷ್ಟಾಚಾರ ಜಾಸ್ತಿ ಇದೆ ಎಂದು ವಾಗ್ದಾಳಿ ನಡೆಸಿದರು.












Click it and Unblock the Notifications