ನಕಲಿ ನೋಟಿನ ಆಸೆ ತೋರಿಸಿ ವಂಚಿಸುತ್ತಿದ್ದವರ ಬಂಧನ
ಬೆಂಗಳೂರು, ಜೂ. 04 : ಹಣ ಅಂದ್ರೆ ಹೆಣ ಕೂಡ ಬಾಯಿ ಬಿಡುತ್ತಂತೆ. ಇನ್ನು ತ್ವರಿತವಾಗಿ ಹಣ ಮಾಡಿಕೊಳ್ಳಬೇಕೆಂಬ ದುರಾಸೆಯಿಂದ ಅಡ್ಡದಾರಿ ಹಿಡಿಯಲೂ ಹೇಸದವರು ಬಾಯಿ ಬಿಡದೆ ಇರುತ್ತಾರೆಯೆ? ಇಂಥ ದುರಾಸೆ ಇರುವವರೆಗೂ ಪಂಗನಾಮ ಹಾಕುವವರೂ ಇದ್ದೇ ಇರುತ್ತಾರೆ ಎಂಬುದಕ್ಕೆ ಈ ಪ್ರಕರಣವೇ ಸಾಕ್ಷಿ.
ಹೀಗೆ ನಕಲಿ ನೋಟುಗಳನ್ನು ಮುದ್ರಿಸಿ ಕೊಡುತ್ತೇವೆಂದು ಆಸೆ ತೋರಿಸಿ ಸಾರ್ವಜನಿಕರಿಂದ ಹಣ ಕೀಳುವ ಸಂಚು ಹೂಡಿದ್ದ ಮೂವರು ಖದೀಮರನ್ನು ಕಾಡುಗೋಡಿ ಪೊಲೀಸರು ಬೆಳತೂರು ಬಸ್ ನಿಲ್ದಾಣದ ಬಳಿ ಹಿಡಿಯಲು ಯಶಸ್ವಿಯಾಗಿದ್ದು, ಅವರಿಂದ ನಕಲಿ ನೋಟು ತಯಾರಿಸುವ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಅವರಿಂದ ವಶಪಡಿಸಿಕೊಂಡ ವಸ್ತುಗಳು ಇಂತಿವೆ : 1) 1,000 ರು. ಮುಖ ಬೆಲೆಯ 4 ನೋಟು, 2) ಎರಡು ಟಿಂಚರ್ ಬಾಟಲಿ, 3) ಒಂದು ನೀರಿನ ಬಾಟಲಿ, 4) ಒಂದು ಬಣ್ಣ ಬೆರೆಸಿರುವ ಬಾಟಲಿ, 5) ಪ್ಲಾಸ್ಟಿಕ್ ಪೇಪರ್ ನಲ್ಲಿ ಗಂಟು ಹಾಕಿರುವ ಬಿಳಿ ಹರಳುಗಳು, 6) ಹರಳು ಮಿಶ್ರಿತ ನೀರಿನ ಬಾಟಲಿ, 7) 1,000 ರು ಅಳತೆಯ ಪೇಪರ್ 12 ಬಂಡಲ್ ಪೇಪರ್.
ಮುಂಗಡ ಹಣ ಕೊಟ್ಟರೆ ಹೊರದೇಶದಿಂದ ರಾಸಾಯನಿಕ ವಸ್ತು ತಂದು ನಿಮಗೆ ನಕಲಿ ನೋಟುಗಳನ್ನು ತಯಾರು ಮಾಡಿಕೊಡುತ್ತೇವೆಂದು ನಂಬಿಸಿ ಜನರನ್ನು ವಂಚಿಸುತ್ತಿದ್ದಾರೆಂಬ ಮಾಹಿತಿ ಮೇರೆಗೆ ಆಗ್ನೇಯ ವಿಭಾಗದ ಡಿ.ಸಿ.ಪಿ ಡಾ. ರೋಹಿಣಿ ಕಟೋಚ್ ಸೆಫಟ್ ನೇತೃತ್ವದಲ್ಲಿ ದಾಳಿ ನಡೆಸಿರುವ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.
ಮೋಸಗಾರರ ವಿವರ : ರಾಜೇಶ್ ರ್ಬಿ ಲೇ. ಹನಮಂತು (27) ರಾಜೀವಗಾಂಧಿನಗರ, ಕಡಪ ಟೌನ್, ಆಂಧ್ರಪ್ರದೇಶ, ಪ್ರಸಾದ್ ಪೆದ್ದಗುರುವಯ್ಯ (37) ಜೆ.ವಿ.ಕೃಷ್ಣಪುರಂ, ಪ್ರಕಾಶಂ ಜಿಲ್ಲೆ, ಆಂಧ್ರ ಪ್ರದೇಶ, ದಾಮೋದರಂ ಮುನಿರತ್ನಂ (42) ಅರವಚೇನುಪಿಲ್ಲ ಗ್ರಾಮ, ಚಿತ್ತೂರು ಜಿಲ್ಲೆ, ಆಂಧ್ರಪ್ರದೇಶ.