ಬೆಳಕಿನ ಹಬ್ಬದಿಂದ ಇಬ್ಬರ ಬಾಳಲ್ಲಿ ಕತ್ತಲು
ಬೆಂಗಳೂರು, ನ.4 : ಈ ಬಾರಿಯ ಬೆಳಕಿನ ಹಬ್ಬ ದೀಪಾವಳಿ ಕೆಲವರ ಬಾಳಿನಲ್ಲಿ ಕತ್ತಲು ತಂದಿದೆ. ಪಟಾಕಿ ಹೊಡೆಯುವ ವೇಳೆ ಬೆಂಗಳೂರಿನಲ್ಲಿ 82 ಮಂದಿ ಗಾಯಗೊಂಡಿದ್ದು, ಇವರಲ್ಲಿ ಇಬ್ಬರು ತಮ್ಮ ದೃಷ್ಟಿಯನ್ನು ಸಂಪೂರ್ಣವಾಗಿ ಕಳೆದುಕೊಂಡಿದ್ದಾರೆ. ಚಿಕ್ಕಪುಟ್ಟ ಗಾಯಗಳಾದವರು ವಿವಿಧ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮಾಗಡಿ ಅಗ್ರಹಾರದ ನಿವಾಸಿ ಸತೀಶ್ (30) ಎಂಬುವರು ಭಾನುವಾರ ಬೆಳಗ್ಗೆ ಉತ್ತರಹಳ್ಳಿ ರಸ್ತೆಯಲ್ಲಿ ಬೈಕ್ನಿಂದ ಇಳಿದು, ಹೆಲ್ಮೆಟ್ ತೆಗೆಯುತ್ತಿದ್ದಂತೆ ರಾಕೆಟ್ ವೊಂದು ಬಂದು ಅವರ ಬಲ ಕಣ್ಣಿಗೆ ತಾಗಿದೆ. ಇದರಿಂದ ಕಣ್ಣಿನ ಗುಡ್ಡೆ ಒಡೆದು ಹೋಗಿದೆ. ತಕ್ಷಣ ಅವರನ್ನು ಮಿಂಟೋ ಕಣ್ಣಿನ ಆಸ್ಪತ್ರೆಗೆ ದಾಖಲಿಸಲಾಗಿದೆ.

ಸತೀಸ್ ಅವರಿಗೆ ಶಸ್ತ್ರಚಿಕಿತ್ಸೆ ನಡೆಸಲಾಗಿದ್ದು, ದೃಷ್ಟಿ ಬರುವ ಸಾಧ್ಯತೆ ತೀರಾ ಕಡಿಮೆಯೆಂದು ಆಸ್ಪತ್ರೆಯ ವೈದ್ಯರು ಹೇಳಿದ್ದಾರೆ. ಕುಶಾಲ್ ಕುಮಾರ್ (13) ಎಂಬುವವರ ಎರಡು ಕಣ್ಣಿಗೂ ಹಾನಿ ಉಂಟಾಗಿದ್ದು, ಮಿಂಟೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ನಗರದ ನಾರಾಯಣ ನೇತ್ರಾಲಯದಲ್ಲಿ (25), ಶೇಖರ್ ಆಸ್ಪತ್ರೆಯಲ್ಲಿ (20), ಮೋದಿ ಆಸ್ಪತ್ರೆಯಲ್ಲಿ (21), ಮಿಂಟೋ ಆಸ್ಪತ್ರೆಯಲ್ಲಿ (16) ಜನರು ಸೇರಿದಂತೆ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪಟಾಕಿ ಸಿಡಿಸುವಾಗ ಸುರಕ್ಷಿತ ಕ್ರಮಗಳನ್ನು ಅನುಸರಿಸದ ಕಾರಣ ಅನೇಕರು ಗಾಯಗೊಂಡಿದ್ದಾರೆ ಎಂದು ವೈದ್ಯರು ಹೇಳಿದ್ದಾರೆ.
ನಾರಾಯಣ ನೇತ್ರಾಲಯದಲ್ಲಿ ದಾಖಲಾಗಿರುವ ಏಳು ವರ್ಷದ ಬಾಲಕ ಶಶಿ ಎಂ. ಶರ್ಮಾ ಎಡಗಣ್ಣಿಗೆ ಪಟಾಕಿ ಸಿಡಿದು ತೀವ್ರ ರಕ್ತಸ್ರಾವವಾಗಿದೆ. ಸೋಮವಾರ ಶಸ್ತ್ರಚಿಕಿತ್ಸೆ ನಡೆಯಲಿದೆ ಎಂದು ಆಸ್ಪತ್ರೆಯ ವೈದ್ಯರು ಹೇಳಿದ್ದಾರೆ. ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮೈ, ಕೈ ಚರ್ಮ ಸುಟ್ಟ ಮೂವರು ಚಿಕಿತ್ಸೆ ಪಡೆಯುತ್ತಿದ್ದಾರೆ.












Click it and Unblock the Notifications