ವರ್ತೂರು ಪ್ರಕಾಶ್ ಕಿಡ್ನಾಪ್ ಕೇಸಿನ ಗ್ಯಾಂಗ್ನಿಂದ ಮತ್ತೆರಡು ಕೊಲೆ ಬಯಲಿಗೆ
ಬೆಂಗಳೂರು, ಜು.28: ಮಾಜಿ ಶಾಸಕ ವರ್ತೂರು ಪ್ರಕಾಶ್ರನ್ನು ಅಪಹರಿಸಿ ಕೋಟ್ಯಂತರ ರೂಪಾಯಿ ಹಣಕ್ಕೆ ಬೇಡಿಕೆ ಇಟ್ಟಿದ್ದ ಅಪಹರಣಕಾರರು ಜೈಲಿಗೆ ಹೋಗಿ ಬಂದ ಬಳಿಕ ಇಬ್ಬರನ್ನು ಅಪಹರಿಸಿ ಕೊಲೆ ಮಾಡಿರುವ ಸಂಗತಿ ಬಯಲಿಗೆ ಬಂದಿದೆ.
ಫೈನಾನ್ಷಿಯರ್ ಎಂದು ಭಾವಿಸಿ ಆಟೋ ಚಾಲಕನನ್ನು ಕೊಲೆ ಮಾಡಿದ ಆರೋಪದಡಿ ರವಿ ಪೂಜಾರಿ ಸಹಚರ ಕವಿರಾಜ್ ಹಾಗೂ ಅಂಬರೀಶ್ ಎಂಬುವರನ್ನು ಇಂದಿರಾನಗರ ಪೊಲೀಸರು ಬಂಧಿಸಿದ್ದಾರೆ. ಬಂಧಿತರ ವಿಚಾರಣೆ ವೇಳೆ ಎರಡನೇ ಆರೋಪಿ ಅಂಬರೀಶ್ ಎಂಬಾತ ಸರ್ಜಾಪುರದ ಬಳಿ ವ್ಯಕ್ತಿಯೊಬ್ಬನನ್ನು ಕೊಲೆ ಮಾಡಿರುವ ಸಂಗತಿ ಬೆಳಕಿಗೆ ಬಂದಿದೆ.
ವರ್ತೂರು ಕಿಡ್ನಾಪ್ ಪ್ರಕರಣ: ಕೋಲಾರದ ಮಾಜಿ ಶಾಸಕ ವರ್ತೂರು ಆರ್. ಪ್ರಕಾಶ್ ನನ್ನು ಬೆಗ್ಲಿ ಸಮೀಪದ ತೋಟದ ಮನೆಯಲ್ಲಿ ಅಪಹರಿಸಿದ್ದರು. 30 ಕೋಟಿ ರೂ. ಹಣಕ್ಕೆ ಬೇಡಿಕೆ ಇಟ್ಟಿದ್ದ ಗ್ಯಾಂಗ್ ಗೆ ಅಲ್ಪ ಹಣ ಕೊಟ್ಟರೂ ಬಿಟ್ಟಿರಲಿಲ್ಲ. ವರ್ತೂರು ಪ್ರಕಾಶ್ ಕಾರು ಚಾಲಕ ತಪ್ಪಿಸಿಕೊಂಡು ಬಂದಿದ್ದ. ಬಳಿಕ ಮಾರಣಾಂತಿಕವಾಗಿ ಹಲ್ಲೆ ಮಾಡಿ ವರ್ತೂರು ಪ್ರಕಾಶ್ ಬಿಟ್ಟು ಕಳುಹಿಸಿದ್ದರು. ಪ್ರಕಾಶ್ ಅವರ ಕಾರು ಪತ್ತೆ ಹಿನ್ನೆಲೆಯಲ್ಲಿ ಬೆಳ್ಳಂದೂರು ಪೊಲೀಸರು ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದರು. ಆ ಬಳಿಕ ಪ್ರಕರಣವನ್ನು ಕೋಲಾರ ಪೊಲೀಸರಿಗೆ ವರ್ಗಾವಣೆ ಮಾಡಿದ್ದರು.
ವರ್ತೂರು ಪ್ರಕಾಶ್ ಬಳಿ ಹಣ ಇರುವ ಬಗ್ಗೆ ಮಾಹಿತಿ ಕಲೆ ಹಾಕಿದ್ದ ರವಿ ಪೂಜಾರಿ ಸಹಚರ ಕವಿರಾಜ್ ಮತ್ತು ಗ್ಯಾಂಗ್ ವರ್ತೂರು ಪ್ರಕಾಶ್ ನನ್ನು ಅಪಹರಿಸಿತ್ತು. ಪ್ರಕರಣದ ಜಾಡು ಹಿಡಿದ ಕೋಲಾರ ಪೊಲೀಸರು ಆರೋಪಿ ಕವಿರಾಜ್ ಮತ್ತು ಗ್ಯಾಂಗನ್ನು ಬಂಧಿಸಿತ್ತು. ತನಿಖೆ ಬಳಿಕ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು. ಜೈಲಿನಿಂದ ಬಿಡುಗಡೆ ಬಳಿಕ ಆಟೋ ಚಾಲಕನನ್ನೇ ರಿಯಲ್ ಎಸ್ಟೇಟ್ ಉದ್ಯಮಿ, ಫೈನಾನ್ಷಿಯರ್ ಎಂದು ಭಾವಿಸಿ ಕೊಲೆ ಮಾಡಿ ಇದೀಗ ಸಿಕ್ಕಿಬಿದ್ದಿದ್ದಾರೆ.
ತನಗೆ ಪರಿಚಿತ ಫೈನಾನ್ಷಿಯರ್ ವಿಜಯ್ ಕುಮಾರ್ ಬಳಿ ಕೋಟ್ಯಂತರ ರೂಪಾಯಿ ಹಣ ಇರುವ ಬಗ್ಗೆ ಆರೋಪಿ ಅಂಬರೀಶ್ ತನ್ನ ಸ್ನೇಹಿತ ಕವಿರಾಜ್ ಗೆ ಮಾಹಿತಿ ನೀಡಿದ್ದ. ವಾಸ್ತವದಲ್ಲಿ ಆಟೋ ಚಾಲಕನಾಗಿದ್ದ ವಿಜಯ್ ಕುಮಾರ್ ತಾನು ಫೈನಾನ್ಷಿಯರ್ ಎಂದು ಬಿಂಬಿಸಿಕೊಳ್ಳಲು ಮೈತುಂಬಾ ನಕಲಿ ಚಿನ್ನದ ಒಡವೆಗಳನ್ನು ಧರಿಸಿದ್ದ. ಪ್ರಕರಣವೊಂದರಲ್ಲಿ ಜೈಲಿಗೆ ಹೋಗಿದ್ದ ವಿಜಯ್ ಕುಮಾರ್ಗೆ ಅಂಬರೀಶ್ ಜೈಲಿನಲ್ಲಿಯೇ ಪರಿಚಯವಾಗಿದ್ದ. ತಾನು ಫೈನಾನ್ಷಿಯರ್ ಎಂದು ಹೇಳಿಕೊಂಡಿದ್ದ. ಇದನ್ನೇ ಅಸಲಿ ಚಿನ್ನ ಎಂದು ನಂಬಿದ್ದ
ಸುಪಾರಿ ಹಂತಕರು ವಿಜಯ್ ಕುಮಾರ್ನನ್ನು ರಿಯಲ್ ಎಸ್ಟೇಟ್ ವಿಚಾರವಾಗಿ ಹೊಸೂರಿಗೆ ಕರೆಸಿಕೊಂಡು ಅಪಹರಣ ಮಾಡಿದ್ದಾರೆ.
Recommended Video
ಕೃಷ್ಣಗಿರಿ ಅರಣ್ಯಕ್ಕೆ ಕರೆದೊಯ್ದ ವೇಳೆ ಆಟೋ ಚಾಲಕ ಎಂಬುದು ಗೊತ್ತಾಗಿ ವಿಜಯ್ ಕುಮಾರ್ ನನ್ನು ಕೊಲೆ ಮಾಡಿ ದೇಹವನ್ನು ಬಿಸಾಡಿದ್ದರು. ಅತ್ತಿಬೆಲೆ ಪೊಲೀಸರು ಅಪರಿಚಿತ ಶವ ಪತ್ತೆ ಪ್ರಕರಣ ದಾಖಲಿಸಿಕೊಂಡಿದ್ದರು.ತನಿಖೆ ನಡೆಸಿದಾಗ ರವಿಪೂಜಾರಿ ಸಹಚರ ಕವಿರಾಜ್ ಮತ್ತು ಟೀಂ ಹಣಕ್ಕಾಗಿ ಆಟೋಚಾಲಕನನ್ನೇ ಫೈನಾನ್ಷಿಯರ್ ಎಂದು ಭಾವಿಸಿ ಕೊಲೆ ಮಾಡಿದ್ದಾರೆ. ಈ ಪ್ರಕರಣದ ಕೊಲೆಗೂ ಮುನ್ನ ಅಂಬರೀಶ್ ಮತ್ತು ಸಹಚರರು ಸರ್ಜಾಪುರದಲ್ಲಿ ವ್ಯಕ್ತಿಯನ್ನು ಕೊಲೆ ಮಾಡಿದ್ದಾರೆ. ಇದೀಗ ಎರಡು ಕೊಲೆ ಪ್ರಕರಣವನ್ನು ತನಿಖೆ ನಡೆಸುತ್ತಿದ್ದಾರೆ.