ಬೆಂಗಳೂರಿನಲ್ಲಿ ಆಂಧ್ರದ ಮಾಜಿ ಸಿಎಂ ಚಂದ್ರಬಾಬು ನಾಯ್ಡು ಮತ್ತು ನಟ ಜೂನಿಯರ್ ಎನ್ಟಿಆರ್, ಕಾರಣ ಇಲ್ಲಿದೆ
ಬೆಂಗಳೂರಿಗೆ ಭಾನುವಾರ ಆಂಧ್ರ ಪ್ರದೇಶದ ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಮತ್ತು ನಟ ಜೂನಿಯರ್ ಎನ್ಟಿಆರ್ ಬಂದಿದ್ದು, ಕಾರಣ ಇಲ್ಲಿದೆ.
ಬೆಂಗಳೂರು, ಜನವರಿ. 29: ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಮತ್ತು ತೆಲುಗು ದೇಶಂ ಪಕ್ಷದ ಮುಖ್ಯಸ್ಥ ಚಂದ್ರಬಾಬು ನಾಯ್ಡು ಮತ್ತು ತೆಲುಗು ನಟ ಜೂನಿಯರ್ ಎನ್ಟಿಆರ್ ಬೆಂಗಳೂರಿಗೆ ಭೇಟಿ ನೀಡಿದ್ದಾರೆ.
ಶುಕ್ರವಾರ ಹೃದಯಾಘಾತಕ್ಕೆ ಒಳಗಾಗಿ ಬೆಂಗಳೂರಿನ ನಾರಾಯಣ ಹೃದಯಾಲಯದಲ್ಲಿ ಚಿಕಿತ್ಸೆ ಪಡೆಯುತ್ತಿರುವ ತೆಲುಗು ಚಿತ್ರ ನಟ, ರಾಜಕಾರಣಿ ನಂದಮೂರಿ ತಾರಕ ರತ್ನ ಅವರ ಆರೋಗ್ಯ ವಿಚಾರಣೆಗೆ ಭೇಟಿ ನೀಡಿದ್ದಾರೆ. ತಾರಕ ರತ್ನ ಅವರ ಆರೋಗ್ಯದ ಬಗ್ಗೆ ವೈದ್ಯರೊಂದಿಗೆ ಚರ್ಚಿಸಿ, ಕುಟುಂಬ ಸದಸ್ಯರನ್ನು ಭೇಟಿಯಾಗಿದ್ದಾರೆ.
RRR ಐತಿಹಾಸಿಕ ಗೆಲುವು: ಆರ್ಆರ್ಆರ್ ಚಿತ್ರದ ಈ ಹಾಡಿಗೆ 'Golden Globes 2023' ಅವಾರ್ಡ್
ನಟ, ರಾಜಕಾರಣಿ ನಂದಮೂರಿ ತಾರಕ ರತ್ನ ಅವರು ಜನವರಿ 27ರಂದು ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರ ಪುತ್ರ ನಾರಾ ಲೋಕೇಶ್ ಅವರ ಪಾದಯಾತ್ರೆಯ ಕುಸಿದು ಬಿದ್ದಿದ್ದರು. ಹೆಚ್ಚಿನ ಚಿಕಿತ್ಸೆಗಾಗಿ ತಡ ರಾತ್ರಿ ಆಂಧ್ರದ ಕುಪ್ಪಂನ ಪಿಇಎಸ್ ವೈದ್ಯಕೀಯ ಕಾಲೇಜ್ನಿಂದ ಬೆಂಗಳೂರಿಗೆ ಕರೆತರಲಾಗಿತ್ತು.
ಟಿಡಿಪಿಯ ಅಧಿಕೃತ ಹ್ಯಾಂಡಲ್ನಲ್ಲಿರುವ ಪೋಸ್ಟ್ನಲ್ಲಿ, "ಟಿಡಿಪಿ ನಾಯಕ ಚಂದ್ರಬಾಬು ನಾಯ್ಡು ಬೆಂಗಳೂರಿನ ನಾರಾಯಣ ಹೃದಯಾಲಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ನಂದಮೂರಿ ತಾರಕರತ್ನ ಅವರನ್ನು ಭೇಟಿ ಮಾಡಿದ್ದಾರೆ. ತಾರಕರತ್ನ ಅವರಿಗೆ ನೀಡುತ್ತಿರುವ ಚಿಕಿತ್ಸೆ ಕುರಿತು ವೈದ್ಯರೊಂದಿಗೆ ಮಾತನಾಡಿದರು. ನಂತರ ಚಂದ್ರಬಾಬು ಅವರು ತಾರಕರತ್ನ ಅವರ ಪತ್ನಿ ಅಲೇಖ್ಯ, ತಂದೆ ಮೋಹನ ಕೃಷ್ಣ ಮತ್ತು ಇತರ ಕುಟುಂಬ ಸದಸ್ಯರೊಂದಿಗೆ ಮಾತನಾಡಿ ಧೈರ್ಯ ಹೇಳಿದ್ದಾರೆ" ಎಂದು ಟ್ವೀಟ್ ಮಾಡಿದೆ.
ಭಾನುವಾರ ನಟ ಜೂನಿಯರ್ ಎನ್ಟಿಆರ್ ಕೂಡ ಹೈದರಾಬಾದ್ನಿಂದ ಬೆಂಗಳೂರಿಗೆ ತಮ್ಮ ಸೋದರ ಸಂಬಂಧಿ ತಾರಕ ರತ್ನ ಅವರನ್ನು ಭೇಟಿ ಮಾಡಲು ಧಾವಿಸಿದ್ದು, ನಟ ಮತ್ತು ಕುಟುಂಬದವರನ್ನು ಆರೋಗ್ಯ ಸಚಿವ ಕೆ ಸುಧಾಕರ್ ಅವರು ವಿಮಾನ ನಿಲ್ದಾಣದಲ್ಲಿ ಬರಮಾಡಿಕೊಂಡಿದ್ದಾರೆ.
"ಬೆಂಗಳೂರಿನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಖ್ಯಾತ ನಟರಾದ ಶ್ರೀ ನಂದಮೂರಿ ತಾರಕ ರತ್ನ ಅವರನ್ನು ಕಾಣಲು ಕುಟುಂಬ ಸಮೇತ ಆಗಮಿಸಿರುವ ಅವರ ಸಹೋದರ ಸಂಬಂಧಿ ಖ್ಯಾತ ನಟರಾದ ಜೂನಿಯರ್ ಎನ್ಟಿಆರ್ ಅವರನ್ನು ಬೆಂಗಳೂರಿನಲ್ಲಿ ಬರಮಾಡಿಕೊಳ್ಳಲಾಯಿತು. ಬೆಂಗಳೂರಿನ ನಾರಾಯಣ ಹೃದಯಾಲಯಕ್ಕೆ ಅವರೊಂದಿಗೆ ಭೇಟಿ ನೀಡಿ ಅವರ ಸಹೋದರ ಸಂಬಂಧಿ ಖ್ಯಾತ ನಟರಾದ ನಂದಮೂರಿ ತಾರಕ ರತ್ನ ಅವರ ಆರೋಗ್ಯದ ಸ್ಥಿತಿಯ ಬಗ್ಗೆ ವೈದ್ಯರಿಂದ ಮಾಹಿತಿ ಪಡೆಯಲಾಯಿತು" ಎಂದು ಸಚಿವ ಸುಧಾಕರ್ ಟ್ವೀಟ್ ಮಾಡಿದ್ದಾರೆ.
"ನಿಮ್ಹಾನ್ಸ್ನ ನುರಿತ ತಜ್ಞ ವೈದ್ಯರಿಗೂ ಚಿಕಿತ್ಸೆ ನೀಡಲು ಸೂಚಿಸಲಾಗಿದ್ದು, ನಮ್ಮ ಸರ್ಕಾರದಿಂದ ಸಾಧ್ಯವಿರುವ ಎಲ್ಲಾ ಬೆಂಬಲವನ್ನು ನೀಡಲಾಗುತ್ತಿದೆ. ನಂದಮೂರಿ ತಾರಕ ರತ್ನ ಅವರು ಶೀಘ್ರ ಗುಣಮುಖರಾಗಲೆಂದು ಆ ಭಗವಂತನಲ್ಲಿ ಪ್ರಾರ್ಥಿಸುತ್ತೇನೆ" ಎಂದು ಹಾರೈಸಿದ್ದಾರೆ
ನಂದಮೂರಿ ತಾರಕ ರತ್ನ ಅವರ ಸ್ಥಿತಿ ಚಿಂತಾಜನಕವಾಗಿದೆ ಎಂದು ನಾರಾಯಣ ಹೃದಯಾಲಯ ಶನಿವಾರ ಆರೋಗ್ಯ ಬುಲೆಟಿನ್ನಲ್ಲಿ ಪ್ರಕಟಿಸಿದೆ.