"170 ಎಕರೆಯಲ್ಲಿ ಬೆಂಗಳೂರು ಉತ್ತರ ವಿವಿ ಸ್ಥಾಪನೆ''
ಬೆಂಗಳೂರು, ಫೆಬ್ರವರಿ 15: ಬೆಂಗಳೂರು ಉತ್ತರ ವಿವಿಗೆ 170 ಎಕರೆ ಜಾಗವನ್ನು ನಿಗದಿ ಮಾಡಲಾಗಿದೆ. ಆದರೆ ಜಾಗದ ಸಂಬಂಧ ಕೆಲವು ಸಮಸ್ಯೆಗಳಿದ್ದು, ಅದರ ನಿವಾರಣೆಗೆ ಪರಿಹಾರ ಕಂಡುಕೊಳ್ಳುವ ಕುರಿತು ಸಭೆ ನಡೆಸಿದ್ದೇನೆ ಎಂದು ಡಿಸಿಎಂ ಹಾಗೂ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್ ಅಶ್ವಥ್ ನಾರಾಯಣ ತಿಳಿಸಿದರು.
ವಿಕಾಸಸೌಧದಲ್ಲಿ ಸೋಮವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, 53 ಎಕರೆಯಲ್ಲಿರುವ ಜನರಿಗೆ ಪರ್ಯಾಯ ವ್ಯವಸ್ಥೆ ಮಾಡಲು ಸೂಚನೆ ನೀಡಲಾಗಿದೆ. ಇನ್ನೊಂದು ತಿಂಗಳಲ್ಲಿ ಪರ್ಯಾಯ ವ್ಯವಸ್ಥೆ ಮಾಡುತ್ತೇವೆ ಎಂದು ತಿಳಿಸಿದರು.
ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆಗೆ ತಿರುಗೇಟು ಕೊಟ್ಟ ಶಿಕ್ಷಣ ಸಚಿವ ಸುರೇಶ್ ಕುಮಾರ್!
ಒಟ್ಟು 170 ಎಕರೆಯಲ್ಲಿ ಬೆಂಗಳೂರು ಉತ್ತರ ವಿಶ್ವವಿದ್ಯಾಲಯ ಜಂಗಮಕೋಟೆಯಲ್ಲಿ ಸ್ಥಾಪನೆ ಮಾಡುತ್ತೇವೆ ಎಂದು ಅಶ್ವಥ್ ನಾರಾಯಣ ಹೇಳಿದರು.
ಸದ್ಯ ಒಂದೂವರೆ ಕೋಟಿ ಜನ ಬೆಂಗಳೂರು ನಗರದಲ್ಲಿದ್ದಾರೆ. ಬೆಂಗಳೂರಿನಲ್ಲಿರುವ ಕಾಲೇಜುಗಳು ಸಾಲುತ್ತಿಲ್ಲ. ಪದವಿ ಕಾಲೇಜುಗಳು ಕಡಿಮೆ ಇವೆ. ಹೀಗಾಗಿ, ಬೆಂಗಳೂರಿನ ಎಲ್ಲ ಕ್ಷೇತ್ರಗಳಲ್ಲಿ ಕಾಲೇಜು ಆರಂಭ ಮಾಡುತ್ತೇವೆ ಎಂದರು.
ಬೆಂಗಳೂರಿನಲ್ಲಿರುವ ಜಮೀನುಗಳನ್ನು ಪಡೆದುಕೊಂಡು ಕಾಲೇಜು ಸ್ಥಾಪನೆ ಮಾಡುತ್ತೇವೆ. ಬೆಂಗಳೂರಿನ 28 ಕ್ಷೇತ್ರಗಳಲ್ಲಿ ಕಾಲೇಜು ಪ್ರಾರಂಭಿಸಲು ನಿರ್ಧರಿಸಲಾಗಿದೆ. ಸಾರ್ವಜನಿಕ ವಿಶ್ವವಿದ್ಯಾಲಯಗಳ ಅಡಿ ಕಾಲೇಜುಗಳು ಪ್ರಾರಂಭ ಮಾಡಲಾಗುತ್ತದೆ.
Recommended Video
ಬೆಂಗಳೂರಿನಲ್ಲಿರುವ ಕ್ಷೇತ್ರಗಳಲ್ಲಿ ಮೂರು, ಐದು ಎಕರೆ ಜಾಗಗಳ ಮಾಹಿತಿ ಪಡೆಯುತ್ತೇವೆ. ರಾತ್ರೋರಾತ್ರಿ ಕಾಲೇಜು ಪ್ರಾರಂಭ ಮಾಡಲು ಸಾಧ್ಯವಿಲ್ಲ. ಹಂತ ಹಂತವಾಗಿ ಪದವಿ ಹಾಗೂ ಸ್ನಾತಕೋತ್ತರ ಕಾಲೇಜುಗಳನ್ನು ಆರಂಭ ಮಾಡುತ್ತೇವೆ ಎಂದು ಡಿಸಿಎಂ ಹಾಗೂ ಉನ್ನತ ಶಿಕ್ಷಣ ಸಚಿವ ಅಶ್ವಥ್ ನಾರಾಯಣ ಭರವಸೆ ನೀಡಿದರು.