''ಶ್ರೀರಾಮುಲು ವಿರುದ್ಧ ಏಕೆ ಕ್ರಮ ಇಲ್ಲ? ನಾವು ಜನರಿಗಾಗಿ ಪ್ರತಿಭಟನೆ ಮಾಡಿದ್ದೀವಿ''
ಬೆಂಗಳೂರು, ಜೂನ್ 30: 'ಆರೋಗ್ಯ ಸಚಿವ ಶ್ರೀರಾಮುಲು ವಿರುದ್ಧ ಕ್ರಮ ತೆಗೆದುಕೊಳ್ಳಲ್ಲ, ಆದರೆ, ಜನರ ಪರ ಪ್ರತಿಭಟನೆ ಮಾಡಿದ ನಮ್ಮ ವಿರುದ್ಧ ಕ್ರಮ ತೆಗೆದುಕೊಳ್ತಾರಾ?' ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಬುಧವಾರ ಪ್ರಶ್ನಿಸಿದ್ದಾರೆ.
ಕಳೆದ ಇಪತ್ತು ದಿನಗಳಿಂದ ದೇಶದಲ್ಲಿ ತೈಲ ದರ ಏರಿಕೆಯಾಗುತ್ತಿದೆ. ಸತತವಾಗಿ ಪೆಟ್ರೋಲ್, ಡಿಸೇಲ್ ಬೆಲೆ ಹೆಚ್ಚಳ ವಿರೋಧಿಸಿದ ದೇಶಾದ್ಯಂತ ಕಾಂಗ್ರೆಸ್ ಪಕ್ಷ ಪ್ರತಿಭಟನೆ ಮಾಡಿದೆ. ಕರ್ನಾಟಕದಲ್ಲೂ ನಿನ್ನೆ ಕಾಂಗ್ರೆಸ್ ಪಕ್ಷದಿಂದ ಸೈಕಲ್ ಸವಾರಿ ಮೂಲಕ ಪ್ರತಿಭಟನೆ ಮಾಡಿದ್ದರು.
ವಿಪಕ್ಷ ನಾಯಕ ಸಿದ್ದರಾಮಯ್ಯ, ಕಾಂಗ್ರೆಸ್ ಅಧ್ಯಕ್ಷ ಡಿಕೆ ಶಿವಕುಮಾರ್ ಸೇರಿದಂತೆ ಹಲವು ಮುಖಂಡರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು. ಈ ವೇಳೆ ಪ್ರತಿಭಟನೆಕಾರರು, ಸಾಮಾಜಿಕ ಅಂತರ ಕಾಯ್ದುಕೊಂಡಿಲ್ಲ, ಪ್ರತಿಭಟನೆಗಾಗಿ ಪೊಲೀಸರ ಬಳಿ ಅನುಮತಿಯೂ ಪಡೆದುಕೊಂಡಿಲ್ಲ ಎಂದು ಬಿಜೆಪಿ ನಾಯಕರು ವಾಗ್ದಾಳಿ ನಡೆಸಿದ್ದರು.

ಈ ಕುರಿತು ವಿಧಾನಸೌದಲ್ಲಿ ಪ್ರತಿಕ್ರಿಯೆ ನೀಡಿದ ಈಶ್ವರ್ ಖಂಡ್ರೆ ''ನಾವು ನಮಗಾಗಿ ಪ್ರತಿಭಟನೆ ಮಾಡಲಿಲ್ಲ. ಜನರಿಗಾಗಿ ನಾವು ಪ್ರತಿಭಟನೆ ಮಾಡಿದ್ದೇವೆ. ಪ್ರಜಾಪ್ರಭುತ್ವದಲ್ಲಿ ಪ್ರತಿಭಟನೆ ಮಾಡುವ ಹಕ್ಕಿದೆ. ದೂರು ಕೊಟ್ಟಿದ್ರೆ ಎದುರಿಸುವ ಶಕ್ತಿ ಇದೆ. ಪ್ರತಿಭಟನೆ ವೇಳೆ ಸಣ್ಣಪುಟ್ಟ ದೋಷಗಳು ನಡೀತವೆ. ಸರ್ಕಾರದ ಕಾರ್ಯಕ್ರಮಗಳಲ್ಲಿ ಇವೆಲ್ಲ ದೋಷ ಆಗ್ತವೆ'' ಎಂದಿದ್ದಾರೆ.
''ನಾವೂ ಸಾಮಾಜಿಕ ಅಂತರ ಕಾಪಾಡಲು ಸೂಚನೆ ಕೊಟ್ಟಿದ್ವಿ ಯಾಕೆ ಕ್ರಮ ತಗೊಳ್ಳಲ್ಲ? ಶ್ರೀರಾಮುಲು ದಿನಾ ಕಾರ್ಯಕ್ರಮ ನಡೆಸಿ ದೋಷ ಮಾಡ್ತಾರೆ. ಯಾಕೆ ರಾಮುಲು ವಿರುದ್ಧ ಕ್ರಮ ತಗೊಳ್ಳಲ್ಲ'' ಎಂದು ಕಾಂಗ್ರೆಸ್ ಶಾಸಕ ಈಶ್ವರ್ ಖಂಡ್ರೆ ಪ್ರಶ್ನಿಸಿದ್ದಾರೆ.

ಇನ್ನು ಕೊರೊನಾ ರೋಗಿಗಳ ಚಿಕಿತ್ಸೆಗೆ ಸಂಬಂಧಪಟ್ಟಂತೆ ಮಾತನಾಡಿದ ಖಂಡ್ರೆ, ''ಖಾಸಗಿ ಆಸ್ಪತ್ರೆಗಳಲ್ಲಿ 20 ಸಾವಿರ ಬೆಡ್ ಗಳಿವೆ. ಇದರಲ್ಲಿ ಸರ್ಕಾರ 10 ಸಾವಿರ ಬೆಡ್ ಗಳನ್ನಾದ್ರೂ ವಶಕ್ಕೆ ಪಡೆಯಲಿ. ಕೊರೊನಾ ನಿರ್ವಹಣೆಯಲ್ಲಿ ಸರ್ಕಾರ ಎಡವಿದೆ. ದಿನೇ ದಿನೇ ಸೋಂಕು ಹೆಚ್ಚಳವಾಗಿದೆ. ಪರೀಕ್ಷೆ ಸಾಮರ್ಥ್ಯ ಹೆಚ್ಚು ಮಾಡಬೇಕು. ಫಲಿತಾಂಶ ಬೇಗ ಬರುವಂತೆ ಕ್ರಮ ತಗೋಬೇಕಿದೆ'' ಎಂದಿದ್ದಾರೆ.












Click it and Unblock the Notifications